ಚುನಾವಣೆಯಲ್ಲಿ ಸ್ಪರ್ಧಿಸುವಂತೆ ಜನರ ಒತ್ತಡ ಇದೆ, ಆದ್ರೆ ನಾನು ಇನ್ನು ಏನು ತೀರ್ಮಾನ ಮಾಡಿಲ್ಲ. ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸುವ ಬಗ್ಗೆ ನಾನು ಯಾವುದೇ ತೀರ್ಮಾನ ಮಾಡಿಲ್ಲ ಖ್ಯಾತ ಹೃದಯ ರೋಗ ತಜ್ಞ ಹಾಗೂ ಜಯದೇವ ಆಸ್ಪತ್ರೆ ಮಾಜಿ ನಿರ್ದೇಶಕ ಡಾ.ಸಿ.ಎನ್.ಮಂಜುನಾಥ್ ಹೇಳಿದ್ದಾರೆ.
ಮಂಡ್ಯದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನನ್ನ ಪ್ರಕಾರ ಲೋಕಸಭೆ ಬೇರೆ, ರಾಜಕೀಯವೇ ಬೇರೆ. ನಾನು ಇನ್ನು ಸ್ಪರ್ಧೆ ಬಗ್ಗೆ ಆಲೋಚನೆ ಮಾಡ್ತಿದ್ದೇನೆ. ಇದರ ಬಗ್ಗೆ ಸ್ಪಷ್ಟವಾದ ನಿಲುವು ತೆಗೆದುಕೊಂಡು ತಿಳಿಸುತ್ತೇನೆ. ಸ್ನೇಹಿತರು, ಹಿತೈಷಿಗಳು ಆರೋಗ್ಯ ಕ್ಷೇತ್ರದಲ್ಲಿ ಸಾಧನೆ ಮಾಡಿದಂತೆ ರಾಜಕೀಯದಲ್ಲಿ ಮಾಡಿ ಎಂದು ಒತ್ತಡ ಹಾಕ್ತಿದ್ದಾರೆ. ನನ್ನ ಸ್ಪರ್ಧೆ ಬಗ್ಗೆ ಜನ, ಮಾಧ್ಯಮ ಸುದ್ದಿ ಮಾಡ್ತಿವೆ. ರಾಜಕೀಯಕ್ಕೆ ಹೋಗಬೇಕ ಅಥವಾ ಬೇಡವಾ ಎಂಬ ನಿರ್ಧಾರ ಮಾಡಿಲ್ಲ ಎಂದು ಸ್ಪಷ್ಟಪಡಿಸಿದರು.
ಜಯದೇವ ಸಂಸ್ಥೆ ಮೇಲೆ ಸರ್ಕಾರದಿಂದ ತನಿಖೆಗೆ ಚಿಂತನೆ ವಿಚಾರಕ್ಕೆ ಪ್ರತಿಕ್ರಿಯಿಸಿದ ಡಾ.ಸಿ.ಎನ್.ಮಂಜುನಾಥ್ ಅವರು, ಇಡೀ ರಾಷ್ಟ್ರದಲ್ಲಿ ಜಯದೇವ ಸಂಸ್ಥೆಯನ್ನು ಮಾದರಿ ಸಂಸ್ಥೆಯಾಗಿ ಅಭಿವೃದ್ಧಿಗೊಳಿಸಿದ್ದೇವೆ. ಈ ಸರ್ಕಾರ ಹಾಗೂ ಹಿಂದಿನ ಸರ್ಕಾರ ಎಲ್ಲರೂ ಮೆಚ್ಚುಗೆ ವ್ಯಕ್ತಪಡಿಸಿವೆ. ಯಾವ ಕಾರಣಕ್ಕೆ ತನಿಖೆ ಮಾಡಬೇಕು ಅಂದುಕೊಂಡಿದ್ದಾರೋ ಗೊತ್ತಿಲ್ಲ, ನನಗೆ ಸಂತೋಷ. ಕೇಂದ್ರ ಆರೋಗ್ಯ ಸ್ಥಾಯಿ ಸಮಿತಿ ನಮ್ಮ ಕೆಲಸ ನೋಡಿ ಮೆಚ್ಚುಗೆ ವ್ಯಕ್ತಪಡಿಸಿದೆ. ಕಾರ್ಯವೈಖರಿ, ನಿರ್ವಹಣೆ ನೋಡಿ ಓನರ್ ಯಾರು ಅಂದ್ರು. ಸರ್ಕಾರಕ್ಕೆ ಈ ಸಂಸ್ಥೆ ಶೋಕೇಶ್ ಆಗಿದೆ ಎಂದಿದ್ದರು. ಜಯದೇವ ರೀತಿ ಸರ್ಕಾರಿ ಸಂಸ್ಥೆಗಳನ್ನ ಯಾಕೆ ಅಭಿವೃದ್ಧಿ ಮಾಡಬಾರದು ಎಂದು ಸರ್ಕಾರವೇ ತಿಳಿಸಿದೆ ಎಂದರು.
ಡಾ ಮಂಜುನಾಥ್ ರಾಜಕೀಯಕ್ಕೆ ಬರುವ ವಿಚಾರ ಬಗ್ಗೆ ಪ್ರತಿಕ್ರಿಯಿಸಿದ ಅವರ ಪತ್ನಿ ಹೆಚ್.ಡಿ.ಅನುಸೂಯಮ್ಮ , ನಾನು ಹುಟ್ಟುತ್ತಲೆ ರಾಜಕೀಯ ನೋಡಿಕೊಂಡು ಬಂದಿದ್ದೇನೆ. ನಾನು ಹುಟ್ಟಿದ ಮರು ದಿನವೆ ನನ್ನ ತಂದೆ (ಹೆಚ್.ಡಿ.ದೇವೇಗೌಡ) ಎಂಎಲ್ಎ ಆದ್ರು. ಸದ್ಯ ನನ್ನ ಪತಿ ವೈದ್ಯರಾಗಿ ಸೇವೆ ಮಾಡಿದ್ದಾರೆ, ನೆಮ್ಮದಿಯಾಗಿ ಆಲೋಚನೆ ಮಾಡಲು ಸಮಯ ಸಿಕ್ತಿಲ್ಲ. ಜನಸೇವೆ ಮಾಡಿದ್ದರ ಬಗ್ಗೆ ಸಂತೋಷವಾಗಿ ಆಸ್ವಾದನೆ ಮಾಡೋಕೆ ಬಿಡ್ತಿಲ್ಲ, ಪದೆ ಪದೇ ಹೊರಗಡೆಯಿಂದ ಒತ್ತಡ ಹೆಚ್ಚಾಗ್ತಿದೆ ಎಂದು ಹೇಳಿದರು.