ಮುಖ್ಯಮಂತ್ರಿ ಹುದ್ದೆ ಅನುಭವಿಸುತ್ತಿದ್ದ ಹೆಚ್.ಡಿ.ಕುಮಾರಸ್ವಾಮಿ ಅವರನ್ನು ಆಪರೇಷನ್ ಕಮಲ ಮಾಡಿ ಅಧಿಕಾರದಿಂದ ಕೆಳಗಿಳಿಸಿದ ಕೋಮುವಾದಿ ಬಿಜೆಪಿ ಪಕ್ಷದೊಂದಿಗೆ ಇಂದು ಇದೇ ಕುಮಾರಸ್ವಾಮಿ ಅವರು ಕೈಜೋಡಿಸಿರುವುದು ನಾಚಿಕೆಗೇಡು ಎಂದು ಡಿಸಿಎಂ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಕಿಡಿಕಾರಿದರು.
ಮಂಡ್ಯ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಸ್ಟಾರ್ ಚಂದ್ರು ನಾಮಪತ್ರ ಸಲ್ಲಿಕೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಕಾಂಗ್ರೆಸ್ ಪಕ್ಷ ದೇವೇಗೌಡರನ್ನು ರಾಷ್ಟ್ರದ ಪ್ರಧಾನಿಯನ್ನಾಗಿ ಹೆಚ್.ಡಿ.ಕುಮಾರಸ್ವಾಮಿ ಅವರನ್ನು ರಾಜ್ಯದ ಮುಖ್ಯಮಂತ್ರಿಯಾಗಿಸಿದೆ, 5 ವರ್ಷಗಳ ಸರ್ಕಾರ ನಡೆಸಬೇಕೆಂದು ಕಾಂಗ್ರೆಸ್ ಬೆಂಬಲಿಸಿತು, ಆದರೆ ಬಿಜೆಪಿ ಚಿತಾವಣೆ ನಡೆಸಿ ಅಧಿಕಾರ ಕಸಿದು ಕೊಂಡಿತು, ಅಂತಹವರೊಂದಿಗೆ ಕುಮಾರಸ್ವಾಮಿ ಮೈತ್ರಿ ರಾಜಕಾರಣಕ್ಕೆ ಮುಂದಾಗಿರುವುದು ಸರಿಯೇ ಎಂದು ಪ್ರಶ್ನಿಸಿದರು.
ಮೈತ್ರಿ ಸರ್ಕಾರದಲ್ಲಿ ಕಿರುಕುಳದ ಆಪಾದನೆ ಹೊರಿಸಿರುವ ಕುಮಾರಸ್ವಾಮಿ ಅವರು ಅಂದೇ ಕಿರುಕುಳ ವಿರೋಧಿಸಿ ರಾಜೀನಾಮೆ ನೀಡಿ, ಬಿಜೆಪಿ ಜೊತೆ ಅಧಿಕಾರ ನಡೆಸಲು ಮುಂದಾಗಬೇಕಿತ್ತು. ಅದನ್ನು ಬಿಟ್ಟು ಸುಮ್ಮನೆ ಆರೋಪಿಸುವುದು ಸರಿಯಲ್ಲವೆಂದರು.
ಊಟ ಕೊಟ್ಟ ಜನರನ್ನು ದಾರಿಯಲ್ಲಿ ಬಿಟ್ಟು ಬಂದಿದ್ದಾರೆ
ಹೆಚ್.ಡಿ.ದೇವೇಗೌಡ ಹಾಗೂ ಕುಮಾರಸ್ವಾಮಿ ಅವರನ್ನು ರಾಮನಗರದ ಜನತೆ ಮುಖ್ಯಮಂತ್ರಿಯಾಗಲು ಆಶೀರ್ವದಿಸಿದರು. ಅವರನ್ನು ಬಿಟ್ಟು ಈಗ ಮಂಡ್ಯದತ್ತ ತೆರಳಿದ್ದಾರೆ. ಆ ಮೂಲಕ ಊಟ ಕೊಟ್ಟ ಜನರನ್ನು ದಾರಿಯಲ್ಲಿ ಬಿಟ್ಟು ಬಂದಿದ್ದಾರೆ. ಸ್ವಂತ ಭಾವನನ್ನು ಬಿಜೆಪಿಗೆ ಸೇರಿಸಿದ್ದಾರೆ. ಈ ಮೂಲಕ ಜಾತ್ಯಾತೀತ ತತ್ವಕ್ಕೆ ಎಳ್ಳು ನೀರು ಬಿಟ್ಟಿದಾರೆಂದು ಲೇವಡಿ ಮಾಡಿದರು.
ಇಂದಿನ ರಾಜಕಾರಣದಿಂದ ನಾಚಿಕೆ ಉಂಟಾಗಿರುವ ಸನ್ನಿವೇಶದಿಂದ ಜೆಡಿಎಸ್ ಪಕ್ಷದಲ್ಲಿದ್ದ ಹಲವಾರು ನಾಯಕರು ಪಕ್ಷ ತೊರೆದಿದ್ದಾರೆ. ಅದೇ ರೀತಿ ಜಿಲ್ಲೆಯ ಮರಿತಿಬ್ಬೇಗೌಡರು, ಕಾಂಗ್ರೆಸ್ ಸೇರ್ಪಡೆಯಾಗಿರುವುದು ಜಾತ್ಯಾತೀತ ಹಾಗೂ ಸ್ವಾಭಿಮಾನವನ್ನು ನಾಶ ಮಾಡಿದ್ದಾರೆ ಎಂಬ ನೋವಿನಿಂದ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಚಲುವರಾಯಸ್ವಾಮಿ, ರಾಜ್ಯಸಭಾ ಸದಸ್ಯ ಜಿ.ಸಿ.ಚಂದ್ರಶೇಖರ್, ಶಾಸಕರಾದ ಪಿ.ಎಂ.ನರೇಂದ್ರಸ್ವಾಮಿ, ಕದಲೂರು ಉದಯ್, ರವಿಕುಮಾರ್ ಗಣಿಗ, ರವಿಶಂಕರ್, ರಮೇಶ್ ಬಾಬು, ಪುಟ್ಟಸ್ವಾಮಿಗೌಡ, ಶರತ್ ಬಚ್ಚೇಗೌಡ, ವಿಧಾನ ಪರಿಷತ್ ಸದಸ್ಯರಾದ ಮಧು ಜಿ.ಮಾದೇಗೌಡ, ದಿನೇಶ್ ಗೂಳೀಗೌಡ, ಮಾಜಿ ಶಾಸಕ ಮರಿತಿಬ್ಬೇಗೌಡ, ಬಿ.ರಾಮಕೃಷ್ಣ, ಅಭ್ಯರ್ಥಿ ಸ್ಟಾರ್ ಚಂದ್ರು, ಸುನೀತಾ ಪುಟ್ಟಣ್ಣಯ್ಯ, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಸಿ.ಡಿ.ಗಂಗಾಧರ್ ಮಾಜಿ ಶಾಸಕರು, ಮುಖಂಡರು ಪಾಲ್ಗೊಂಡಿದ್ದರು.