ಮಂಡ್ಯದ ಎಸ್.ಬಿ. ಎಜುಕೇಷನ್ ಟ್ರಸ್ಟ್ ಹಾಗೂ ಮೈಸೂರಿನ ಅದಮ್ಯ ರಂಗಶಾಲೆಯ ವತಿಯಿಂದ ಖ್ಯಾತ ಕಥೆಗಾರ, ಜನಪರ ವೈದ್ಯ ಮತ್ತು ಸಂಸ್ಕೃತಿ ಚಿಂತಕರಾದ ಡಾ.ಬೆಸಗರಹಳ್ಳಿ ರಾಮಣ್ಣ ಅವರ ಸ್ಮರಣಾರ್ಥ ಪಿಯುಸಿ ಪಠ್ಯಾಧಾರಿತ ಚಿತ್ರಿತ ನಾಟಕ ಪ್ರದರ್ಶನವು ಡಿ.10 ರಂದು ಬೆಳಗ್ಗೆ 10 ಗಂಟೆಗೆ ಎಂ.ಸಿ. ರಸ್ತೆಯ ಜ್ಞಾನಸಾಗರ ಕ್ಯಾಂಪಸ್ಸಿನ ಮಾಂಡವ್ಯ ಎಕ್ಸೆಲೆನ್ಸ್ ಪದವಿ ಪೂರ್ವ ಕಾಲೇಜಿನಲ್ಲಿ ನಡೆಯಲಿದೆ ಎಂದು ಅದಮ್ಯ ರಂಗಶಾಲೆಯ ಅಧ್ಯಕ್ಷ ಮಂಡ್ಯ ಚಂದ್ರು ತಿಳಿಸಿದ್ದಾರೆ.
ರಂಗ ಪ್ರದರ್ಶನಕ್ಕೆ ಮೈಸೂರು ಜಿ.ಪಂ. ಮುಖ್ಯ ಕಾರ್ಯನಿರ್ವಣಾಧಿಕಾರಿ ಹಾಗೂ ಡಾ. ಬೆಸಗರಹಳ್ಳಿ ರಾಮಣ್ಣ ಅವರ ಪುತ್ರಿ ಬಿ.ಆರ್.ಪೂರ್ಣಿಮಾ ಅವರು ಚಾಲನೆ ನೀಡಲಿದ್ದು, ಎಸ್.ಬಿ. ಎಜುಕೇಷನ್ ಟ್ರಸ್ಟಿನ ಅಧ್ಯಕ್ಷ ಬಿ. ಶಿವಲಿಂಗಯ್ಯ ಅಧ್ಯಕ್ಷತೆ ವಹಿಸುವರು. ಮುಖ್ಯ ಅತಿಥಿಗಳಾಗಿ ಜಿಲ್ಲಾ ಕಸಾಪ ಮಾಜಿ ಅಧ್ಯಕ್ಷೆ ಮೀರಾ ಶಿವಲಿಂಗಯ್ಯ, ಸಾಹಿತಿ ಟಿ. ಸತೀಶ್ ಜವರೇಗೌಡ ಪಾಲ್ಗೊಳ್ಳುವರು.
ಪ್ರಥಮ ಪಿಯುಸಿಯ ಕನ್ನಡ ಪಠ್ಯದಲ್ಲಿರುವ ಡಾ.ಬೆಸಗರಹಳ್ಳಿ ರಾಮಣ್ಣ ಅವರ ‘ಗಾಂಧಿ’, ಡಾ. ವೀಣಾ ಶಾಂತೇಶ್ವರ ಅವರ ‘ನಿರಾಕರಣೆ’ ಹಾಗೂ ದ್ವಿತೀಯ ಪಿಯುಸಿಯ ಕನ್ನಡ ಪಠ್ಯದಲ್ಲಿರುವ ಪಿ.ಲಂಕೇಶರ ‘ಮುಟ್ಟಿಸಿಕೊಂಡವನು’, ಡಾ.ಎಚ್.ನಾಗವೇಣಿ ಅವರ ‘ಧಣಿಗಳ ಬೆಳ್ಳಿಲೋಟ’ ಕಥೆಗಳನ್ನು ರಂಗರೂಪಕ್ಕೆ ಅಳವಡಿಸಲಾಗಿದ್ದು, ಮಂಡ್ಯ ಚಂದ್ರು ನಿರ್ದೇಶನದಲ್ಲಿ ಅದಮ್ಯ ರಂಗಶಾಲೆಯ ಕಲಾವಿದರು ಅಭಿನಯಿಸಿದ್ದಾರೆ. ಈ ನಾಲ್ಕು ಕಥೆಗಳ ಚಿತ್ರಿತ ರಂಗ ಪ್ರದರ್ಶನ ವಿದ್ಯಾರ್ಥಿಗಳಿಗಾಗಿ ನಡೆಯಲಿದೆ ಎಂದು ಅವರು ತಿಳಿಸಿದ್ದಾರೆ.