1989 ರಲ್ಲಿ ದೇವೇಗೌಡರನ್ನು ನಂಬಿ ರಾಜಕಾರಣ ಪ್ರವೇಶಿಸಿದ್ದೇನೆ.ಇಳಿ ವಯಸ್ಸಿನಲ್ಲಿರುವ ದೇವೇಗೌಡರ ಬೆನ್ನಿಗೆ ಚೂರಿ ಹಾಕಿ ದ್ರೋಹವೆಸಗಿದರೆ ದೇವರು ಒಳಿತು ಮಾಡುವುದಿಲ್ಲ ಎಂದು ಶಾಸಕ ಸಿ.ಎಸ್.ಪುಟ್ಟರಾಜು
ನುಡಿದರು.
ಮಂಡ್ಯ ತಾಲ್ಲೂಕಿನ ದುದ್ದ ಹೋಬಳಿಯ ಶಿವಳ್ಳಿ ಗ್ರಾಮದಲ್ಲಿ ಆಯೋಜಿಸಿದ್ದ ಪಂಚರತ್ನ ಯಾತ್ರೆಯ ಪೂರ್ವಭಾವಿ ಸಭೆ ಉದ್ಘಾಟಿಸಿ ಅವರು ಮಾತನಾಡಿದರು.
ದೇವೇಗೌಡರ ಉಸಿರು ಇರುವವರೆಗೂ ಜೆಡಿಎಸ್ ಪಕ್ಷ ಬಿಟ್ಟು ರಾಜಕಾರಣ ಮಾಡುವುದಿಲ್ಲ.ಅಂತಹ ಸಂದರ್ಭ ಬಂದರೆ ರಾಜಕಾರಣ ಬಿಡ್ತೀನೆ ಹೊರತು ದೇವೇಗೌಡರ ಬಿಟ್ಟು ಹೋಗಲ್ಲ. ಕ್ಷೇತ್ರದ ಜನರ ಋಣವನ್ನು ಅಂತರಾಳದಲ್ಲಿ ಇಟ್ಟುಕೊಂಡಿದ್ದೇನೆ. ಹಣ ಹಾಗೂ ಅಧಿಕಾರದ ಹಿಂದೆ ಬೀಳುವುದಿಲ್ಲ ಎಂದರು.
ಪಾಂಡವಪುರ ಹಾಗೂ ಮೇಲುಕೋಟೆ ವಿಧಾನಸಭಾ ಕ್ಷೇತ್ರಗಳ ಶಾಸಕನಾಗಿ, ಜಿಲ್ಲೆಯ ಸಂಸದ, ಉಸ್ತುವಾರಿ ಸಚಿವನಾಗಿ ಕಾರ್ಯನಿರ್ವಹಿಸುವ ಸುಯೋಗ ಒದಗಿಸಿಕೊಟ್ಟಿರುವ ಕ್ಷೇತ್ರವನ್ನು ಸಮಗ್ರವಾಗಿ ಅಭಿವೃದ್ಧಿಪಡಿಸಲು ಮಾಜಿ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯ, ಬಿ.ಎಸ್.ಯಡಿಯೂರಪ್ಪ ಸೇರಿದಂತೆ ಹಲವು ನಾಯಕರ ಸಹಕಾರ ಪಡೆದಿದ್ದೇನೆ. ಆದರೆ, ರಾಜಕೀಯವಾಗಿ ಜೆಡಿಎಸ್ ಪಕ್ಷ ಬಿಟ್ಟು ಕದಲುವ ಪ್ರಶ್ನೆಯೇ ಇಲ್ಲ ಎಂದರು.
2023ರ ಚುನಾವಣೆಯಲ್ಲಿ ಜೆಡಿಎಸ್ ಸ್ವಂತ ಬಲದಿಂದ ಅಧಿಕಾರಕ್ಕೆ ಬಂದು ಮುಖ್ಯಮಂತ್ರಿ ಗಾದಿಯಲ್ಲಿ ಕುಮಾರಸ್ವಾಮಿ ಕೂರುವುದನ್ನು ಯಾರಿಂದಲೂ ತಡೆಯಲು ಸಾಧ್ಯವಿಲ್ಲ. ಈ ಹಿನ್ನೆಲೆಯಲ್ಲಿ ಪಂಚರತ್ನಯಾತ್ರೆ ಯಶಸ್ವಿಗೆ ಕ್ಷೇತ್ರದ ಜನತೆ ಅಭೂತಪೂರ್ವ ಬೆಂಬಲ ನೀಡಬೇಕೆಂದು ಮನವಿ ಮಾಡಿದರು.
ಮನ್ಮುಲ್ ಅಧ್ಯಕ್ಷ ಬಿ.ಆರ್.ರಾಮಚಂದ್ರು,ಮಾಜಿ ಶಾಸಕ ಜಿ.ಬಿ.ಶಿವಕುಮಾರ್, ಬಾಲರಾಜ್,ವಿಶ್ವೇಶ್ವರಯ್ಯ, ಸುರೇಂದ್ರ ಮತ್ತಿತರರಿದ್ದರು.