ಸಂವಿಧಾನ ಬದಲಿಸಲು ಹೊರಟಿರುವ ಬಿಜೆಪಿ-ಜೆಡಿಎಸ್ ಮೈತ್ರಿ ಅಭ್ಯರ್ಥಿಗಳನ್ನು ಲೋಕಸಭಾ ಚುನಾವಣೆಯಲ್ಲಿ ಸೋಲಿಸುವ ಮೂಲಕ ಕಾಂಗ್ರೆಸ್ ಬೆಂಬಲಿಸಿ, ಮಂಡ್ಯ ಕ್ಷೇತ್ರದಲ್ಲಿ ಸ್ಟಾರ್ ಚಂದ್ರು ಅವರನ್ನು ಬೆಂಬಲಿಸಿ ಎಂದು ದಲಿತ ಸಂಘರ್ಷ ಸಮಿತಿ ರಾಜ್ಯ ಸಂಚಾಲಕ ಡಿ.ಜಿ.ಸಾಗರ್ ನರೋಣಾ ಮನವಿ ಮಾಡಿದರು.
ಮಂಡ್ಯದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಸಂವಿಧಾನ ಮತ್ತು ಪ್ರಜಾಪ್ರಭುತ್ವಕ್ಕೆ ಗೌರವ ನೀಡುವ, ದುರ್ಬಲ ವರ್ಗಗಳ ಹಿಂದುಳಿದವರ ಮತ್ತು ಅಲ್ಪಸಂಖ್ಯಾತರ ಹಿತ ಕಾಪಾಡುವ ವಿಶೇಷವಾಗಿ ಕರ್ನಾಟಕದಲ್ಲಿ ಐದು ಗ್ಯಾರಂಟಿ ಯೋಜನೆ ಜಾರಿ ಮಾಡುವುದರ ಮುಖಾಂತರ ರಾಜ್ಯದಲ್ಲಿ ಯಾರು ಹಸಿವಿನಿಂದ ಇರಬಾರದೆಂದು ಮತ್ತು ಪ್ರತಿ ಬಡ ಕುಟುಂಬ ಆರ್ಥಿಕತೆಯಿಂದ ಸದೃಢತೆ ಮಾಡಲು ಪಣತೊಟ್ಟು ಜಾರಿ ಮಾಡುತ್ತಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಆಡಳಿತದ ವೈಖರಿ ಹೆಮ್ಮೆ ಎನಿಸಿದೆ ಎಂದು ಶ್ಲಾಘಿಸಿದರು.
2023ರಲ್ಲಿ ನಡೆದ ಕರ್ನಾಟಕ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿಯನ್ನು ಸೋಲಿಸಿ ಅಧಿಕಾರದಿಂದ ದೂರ ಇಟ್ಟೆವು ಕೆಟ್ಟ ರೀತಿಯಲ್ಲಿ ಸೋಲಿಸಲಾಗಿತ್ತು. ಇದು ಭರವಸೆ ಹುಟ್ಟಿಸಿದೆ. ಲೋಕಸಭೆಯಲ್ಲಿರುವ ಬಹುಮತವನ್ನು ಬಳಸಿಕೊಂಡು ನಿರಂಕುಶ ಸರ್ವಾಧಿಕಾರದತ್ತ ಸಾಗಿರುವ ಕೇಂದ್ರ ಸರ್ಕಾರ ಐಟಿ, ಇಡಿ, ಸಿಬಿಐ ಸಂಸ್ಥೆಗಳನ್ನು ಹಂತಹಂತವಾಗಿ ನಿಷ್ಕ್ರಿಯಗೊಳಿಸಲು ಹೊರಟಿದೆ ಎಂದು ಆರೋಪಿಸಿದರು.
ಮುಖಂಡರಾದ ವಿಜಯಪುರ ವೈ.ಸಿ.ಮಯೂರ, ಮಲ್ಲೇಶ್ ಚುಂಚನಹಳ್ಳಿ, ಎಂ.ವಿ.ಕೃಷ್ಣ, ಕೆ.ಜಿ.ಶಿವಮೂರ್ತಿ, ಸ್ವಾಮಿ ಡಿ ಹೊಸೂರು, ಸಂತೋಷ್ ಇದ್ದರು.