ವಿಶ್ವ ರೈತಚೇತನ, ರೈತ ನಾಯಕ ಪ್ರೊ ಎಂ ಡಿ ನಂಜುಂಡಸ್ವಾಮಿ ಅವರ ರೈತಸಂಘಟನೆ ಮೂಲಕ ನಡೆಸಿದ ರೈತಚಳವಳಿಯ ಘಟನಾವಳಿ ಆಧಾರಿತ ನಾಟಕ “ಡೈರೆಕ್ಟ್ ಆ್ಯಕ್ಷನ್ ” ನಾಟಕದ 11ನೇ ಪ್ರದರ್ಶನವು ಫೆ.27ರಂದು ಸಂಜೆ 6 ಗಂಟೆಗೆ ಮಂಡ್ಯನಗರದ ಪಿಇಎಸ್ ಕಾಲೇಜಿನ ವಿವೇಕಾನಂದ ರಂಗಮಂದಿರದಲ್ಲಿ ನಡೆಯಲಿದೆ ಎಂದು ಭಾರತೀಯ ಮೆಡಿಕಲ್ ಕೌನ್ಸಿಲ್ ನಿರ್ದೇಶಕ ಡಾ.ಹೆಚ್.ಎನ್.ರವೀಂದ್ರ ತಿಳಿಸಿದರು.
ಮಂಡ್ಯದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮಂಡ್ಯ ಜಿಲ್ಲಾ ವಿವಿಧ ಸಂಘಟನೆಗಳ ಒಕ್ಕೂಟದ ವತಿಯಿಂದ ನಾಟಕ ಪ್ರದರ್ಶನವನ್ನು ಆಯೋಜಿಸಲಾಗಿದೆ, ಎಲ್ಲರಿಗೂ ಉಚಿತ ಪ್ರದರ್ಶನವಿರುತ್ತದೆ ಎಂದರು.
ನಟರಾಜ್ ಹುಳಿಯಾರ್ ನಾಟಕ ರಚನೆ ಮಾಡಿದ್ದು, ಕಬ್ಬಡ್ಡಿ ನರೇಂದ್ರ ಬಾಬು ನಿರ್ದೆಶಿಸಿದ್ದಾರೆ. ಚಲನಚಿತ್ರ ನಟ ಸಂಪತ್ ಮೈತ್ರೇಯಾ ಪ್ರೊ.ಎಂಡಿಎನ್ ಪಾತ್ರ ನಿರ್ವಹಿಸುತ್ತಿದ್ದು, ಬೆಂಗಳೂರಿನ ನಗ್ನ ಥಿಯೇಟರ್ ತಂಡದ ಕಲಾವಿದರ ತಂಡ ನಾಟಕ ಪ್ರಸ್ತುತ ಪಡಿಸಲಿದೆ ಎಂದರು.
ಪ್ರೊ.ಎಂ.ಡಿ. ನಂಜುಂಡಸ್ವಾಮಿಯವರ ಪುತ್ರಿ ಚುಕ್ಕಿ ನಂಜುಂಡಸ್ವಾಮಿ ಮತ್ತು ಪುತ್ರ ಪಚ್ಚೆ ನಂಜುಂಡಸ್ವಾಮಿ ಅವರು ನಾಟಕ ಪ್ರದರ್ಶನ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದು, ಮಂಡ್ಯ ಜಿಲ್ಲಾ ಯುವ ಜನರು ಅದರಲ್ಲೂ ವಿದ್ಯಾರ್ಥಿ ನಾಯಕರು, ವಿವಿಧ ಸಂಘಟನೆಗಳ ಮುಖಂಡರು, ರೈತರು ಹಾಗೂ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ನಾಟಕ ವೀಕ್ಷಣೆ ಮಾಡಬೇಕೆಂದು ಮನವಿ ಮಾಡಿದರು.
ಗೋಷ್ಠಿಯಲ್ಲಿ ಮೈಷುಗರ್ ಕಬ್ಬು ಒಪ್ಪಿಗೆದಾರರ ಸಂಘದ ಅಧ್ಯಕ್ಷ ಕೃಷ್ಣ, ಕರುನಾಡು ಸೇವಕರು ಸಂಘಟನೆಯ ಅಧ್ಯಕ್ಷ ನಾಗಣ್ಣಗೌಡ, ವಕೀಲ ಸುಂಡಹಳ್ಳಿ ಮಂಜುನಾಥ್, ಮುಖಂಡರಾದ ಪಿ.ಕೆ.ನಾಗಣ್ಣ ಹಾಗೂ ಸೋಮು ಸ್ವರ್ಣಸಂದ್ರ ಉಪಸ್ಥಿತರಿದ್ದರು.