ಮಹಿಳೆಯರಲ್ಲಿ ಸಂಘಟನಾತ್ಮಕ ಭಾವನೆ ಹೆಚ್ಚಾಗಬೇಕಿದೆ ಅಪರ ಜಿಲ್ಲಾಧಿಕಾರಿ ಡಾ.ಎಚ್.ಎಲ್.ನಾಗರಾಜು ಹೇಳಿದರು.
ಮಂಡ್ಯನಗರದ ಹೊಸಹಳ್ಳಿಯ ಸರ್ಕಾರಿ ಪ್ರೌಢಶಾಲೆ ಆವರಣದಲ್ಲಿ ಕೌಶಲ್ಯ ಯುವತಿ ಮತ್ತು ಮಹಿಳಾ ಮಂಡಳಿ ಹೊಸಹಳ್ಳಿ ಇವರು ಆಯೋಜಿಸಿದ್ದ ಆಯ್ದ ಸರ್ಕಾರಿ ಶಾಲೆಗಳ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಮಹಿಳೆಯರು ಒಗ್ಗೂಡಿ ಸಹಿಷ್ಣುತೆಯಿಂದ ಸೇವಾಕಾರ್ಯ ಮಾಡುತ್ತಿರುವುದು ಮಾದರಿಯಾಗಿದೆ, ಕೌಶಲ್ಯ ಯುವತಿ ಮತ್ತು ಮಹಿಳಾ ಮಂಡಳಿಯಲ್ಲಿ 25 ಮಂದಿ ಇದ್ದು, ಒಗ್ಗಟ್ಟಿನ ಬಲದಿಂದ ಮುನ್ನೆಡೆಯುತ್ತಿದ್ದೀರಿ, ಇದು ಹೀಗೆ ಸಾಗಲಿ, ಒಬ್ಬರನ್ನೊಬ್ಬರನ್ನ ಅರ್ಥಮಾಡಿಕೊಂಡಿರುವುದಕ್ಕೆ ನಿಮ್ಮ ಸಂಸ್ಥೆ ಬೆಳೆಯುತ್ತಿದೆ ಎಂದು ತಿಳಿಸಿದರು.
15 ವರ್ಷಗಳಿಂದ ನಿರಂತರವಾಗಿ ಸೇವಾ ಕಾರ್ಯ ಮಾಡಲು ತಮ್ಮ ಮನೆಗಳ ಹಣವನ್ನು ಹಾಕಿ, ಯಾವುದೇ ಲೋಪವಿಲ್ಲದೆ, ಇನ್ನೊಬ್ಬರಲ್ಲಿ ಭಿಕ್ಷೆ ಬೇಡದೆ, ತಮ್ಮಿಷ್ಟದ ಉತ್ತಮ ಕಾರ್ಯಗಳನ್ನು ಮಾಡುತ್ತಿದ್ದೀರಿ, ಇದು ಹೀಗೆ ಮುಂದುವರಿಯಲಿ ಎಂದು ಹೇಳಿದರು.
ಸಾಮಾಜಿಕ ವಿಷಯಗಳಲ್ಲಿ ನೋಂದವರಿಗೆ, ಕೋವಿಡ್-19ರ ದಿನಗಳಲ್ಲಿ ನೆರವಾಗಿರುವುದು, ಬಡ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಸಹಾಯಹಸ್ತ ನೀಡುತ್ತಿರುವುದು, ಪರಿಸರ ಕಾಳಜಿಯ ಸೇವಾ ಕಾರ್ಯಗಳಲ್ಲಿ ವಿಶೇಷವಾದ ಹೆಜ್ಜೆಗುರುತುಗಳನ್ನು ಮೂಡಿಸುತ್ತಾ ಬರುತ್ತಿದ್ದೀರಿ ಎಂದು ತಿಳಿಸಿದರು.
ಇದೇ ಸಂದರ್ಭದಲ್ಲಿ ಆಯ್ದ ಸರ್ಕಾರಿ ಶಾಲೆಗಳ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ, ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ರಾಷ್ಟ್ರ ಮತ್ತು ರಾಜ್ಯ ಯುವ ಪ್ರಶಸ್ತಿ ಪುರಸ್ಕರನ್ನು ಅಭಿನಂದಿಸಲಾಯಿತು.
ಕಾರ್ಯಕ್ರಮದಲ್ಲಿ ರಾಷ್ಟ್ರ ಯುವ ಪ್ರಶಸ್ತಿ ಪುರಸ್ಕೃತ ಕಾರಸವಾಡಿ ಮಹದೇವು, ರಾಜ್ಯ ಯುವ ಪ್ರಶಸ್ತಿ ಪುರಸ್ಕೃತ ಎಂ ಸಿ ಲಂಕೇಶ್ ಮಂಗಲ, ಅಭಿಯಂತರ ಕೆಂಪರಾಜು, ಮುಖ್ಯ ಶಿಕ್ಷಕಿ ರಾಜಮಣಿ, ರಾಜ್ಯ ಯುವ ಪ್ರಶಸ್ತಿ ಪುರಸ್ಕೃತ ಕೆ.ಪಿ ಅರುಣ ಕುಮಾರಿ ಮಂಗಲ, ಎಸ್ ಡಿ ಎಂ ಸಿ ಅಧ್ಯಕ್ಷ ಶೇಖರ್ ಹಾಗೂ ಕೌಶಲ್ಯ ಯುವತಿ ಮತ್ತು ಮಹಿಳಾ ಮಂಡಳಿ ಅಧ್ಯಕ್ಷ ವಿಜಯ ನಾಗಣ್ಣ, ಕಾರ್ಯದರ್ಶಿ ಅರುಣ ಕೆಂಪರಾಜು ಪದಾಧಿಕಾರಿಗಳು ಮತ್ತು ಶಿಕ್ಷಕ ವೃಂದ ಹಾಜರಿದ್ದರು.