ಮಂಡ್ಯ ತಾಲೂಕು ಕಚೇರಿಯಲ್ಲಿ ಜನ ಸಾಮಾನ್ಯ ಕೆಲಸಗಳು ಸಮರ್ಪಕವಾಗಿ ನಡೆಯುತ್ತಿಲ್ಲ ಎಂಬ ದೂರಿನ ಮಂಗಳವಾರ ಬೆಳಿಗ್ಗೆ ಜಿಲ್ಲಾಧಿಕಾರಿ ಡಾ. ಕುಮಾರ ಅವರು ಕಚೇರಿಗೆ ದಿಢೀರ್ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ರೈತರು ಹಾಗೂ ಸಾರ್ವಜನಿಕರಿಂದ ವ್ಯಾಪಕವಾಗಿ ದೂರು ಕೇಳಿ ಬಂದ ಹಿನ್ನೆಲೆಯಲ್ಲಿ ತಹಶಿಲ್ದಾರ್ ಸಮ್ಮುಖದಲ್ಲಿ ಕಡತಗಳ ಪರಿಶೀಲನೆ ನಡೆಸಿದ ಅವರು, ಕಚೇರಿ ಅಧಿಕಾರಿಗಳು, ನೌಕರರು ತಕ್ಷಣ ಸಾರ್ವಜನಿಕರಿಗೆ ಸ್ಪಂದಿಸಬೇಕೆಂದು ತಾಕೀತು ಮಾಡಿದರು.
ಗ್ರಾಮಾಂತರ ಪ್ರದೇಶದಲ್ಲಿ ಕೆಲಸ ನಿರ್ವಹಿಸಬೇಕಾಗಿದ್ದ ಗ್ರಾಮ ಲೆಕ್ಕಾಧಿಕಾರಿ(VA) ಮತ್ತು ಕಂದಾಯ ನಿರೀಕ್ಷಣಾಧಿಕಾರಿ(RI)ಗಳು ನಗರ ಪ್ರದೇಶದಲ್ಲಿ ಬಾಡಿಗೆಗೆ ಆಫೀಸ್ ಪಡೆದು ಕೆಲಸ ನಿರ್ವಹಿತ್ತಿರುವುದು ಕಂಡು ಬಂದಿದ್ದು, ತಕ್ಷಣ ಅವರ ಎಲ್ಲಾ ಮಾಹಿತಿಗಳನ್ನು ಕಲೆ ಹಾಕಿ ತಮಗೆ ನೀಡುವಂತೆ ಸೂಚಿಸಿದರು.
ನಕಲಿ ದಾಖಲೆಗಳನ್ನು ಸೃಷ್ಟಿಸಿ ಜಮೀನುಗಳನ್ನು ಮಂಜೂರು ಮಾಡಿರುವುದು ಮತ್ತು ದಾಖಲೆಗಳು ಕಳವು ಆಗಿರುವುದು ಕಂಡುಬಂದಿದ್ದು, ತಕ್ಷಣ ಎಲ್ಲ ಮಾಹಿತಿಗಳು ಪರಿಶೀಲಿಸಿ ತಲುಪಿಸಬೇಕೆಂದು ಅಧಿಕಾರಿಗಳಿಗೆ ಸೂಚನೆ ನೀಡಿದರು.
ಕಚೇರಿಯಲ್ಲಿ ಸಮರ್ಪಕ ಕೆಲಸ ನಿರ್ವಹಿಸದ ನೌಕರರನ್ನು ತರಾಟೆಗೆ ತೆಗೆದುಕೊಂಡರು. ಕಡತಗಳ ವೀಕ್ಷಣೆ ಮಾಡಿದ ಸಂದರ್ಭದಲ್ಲಿ ನೆರೆದಿದ್ದ ಸಾರ್ವಜನಿಕರು ದೂರಿನ ಸರಮಾಲೆಯನ್ನೇ ಜಿಲ್ಲಾಧಿಕಾರಿಗಳ ಮುಂದಿಟ್ಟರು. ಲೆಕ್ಕಾಧಿಕಾರಿ(VA) ಮತ್ತು ಕಂದಾಯ ನಿರೀಕ್ಷಣಾಧಿಕಾರಿ(RI)ಗಳು ನಿಯೋಜಿತ ಕರ್ತವ್ಯ ನಿರ್ವಹಿಸಬೇಕು. ರೈತರ ಸಮಸ್ಯೆಗಳಿಗೆ ಸಾಧ್ಯವಾದಷ್ಟು ಸ್ಥಳದಲ್ಲೆ ಪರಿಹಾರ ದೊರಕಿಸಿ ಕೊಡಬೇಕು. ನಕಲಿ ಖಾತೆಗಳ ಬಗ್ಗೆ ಪರಿಶೀಲನೆ ನಡೆಸಿ, ಅರ್ಹ ನಿವೇಶನ ರಹಿತರಿಗೆ ಶೀಘ್ರವೇ ನಿವೇಶನ ಹಂಚಿಕೆಯ ಮಾಡಲು ಕ್ರಮ ಕೈಗೊಳ್ಳಬೇಕೆಂದು ಅಧಿಕಾರಿಗಳಿಗೆ ಸೂಚಿಸಿದರು.
ಈ ಸಂದರ್ಭದಲ್ಲಿ ನಿವೇಶನ ವಂಚಿತರ ಹೋರಾಟ ಸಮಿತಿಯ ಬೂದನೂರು ಸತೀಶ್, ಸಂಪಹಳ್ಳಿ ಶಿವಶಂಕರ್ ಸೇರಿದಂತೆ ಹಲವರು ತಾಲ್ಲೂಕು ಕಚೇರಿಯ ಅವ್ಯವಸ್ಥೆಯನ್ನು ಜಿಲ್ಲಾಧಿಕಾರಿಗಳ ಗಮನಕ್ಕೆ ತಂದರು.