“ಇಂದು ಸರ್ಕಾರದ ಸಚಿವ ಸಂಪುಟ ಸಭೆಯಲ್ಲಿ ಬಸವಣ್ಣನವರನ್ನು ಕರ್ನಾಟಕದ ʼಸಾಂಸ್ಕೃತಿಕ ನಾಯಕʼರನ್ನಾಗಿ ಘೋಷಣೆ ಮಾಡಿದ್ದು ಪರಮಾನಂದ ತಂದಿದೆ. ಇದು ಸರ್ಕಾರದ ಘನತೆಯನ್ನೂ ಹೆಚ್ಚಿಸಿದೆ” ಎಂದು ಬಾಲ್ಕಿಯ ಹಿರೇಮಠ ಸಂಸ್ಥಾನದ ಸ್ವಾಮೀಜಿ ಡಾ ಬಸವಲಿಂಗ ಪಟ್ಟದೇವರು ಹರ್ಷ ವ್ಯಕ್ತಪಡಿಸಿದ್ದಾರೆ.
ಈ ದಿನ.ಕಾಮ್ ಜೊತೆ ಮಾತನಾಡಿದ ಅವರು, ಬಸವಣ್ಣನವರು ತುಳಿತಕ್ಕೊಳಗಾದವರನ್ನು ಮೇಲೆತ್ತಿದವರು. ಮೌಢ್ಯ ಕಂದಾಚಾರದ ವಿರುದ್ಧ ನ್ಯಾಯವನ್ನು ಜಗತ್ತಿಗೆ ಕೊಟ್ಟವರು ಜಗಜ್ಯೋತಿ ಬಸವಣ್ಣನವರು. ಅವರ ತತ್ವ, ವಿಚಾರ ಎಂದೆಂದೂ ಪ್ರಸ್ತುತ. ಬಸವಣ್ಣನವರನ್ನು ಕರ್ನಾಟಕದ ಸಾಂಸ್ಕೃತಿಕ ನಾಯಕ ಎಂದು ಘೋಷಿಸಬೇಕು ಎಂಬ ಮನವಿಯನ್ನು ಜನವರಿ ಎಂಟನೇ ತಾರೀಕು ಮಠಾಧೀಶರು, ಸಾಹಿತಿಗಳ ನಿಯೋಗ ಕೊಟ್ಟಿತ್ತು. ಇಷ್ಟು ಕಡಿಮೆ ಅವಧಿಯಲ್ಲಿ ಈ ನಿರ್ಧಾರ ಕೈಗೊಂಡಿರುವುದು ಸಿದ್ದರಾಮಯ್ಯನವರಿಗೆ ಬಸವಣ್ಣನವರ ಮೇಲೆ ಇಟ್ಟಂತಹ ಭಕ್ತಿ, ಪ್ರೇಮವನ್ನು ತೋರಿಸಿಕೊಡುತ್ತದೆ ಎಂದರು.
“ಸಿದ್ದರಾಮಯ್ಯನವರು ಹಿಂದೆ ಮುಖ್ಯಮಂತ್ರಿ ಆಗಿದ್ದಾಗ ಬಸವಣ್ಣನವರ ಭಾವಚಿತ್ರವನ್ನು ಸರ್ಕಾರಿ ಕಚೇರಿಗಳಲ್ಲಿ ಹಾಕಿಸಿದ್ದರು. ಅಕ್ಕ ಮಹಾದೇವಿ ಹೆಸರಿನಲ್ಲಿ ಮಹಿಳಾ ವಿಶ್ವವಿದ್ಯಾಲಯವನ್ನು ಸ್ಥಾಪಿಸಿದ್ದು, ಬಸವ ಕಲ್ಯಾಣದ ಅನುಭವ ಮಂಟಪದ ನೀಲನಕ್ಷೆ ಸಿದ್ದಪಡಿಸಿದ್ದು ಈ ಎಲ್ಲಾ ಶ್ರೇಯಸ್ಸು ಸಿದ್ದರಾಮಯ್ಯನವರಿಗೆ ಸಲ್ಲುತ್ತದೆ. ಅಷ್ಟೇ ಅಲ್ಲ ಬಸವಣ್ಣನವರ ವಚನಗಳ ನಾಲ್ಕು ಸಂಪುಟಗಳನ್ನು ಹೊರ ತಂದವರು ಸಿದ್ದರಾಮಯ್ಯನವರು” ಎಂದು ಶ್ಲಾಘಿಸಿದರು.
“ಸಿದ್ದರಾಮಯ್ಯನವರು ಬಸವಣ್ಣನವರ ಹೆಸರಿನ ಮೇಲೆ ಪ್ರಮಾಣವಚನ ಮಾಡಿರುವುದು ಬಸವಣ್ಣನವರ ತತ್ವದ ಮೇಲಿನ ಅವರ ಭಕ್ತಿ ತೋರಿಸುತ್ತದೆ. ಸದ್ಯದಲ್ಲಿಯೇ ತಜ್ಞರ ಜೊತೆ ಚರ್ಚೆ ಮಾಡಿ ನಿಯೋಗದ ಜೊತೆ ಹೋಗಿ ಸಿದ್ದರಾಮಯ್ಯ ಅವರಿಗೆ ಅಭಿನಂದನೆ ಸಲ್ಲಿಸಿ ಮುಂದೆ ಬಸವಣ್ಣನವರ ತತ್ವ ಪ್ರಸಾರ, ಶರಣರ ಜೀವನ ಚರಿತ್ರೆಯನ್ನು ಪಠ್ಯಗಳಲ್ಲಿ ಹೇಗೆ ಅಳವಡಿಸಬೇಕು ಎಂಬ ಬಗ್ಗೆ ಸಲಹೆ ಕೊಡುತ್ತೇವೆ” ಎಂದು ತಿಳಿಸಿದರು.
ಕೃಪೆ: ಈದಿನ.ಕಾಂ