ಮಂಡ್ಯ ತಾಲೂಕು ದುದ್ದ ಹೋಬಳಿ ಸೌದೆನಹಳ್ಳಿ ಗ್ರಾಮದ ವಿದ್ಯಾರ್ಥಿ ದಿವಂಗತ ಶಶಿಧರ್ ಇವರ ಕುಟುಂಬಕ್ಕೆ ಕರ್ನಾಟಕ ಸರ್ಕಾರದ ವಿದ್ಯಾರ್ಥಿ ಕ್ಷೇಮಾಭಿವೃದ್ಧಿ ನಿಧಿಯಿಂದ ರೂ. 1,25 ಲಕ್ಷ ಸಹಾಯಧನ ಚೆಕ್ಕನ್ನು ವಿದ್ಯಾರ್ಥಿ ಯುವ ಮೋರ್ಚಾದ ರಾಜ್ಯಾಧ್ಯಕ್ಷ ಜೀವನ್, ಮಂಡ್ಯ ಜಿಲ್ಲಾ ಪದಾಧಿಕಾರಿಗಳು ಗಣ್ಯರ ಸಮಕ್ಷಮದಲ್ಲಿ ವಿತರಿಸಿದರು.
ಮಂಡ್ಯ ತಾಲೂಕು ದುದ್ದ ಹೋಬಳಿ ಸೌದೇನಹಳ್ಳಿ ಗ್ರಾಮದ ಮಾದೇವಪ್ಪನವರ ಮಗ ಶಶಿಧರ್ ಎಂಬ ವಿದ್ಯಾರ್ಥಿಯು ಮಂಡ್ಯ ಪ್ರಥಮ ದರ್ಜೆ ಕಾಲೇಜಿನಲ್ಲಿ ಎಂ.ಕಾಂ ವ್ಯಾಸಂಗ ಮಾಡುತ್ತಿದ್ದು, ಕಳೆದ ಡಿ.9,2022 ರಂದು ದುದ್ದ ವಿಸಿ ನಾಲೆಗೆ ಆಕಸ್ಮಿಕವಾಗಿ ಬಿದ್ದು ಮರಣ ಹೊಂದಿದ್ದರು. ಕುಟುಂಬಕ್ಕೆ ಆಶ್ರಯನಾಗಿದ್ದ ಮಗ ತೀರಿಕೊಂಡ ನಂತರ ತಂದೆ ತಾಯಿಗೆ ಆಘಾತಕ್ಕೊಳಗಾಗಿದ್ದರು.
ಈ ವಿಷಯ ತಿಳಿದ ಅಖಿಲ ಕರ್ನಾಟಕ ವಿದ್ಯಾರ್ಥಿ ಯುವ ಮೋರ್ಚಾದ ರಾಜ್ಯಾಧ್ಯಕ್ಷ ಜೀವನ್, ಮಂಡ್ಯ ಜಿಲ್ಲಾಧ್ಯಕ್ಷ ಚೇತನ್ ಕುಮಾರ್ ಮತ್ತಿತರರು ಶಶಿಧರ್ ಮನೆಗೆ ಭೇಟಿ ನೀಡಿ, ಅವರಿಗೆ ಸಾಂತ್ವಾನ ಹೇಳಿ, ಸರ್ಕಾರದಿಂದ ಪರಿಹಾರ ಕೊಡಿಸುವ ಭರವಸೆ ನೀಡಿದ್ದರು. ಅದರಂತೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಶಿಕ್ಷಣ ಸಚಿವರ ಗಮನ ಸೆಳೆದು ವಿದ್ಯಾರ್ಥಿ ಕ್ಷೇಮಾಭಿವೃದ್ಧಿಯಿಂದ 1.25 ಲಕ್ಷ ರೂ. ಪರಿಹಾರ ದೊರಕಿಸಿಕೊಡುವಲ್ಲಿ ಯಶಸ್ವಿಯಾಗಿದ್ದಾರೆ.
ಈ ಸಂದರ್ಭದಲ್ಲಿ ಕಾಯಕಯೋಗಿ ಫೌಂಡೇಶನ್ ಅಧ್ಯಕ್ಷ ಎಂ,ಶಿವಕುಮಾರ್ ವಿದ್ಯಾರ್ಥಿ ಯುವ ಮೋರ್ಚಾ ಸಂಘಟನೆಯ ಜಿಲ್ಲಾಧ್ಯಕ್ಷ ಚೇತನ್ ಕುಮಾರ್, ಲಿಂಗಾಯಿತ ಮಹಾಸಭಾ ಜಿಲ್ಲಾ ಉಪಾಧ್ಯಕ್ಷ, ಎಂ ಬೆಟ್ಟಹಳ್ಳಿ ಮಂಜುನಾಥ್, ಸಾಹಿತಿ ದೇವಪ್ಪ ಮತ್ತಿತರರು ಉಪಸ್ಥಿತರಿದ್ದರು.