ಅಸ್ಪೃಶ್ಯತೆ ಆಚರಣೆ ಬಗ್ಗೆ ಭಾಷಣದ ಮೂಲಕ ಹೇಳುವುದಕ್ಕಿಂತ ಕಲಾತಂಡಗಳ ನಾಟಕದ ಮೂಲಕ ಜನಸಾಮಾನ್ಯರಿಗೆ ಅರಿವು ಮೂಡಿಸುವುದು ಉತ್ತಮ ಮಾರ್ಗವಾಗಿದೆ. ಇದು ಜನರನ್ನು ಪರಿಣಾಮಕಾರಿಯಾಗಿ ತಲುಪುತ್ತದೆ ಎಂದು ಡಾ.ಸುರೇಶ್ ಹೇಳಿದರು.
ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಸೌಹಾರ್ದ ಸಾಂಸ್ಕೃತಿಕ ಕಲಾಸಂಘ ಹನಿಯಂಬಾಡಿ ಇವರ ಸಂಯುಕ್ತಾಶ್ರಯದಲ್ಲಿ ಮಂಡ್ಯ ನಗರದ ಜಿಲ್ಲಾಸ್ಪತ್ರೆ ಹೆರಿಗೆ ವಾರ್ಡ್ ಆವರಣದಲ್ಲಿ ನಡೆದ ಅಸ್ಪೃಶ್ಯತೆ ನಿವಾರಣೆ ಅರಿವು ಕುರಿತ ಬೀದಿ ನಾಟಕ ಪ್ರದರ್ಶನ ಉದ್ಘಾಟಿಸಿ ಅವರು ಮಾತನಾಡಿದರು.
ಮಂಡ್ಯ ವೈದ್ಯಕೀಯ ಕ್ಷೇತ್ರದಲ್ಲಿ ರೋಗಿಯ ರೋಗಕ್ಕನುಗುಣವಾಗಿ ಚಿಕಿತ್ಸೆ ನೀಡಲಾಗುತ್ತದೆಯೇ ವಿನಃ ಜಾತಿ, ಧರ್ಮದ ಆಧಾರದ ಮೇಲೆ ಚಿಕಿತ್ಸೆ ಕೊಡುವುದಿಲ್ಲ. ಅಸ್ಪೃಶ್ಯತೆ ಆಚರಣೆಯಾಗುವುದಿಲ್ಲ ಬದಲಾಗಿ ಸೌಹಾರ್ದತೆ ನೆಲೆಸಿದೆ ಎಂದರು.
ಮಿಮ್ಸ್ ವೈದ್ಯಕೀಯ ಅಧೀಕ್ಷಕ ಡಾ.ಎನ್.ಆರ್.ಶ್ರೀಧರ್ ಮಾತನಾಡಿ, ಜನರಿಗೆ ಆರೋಗ್ಯ ಸಮಸ್ಯೆಯಾದಾಗ ರೋಗಕ್ಕೆ ತಕ್ಕ ವೈದ್ಯರನ್ನು ಹುಡುಕುತ್ತಾರೆ ವಿನಃ ತಮ್ಮದೇ ಸಮುದಾಯದ ವೈದ್ಯರ ಬಳಿಗೆ ಹೋಗುವುದಿಲ್ಲ. ಆದ್ದರಿಂದಲೇ ಆರೋಗ್ಯ ಕ್ಷೇತ್ರದ ಸೌಹಾರ್ದ ವಾತಾವರಣ ಬೇರೆ ಕ್ಷೇತ್ರಗಳಿಗೆ ಮಾದರಿಯಾಗಿದೆ. ಮೂರ್ಛೆ ರೋಗದ ಕುರಿತು ಅರಿವು ಮೂಡಿಸುವ ಕಾರ್ಯಕ್ರಮವನ್ನು ನಡೆಸಲು ಉದ್ದೇಶಿಸಿದ್ದು, ಇಲ್ಲಿಯೂ ಸಹ ಬೀದಿನಾಟಕವನ್ನು ಬಳಸಿಕೊಳ್ಳುವ ಆಲೋಚನೆ ಇದೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಡಾ.ಮನೋಹರ್, ಕಲಾವಿದ ಹನಿಯಂಬಾಡಿ ಶೇಖರ್, ಮಂಗಲ ಯೋಗೇಶ್, ಸಿ.ಬಂದೇಶ್, ಹೆಚ್.ವಿ.ರಾಮಕೃಷ್ಣ, ವೈರಮುಡಿ, ಶಿವಕುಮಾರ್, ಲಕ್ಷ್ಮಿ, ಹೇಮ ಇನ್ನಿತರರಿದ್ದರು.