ಆಧುನಿಕ ಜೀವನಶೈಲಿ ಮತ್ತು ಇಂದಿನ ಆಹಾರ ಪದ್ಧತಿಯಿಂದಾಗಿ ಗ್ರಾಮೀಣ ಪ್ರದೇಶದಲ್ಲಿನ ಜನಸಾಮಾನ್ಯರಲ್ಲಿ ಅಧಿಕ ರಕ್ತದೊತ್ತಡ ಹಾಗೂ ಮಧುಮೇಹದಂತಹ ಕಾಯಿಲೆ ಹೆಚ್ಚಾಗಿ ಕಂಡು ಬರುತ್ತಿದ್ದು ಇದಕ್ಕೆ ಪೂರಕವಾಗಿ ಸಾಂಪ್ರದಾಯಿಕ ಆಹಾರ ಪದ್ಧತಿಯನ್ನು ರೂಢಿಸಿಕೊಂಡಾಗ ಅಧಿಕ ರಕ್ತದೊತ್ತಡ ಮತ್ತು ಮಧುಮೇಹ ನಿಯಂತ್ರಿಸಲು ಸಾಧ್ಯ ಎಂದು ಮಂಡ್ಯ ಜಿಲ್ಲಾ ಆರೋಗ್ಯಾಧಿಕಾರಿ ಡಾ.ಕೆ.ಮೋಹನ್ ಸಲಹೆ ನೀಡಿದರು.
ನಾಗಮಂಗಲ ತಾಲ್ಲೂಕಿನ ಬ್ರಹ್ಮದೇವರಹಳ್ಳಿ ಪ್ರಾಥಮಿಕ ಆರೋಗ್ಯ ಕೇಂದ್ರ ಮತ್ತು ಗ್ರಾಮ ಪಂಚಾಯ್ತಿಯ ಸಹಭಾಗಿತ್ವದಲ್ಲಿ ಶುಕ್ರವಾರ ಆಯೋಜಿಸಿದ್ದ ಅಧಿಕ ರಕ್ತದೊತ್ತಡ ಮತ್ತು ಮಧುಮೇಹದ ಉಚಿತ ಆರೋಗ್ಯ ತಪಾಸಣಾ ಶಿಬಿರ ಉದ್ಘಾಟಿಸಿ ಮಾತನಾಡಿದರು.
ಉಪನ್ಯಾಸಕರಾದ ಆನಂದ್ ಮತ್ತು ಡಾ. ಮಂಜುನಾಥ ಅವರು ಪ್ರಾಸ್ತಾವಿಕ ನುಡಿಯನ್ನು ನುಡಿದು, ಹಳ್ಳಿ ಜನರಲ್ಲಿ ಬಿಪಿ ಮತ್ತು ಸಕ್ಕರೆ ಕಾಯಿಲೆ ಇರುವುದು ಅವರಿಗೆ ಗೊತ್ತಿರುವುದಿಲ್ಲ, ಅದನ್ನು ಪತ್ತೆಹಚ್ಚಿ ಸೂಕ್ತ ಚಿಕಿತ್ಸೆ ಪಡೆಯುವ ಸಲುವಾಗಿ ಇಂತಹ ಶಿಬಿರಗಳ ಮೂಲಕ ಉಚಿತವಾಗಿ ಆರೋಗ್ಯ ತಪಾಸಣೆ ನಡೆಸಲಾಗುತ್ತಿದೆ ಎಂದರು.
ಪಿಜಿಡಿಎಚ್ಪಿಇ ಕೋರ್ಸ್ ಪ್ರಾಂಶುಪಾಲ ಡಾ.ಶಶಿಕಾಂತರಾವ್, ಮಾತನಾಡಿ ಗ್ರಾಮದ ಪ್ರತಿಯೊಬ್ಬರಿಗೂ ಆರೋಗ್ಯ ತಪಾಸಣೆ ನಡೆಸಿದ ಬಳಿಕ ಅಧಿಕ ರಕ್ತದೊತ್ತಡ ಅಥವಾ ಮಧುಮೇಹ ದೃಢಪಟ್ಟವರಿಗೆ ಸೂಕ್ತ ಚಿಕಿತ್ಸೆ ಲಭ್ಯವಾಗುವಂತೆ ವೈದ್ಯರು ಅಗತ್ಯ ಕ್ರಮವಹಿಸಬೇಕು. ಗ್ರಾಮಸ್ಥರೆಲ್ಲರೂ ಈ ಶಿಬಿರದ ಪ್ರಯೋಜನ ಸದ್ಬಳಕೆ ಮಾಡಿಕೊಂಡು ಆರೋಗ್ಯವಂತ ಜೀವನ ನಡೆಸಬೇಕು ಎಂದು ಹೇಳಿದರು.
ಗ್ರಾಮ ಪಂಚಾಯತಿ ಸದಸ್ಯರಾದ ರವಿಕುಮಾರ ಮಾತನಾಡಿದರು. ಶಿಬಿರದಲ್ಲಿ 150 ಕ್ಕೂ ಹೆಚ್ಚು ಜನರಿಗೆ ತಪಾಸಣೆ ನಡೆಸಿ ಅಧಿಕ ರಕ್ತದೊತ್ತಡ ಮತ್ತು ಮಧುಮೇಹ ದೃಢಪಟ್ಟವವರಿಗೆ ಸೂಕ್ತ ಚಿಕಿತ್ಸೆಯ ಸಲಹೆ ನೀಡಲಾಯಿತು.
ಬ್ರಹ್ಮದೇವರಹಳ್ಳಿ ಗ್ರಾಮ ಪಂಚಾಯಿತಿ ಅಧ್ಯಕ್ಷರಾದ ವೆಂಕಟೇಶ್, ಪಿ.ಡಿ.ಒ ಶಿವಲಿಂಗೇಗೌಡ, ಉಪಾಧ್ಯಕ್ಷರಾದ ಸವಿತಾ, ಸದಸ್ಯರಾದ ರವಿ, ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ.ಮನಿಷಾ, ತನ್ವೀರ್ ಅಹಮದ್ ಖಾನ್, ಶ್ರೀಮತಿ ಗೀತಾಂಜಲಿ ಜೆರಾಲ್ಡ್ ಹಾಜರಿದ್ದರು.