ಮಂಡ್ಯ ನಗರದ ಸರ್.ಎಂ.ವಿಶ್ವೇಶ್ವರಯ್ಯ ಪ್ರತಿಮೆ ಮುಂಭಾಗ ಕಳೆದ 17 ದಿನಗಳಿಂದ ಕಬ್ಬು ಹಾಗೂ ಹಾಲಿನ ಬೆಲೆ ನಿಗದಿಗೆ ಆಗ್ರಹಿಸಿ ರೈತಸಂಘದ ಹೋರಾಟ ನಡೆಯುತ್ತಿದ್ದರೂ ಜಿಲ್ಲಾ ಉಸ್ತುವಾರಿ ಸಚಿವ ಕೆ.ಗೋಪಾಲಯ್ಯ ಒಂದೂ ದಿನವೂ ಭೇಟಿ ನೀಡಿಲ್ಲ.
ಇದರಿಂದ ಆಕ್ರೋಶ ಗೊಂಡಿರುವ ರೈತಸಂಘದ ಕಾರ್ಯಕರ್ತರು ಸಚಿವ ಗೋಪಾಲಯ್ಯ ಕಾಣೆಯಾಗಿದ್ದಾರೆಂಬ ಬ್ಯಾನರ್ ಅಳವಡಿಸಿದ್ದಾರೆ. ಸಚಿವ ಗೋಪಾಲಯ್ಯ ಕಾಣೆಯಾಗಿದ್ದಾರೆಂಬ ಬ್ಯಾನರ್ ಹಿಡಿದು ಪ್ರತಿಭಟನೆ ನಡೆಸಿರುವ ರೈತರು ಗೋಪಾಲಯ್ಯ ಹಾಗೂ ರಾಜ್ಯ ಸರ್ಕಾರದ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.
ಕಳೆದ 17ನೇ ದಿನಗಳಿಂದ ಅಹೋರಾತ್ರಿ ಹೋರಾಟ ನಡೆಯುತ್ತಿದ್ದರೂ ಸರ್ಕಾರ ಸ್ಪಂದಿಸುವ ಕೆಲಸ ಮಾಡಿಲ್ಲ. ಕಬ್ಬು, ಹಾಲಿಗೆ ವೈಜ್ಞಾನಿಕ ಬೆಲೆ ನೀಡಬೇಕೆಂದು ಒತ್ತಾಯಿಸಿ ರೈತರು ಮಳೆ,ಚಳಿ,ಗಾಳಿ,ಧೂಳು ಎನ್ನದೆ ಅಹೋರಾತ್ರಿ ಪ್ರತಿಭಟನೆ ಮಾಡಿದ್ದಾರೆ.ಹಲವು ಗಣ್ಯರು, ವಿವಿಧ ಪಕ್ಷಗಳ ಮುಖಂಡರು ಭೇಟಿ ಮಾಡಿದ್ದರೂ ಸಚಿವ ಗೋಪಾಲಯ್ಯ ಸ್ಥಳಕ್ಕೆ ಬಂದು ರೈತರ ಬೇಡಿಕೆಗಳ ಬಗ್ಗೆ ಚರ್ಚೆ ನಡೆಸಿಲ್ಲ ಎಂದು ದೂರಿರುವ ರೈತ ಕಾರ್ಯಕರ್ತರು ಸಚಿವ ಕೆ.ಗೋಪಾಲಯ್ಯ ಕಾಣೆಯಾಗಿದ್ದಾರೆಂಬ ಫ್ಲೆಕ್ಸ್ ಅಳವಡಿಸಿ ಜನರ ಗಮನ ಸೆಳೆದಿದ್ದಾರೆ.
ಬಿಜೆಪಿ ಸರ್ಕಾರ ಹಾಗೂ ಸಚಿವರ ವರ್ತನೆ ಖಂಡಿಸಿರುವ ರೈತಸಂಘ ಮಂಡ್ಯ ಬಂದ್ ಗೆ ಕರೆ ನೀಡಲು ಚಿಂತನೆ ನಡೆಸಿದೆ. ಇಂದು ಹೋರಾಟ ತೀವ್ರಗೊಳಿಸಿ ಬಂದ್ ಗೆ ಕರೆ ನೀಡುವ ಕುರಿತು ಸಭೆ ನಡೆಸಿ ತೀರ್ಮಾನ ಮಾಡಲಿದೆ.