Friday, September 20, 2024

ಪ್ರಾಯೋಗಿಕ ಆವೃತ್ತಿ

ಡಿವಿಡಿ ತೋರಿಸುವ ಹಳೆಯ ಚಾಳಿ ಎಲ್ಲಿ ಹೋಗುತ್ತೇ ; ಕುಮಾರಸ್ವಾಮಿ ತಿರುಗೇಟು

ಕೊಚ್ಚೆಗಳ ಬಗ್ಗೆ ಮಾತನಾಡಬಾರದು ಎಂದುಕೊಂಡಿದ್ದೆ. ಮಂಡ್ಯದಲ್ಲಿ ಅವರು ಒಂದು ವಿಡಿಯೋ ಪ್ಲೇ ಮಾಡಿದ್ದಾರೆ. ಇದೇ ಕಾರಣಕ್ಕೆ ನಾನು ಆ ವ್ಯಕ್ತಿಯನ್ನು ‘ಸಿಡಿ ಶಿವು’ ಎಂದು ಕರೆದಿದ್ದೆ. ಅವರ ಡಿವಿಡಿ ತೋರಿಸುವ ಚಾಳಿ ಎಲ್ಲಿ ಹೋಗುತ್ತದೆ ಹೇಳಿ? ಇನ್ನೂ ಹಳೆಯ ಚಾಳಿಯನ್ನು ಬಿಟ್ಟಿಲ್ಲ ಎಂದು ಡಿಕೆ ಶಿವಕುಮಾರ್‌ ವಿರುದ್ಧ ಕುಮಾರಸ್ವಾಮಿ ಟೀಕಾಪ್ರಹಾರ ನಡೆಸಿದರು.

ಮೈಸೂರು ಚಲೋ ಐದನೇ ದಿನದ ಪಾದಯಾತ್ರೆ ವೇಳೆ ಮಂಡ್ಯದ ಬಹಿರಂಗ ಸಭೆಯಲ್ಲಿ ಅವರು ಮಾತನಾಡಿ, “ನಾನು ಹಿಂದೆ ನೀಡಿದ್ದ ಹೇಳಿಕೆಗಳನ್ನು ಡಿವಿಡಿ ಶಿವು ಪ್ಲೇ ಮಾಡಿ ತೋರಿಸಿದ್ದಾರೆ. ನಿಮ್ಮ ಸಿದ್ದರಾಮಯ್ಯ ಈ ಹಿಂದೆ ಕಾಂಗ್ರೆಸ್‌ ಬಗ್ಗೆ ಏನೆಲ್ಲ ಮಾತಾಡಿಲ್ಲ. ನಮ್ಮ ಪಕ್ಷದಲ್ಲಿ ಇದ್ದಾಗ ಸೋನಿಯಾ ಗಾಂಧಿ ಮತ್ತು ರಾಹುಲ್ ಗಾಂಧಿ ಅವರ ಬಗ್ಗೆ ಏನೆಲ್ಲಾ ಮಾತನ್ನಾಡಿದ್ದಾರೆ ಎನ್ನುವುದನ್ನೂ ತೋರಿಸಬೇಕಿತ್ತು. ಅದನ್ನೆಲ್ಲ ಮರೆತಿದ್ದೀರಿ ಯಾಕೆ” ಎಂದು ಪ್ರಶ್ನಿಸಿದರು.

“ಮಂಡ್ಯದಲ್ಲಿ ಡಿಸಿಎಂ ಒಂದು ವಿಷಯ ಪ್ರಸ್ತಾಪಿಸಿದ್ದಾರೆ. ಕೇಂದ್ರ ಸಚಿವರಾದರೆ ಮೇಕೆದಾಟು ಯೋಜನೆಗೆ ಅನುಮತಿ ಕೊಡಿಸುತ್ತೇನೆ ಎಂದು ಹೇಳಿದ್ದರು ಎಂದು ನನ್ನ ಬಗ್ಗೆ ಹೇಳಿದ್ದರು. ನಾನು ಹೇಳಿದ್ದು, ನಿಮ್ಮ ಮಿತ್ರಪಕ್ಷ ತಮಿಳುನಾಡಿನ ಡಿಎಂಕೆ ನಾಯಕರನ್ನು ಒಪ್ಪಿಸಿ. ಅದಾದ ಮೇಲೆ ಒಂದೇ ತಿಂಗಳಲ್ಲಿ ಮೇಕೆದಾಟು ಯೋಜನೆಗೆ ಕೇಂದ್ರದ ಅನುಮತಿ ಕೊಡಿಸಲಾಗುವುದು ಎಂದು ತಿಳಿಸಿದ್ದೆ. ಆದರೆ, ಕಾಂಗ್ರೆಸ್ ಇಬ್ಬಗೆಯ ನೀತಿ ಅನುಸರಿಸುತ್ತಾ ಕನ್ನಡಿಗರಿಗೆ ಮಂಕುಬೂದಿ ಎರಚುತ್ತಿದೆ” ಎಂದು ಆರೋಪಿಸಿದರು.

ಸಂಸತ್ತಿನಲ್ಲಿ ಮೇಕೆದಾಟು ಯೋಜನೆಗೆ ವಿರೋಧ

“ಮೇಕೆದಾಟು ಯೋಜನೆಯ ಬಗ್ಗೆ ಕಾಂಗ್ರೆಸ್ ಪಕ್ಷ ಇಬ್ಬಗೆಯ ನೀತಿ ಅನುಸರಿಸುತ್ತಿದೆ. ಕಾಂಗ್ರೆಸ್ ವರಸೆ ಹೇಗಿದೆ ಎಂದರೆ ಕರ್ನಾಟಕದಲ್ಲಿ ಮೇಕೆದಾಟು ಯೋಜನೆಯ ಬಗ್ಗೆ ಮೊಸಳೆ ಕಣ್ಣೀರು ಸುರಿಸುತ್ತದೆ. ಅದೇ ದೆಹಲಿಗೆ ಬಂದಾಕ್ಷಣ ಡಿಎಂಕೆ ಜತೆ ಸೇರಿಕೊಂಡು ಈ ಯೋಜನೆಯ ವಿರುದ್ಧ ಗಲಾಟೆ ಮಾಡುತ್ತದೆ” ಎಂದು ವಾಗ್ದಾಳಿ ನಡೆಸಿದರು.

“ರಾಜ್ಯಸಭೆಯಲ್ಲಿ ದೇವೇಗೌಡರು ಕಾವೇರಿ ಬಗ್ಗೆ ಚರ್ಚೆ ಮಾಡುತ್ತಿದ್ದರೆ ನಿಮ್ಮ ಮಿತ್ರಪಕ್ಷ ಡಿಎಂಕೆ ಸದಸ್ಯರು ಗದ್ದಲ ಎಬ್ಬಿಸುತ್ತಾರೆ. ಆ ಸಮಯದಲ್ಲಿ ರಾಜ್ಯದವರೇ ಮಲ್ಲಿಕಾರ್ಜುನ ಖರ್ಗೆ, ರಾಜ್ಯದ ಕಾಂಗ್ರೆಸ್ ಸದಸ್ಯರು ಮೌನ ವಹಿಸುತ್ತಾರೆ. ಅವರು ಯಾಕೆ ದೇವೇಗೌಡರಿಗೆ ದನಿಗೂಡಿಸಲ್ಲ? ಮೇಕೆದಾಟು ಯೋಜನೆಗೆ ಅನುಮತಿ ಕೊಡಿಸಿ ಎಂದು ಕೇಳುವ ನೀವು ಡಿಎಂಕೆ ಜತೆ ಕುಮ್ಮಕ್ಕಾಗಿ ರಾಜ್ಯಕ್ಕೆ ದ್ರೋಹ ಮಾಡುತ್ತಿದ್ದಿರಿ” ಎಂದು ಪ್ರಶ್ನಿಸಿದರು.

“ರಾಜ್ಯದಲ್ಲಿ ಉತ್ತಮ ಮಳೆಯಾಗಿ ಸಮೃದ್ಧಿ ಅನ್ಆಟಗಳು ತಾಯಿ ಚಾಮುಂಡೇಶ್ವರಿ ಕರುಣೆ ಕಾರಣ. ನಿಮ್ಮದೇನೂ ಇಲ್ಲಿ ಇಲ್ಲ. ನಿಮಗೆ ಜನರಿಂದ ದುಡ್ಡು ಗುಂಜೋದಕ್ಕೆ ಸಮಯ ಇಲ್ಲ. ಸರಣಿ ಹಗರಣಗಳ ಮೂಲಕ ಲೂಟಿ ಹೊಡೆಯುತ್ತಿದ್ದೀರಿ” ಎಂದು ದೂರಿದರು.

“ಕೆಆರ್ ಎಸ್ ಅಣೆಕಟ್ಟೆ ತುಂಬಿ ತಮಿಳುನಾಡಿಗೆ ನಿರರ್ಗಳವಾಗಿ ನೀರು ಹರಿದು ಹೋಯಿತು. ಆದರೆ, ಮಂಡ್ಯ ಜಿಲ್ಲೆಯ ಮಳವಳ್ಳಿ, ಕೊಪ್ಪ ಸೇರಿದಂತೆ ಕೊನೆಯ ಭಾಗಕ್ಕೆ ನೀರು ಹೋಗಿಲ್ಲ. ನಿಮಗೆ ನಾಚಿಕೆ ಆಗಬೇಕು” ಎಂದು ಹರಿಹಾಯ್ದರು.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!