ಮೈಸೂರು ಸಕ್ಕರೆ ಕಂಪನಿಯ ನಿವೃತ್ತ ನೌಕರರಿಗೆ ನ್ಯಾಯಬದ್ಧವಾಗಿ ಬರಬೇಕಾಗಿರುವ ದ್ವಿಪಕ್ಷೀಯ ಹಾಗೂ ತ್ರಿಪಕ್ಷೀಯ ವೇತನ ಸಮಿತಿಯು ಮಾಡಲಾಗಿರುವ ವೇತನ ಪರಿಷ್ಕರಣೆಯನ್ನು ಜಾರಿಗೊಳಿಸಬೇಕೆಂದು ಹೈಕೋರ್ಟ್ ತೀರ್ಪು ನೀಡಿದ್ದು, ಈ ಹಣವನ್ನು ಕೂಡಲೇ ಪಾವತಿಸುವಂತೆ ಆಗ್ರಹಿಸಿ ಜ.11ರಂದು ಬೆಳಿಗ್ಗೆ ಅಹೋರಾತ್ರಿ ಪ್ರತಿಭಟನಾ ಧರಣಿ ನಡೆಸಲಾಗುವುದು ಎಂದು ಕರ್ನಾಟಕ ರಕ್ಷಣಾ ವೇದಿಕೆ (ವೀರ ಕನ್ನಡಿಗರ ಘರ್ಜನೆ) ಜಿಲ್ಲಾಧ್ಯಕ್ಷ ಎಂ.ಸಿ.ನವೀನ್ ತಿಳಿಸಿದರು.
ಮಂಡ್ಯದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಹೈಕೋರ್ಟ್ ತೀರ್ಪನ್ನು ಒಂದು ತಿಂಗಳೊಳಗೆ ಜಾರಿಗೊಳಿಸುವಂತೆ ಮೈಷುಗರ್ ಕಂಪನಿಯ ಆಡಳಿತ ಮಂಡಳಿ ತಿಳಿಸಿದೆ, ಆದರೆ ಇದುವರೆಗೆ ಬಾಕಿ ಪಾವತಿ ಮಾಡಿಲ್ಲ ಎಂದು ದೂರಿದರು.
ಮೈಷುಗರ್ ನಿವೃತ್ತ ನೌಕರ ಜಿ.ಶಿವಲಿಂಗಯ್ಯ ಮಾತನಾಡಿ, ಕಂಪನಿಯಿಂದ ಸಾವಿರಾರು ನೌಕರರು ನಿವೃತ್ತರಾಗಿದ್ದಾರೆ, ಈ ಪೈಕಿ ಹಲವು ನಿವೃತ್ತ ನೌಕರರು ನಿಧನರಾಗಿದ್ದಾರೆ. ಅವರ ಕುಟುಂಬಗಳು ಆರ್ಥಿಕ ಸಂಕಷ್ಟದಲ್ಲಿವೆ, ಕಂಪನಿಗಾಗಿ ದುಡಿದ ನೌಕರರಿಗೆ ಸರಿಯಾದ ವೇತನ ನೀಡಲಿಲ್ಲ, ಸರಿಯಾದ ಪಿಂಚಣಿಯನ್ನು ನೀಡುತ್ತಿಲ್ಲ, ಹೀಗಾಗಿ ಇಂದು ನಿವೃತ್ತ ನೌಕರರು ಸಂಕಷ್ಟದಲ್ಲಿದ್ದಾರೆ. ಹಲವಾರು ತಿಂಗಳುಗಳಿಂದ ನಾವು ಕಂಪನಿಗೆ ಮನವಿ ಸಲ್ಲಿಸುತ್ತಾ ಬಂದಿದ್ದರೂ ನಮ್ಮ ಬೇಡಿಕೆಗಳು ಈಡೇರಿಲ್ಲ ಎಂದು ದೂರಿದರು.
ಒಟ್ಟು ಸಾವಿರಾರು ನಿವೃತ್ತ ನೌಕರರರಿಗೆ ಸುಮಾರು 6 ರಿಂದ 7 ಕೋಟಿ ರೂ. ಬಾಕಿ ಪಾವತಿಸಬೇಕಿದೆ. ಇದುವರೆಗೆ ಆಡಳಿತ ನಡೆಸಿದ ಎಲ್ಲಾ ಅಧ್ಯಕ್ಷರು ಹಾಗೂ ಆಡಳಿತ ಮಂಡಳಿಯವರು ನಿವೃತ್ತ ನೌಕರರನ್ನು ವಂಚಿಸುವುದರ ಜೊತೆಗೆ ಕಂಪನಿಯಲ್ಲಿ ಭ್ರಷ್ಟಾಚಾರ ನಡೆಸಿ, ಕಂಪನಿಯನ್ನು ಅಧೋಗತಿಗೆ ತಳ್ಳಿದ್ದಾರೆಂದು ದೂರಿದರು.
ಗೋಷ್ಠಿಯಲ್ಲಿ ಮುಖಂಡರಾದ ವೆಂಕಟೇಶ್, ಅಂಕಯ್ಯ, ಮಾಧುಸ್ವಾಮಿ, ಶಿವಕೆಂಪಯ್ಯ, ಎನ್.ಬಿ.ನಾರಾಯಣ ಉಪಸ್ಥಿತರಿದ್ದರು.