ಮಂಡ್ಯ ತಾಲೂಕಿನ ಹೆಬ್ಬಕವಾಡಿಯಲ್ಲಿ ವಿದ್ಯುತ್ ಶಾರ್ಟ್ ಸರ್ಕ್ಯೂಟ್ ನಿಂದ ಸಂಭವಿಸಿದ ಅಗ್ನಿ ಅವಘಡದಲ್ಲಿ ಎರಡು ಹುಲ್ಲಿನ ಮೆದೆಗಳು ಹೊತ್ತಿ ಉರಿದು ಭಸ್ಮಗೊಂಡಿವೆ.
ಮಂಡ್ಯ ತಾಲೂಕಿನ ಹೆಬ್ಬಕವಾಡಿ ಗ್ರಾಮದ ಲೇಟ್ ಓಗಿಗೌಡರ ಮಲ್ಲೇಗೌಡ ಮಲ್ಲೇಶ ಅವರಿಗೆ ಸೇರಿದ ಮೆದೆಗಳು ಭಸ್ಮಗೊಂಡು ಸುಮಾರು ₹80 ಸಾವಿರ ರೂ. ನಷ್ಟ ಉಂಟಾಗಿದೆ.
ಗ್ರಾಮದ ಸುತ್ತುಕಟ್ಟೆ ಹತ್ತಿರದ ತೋಟದಲ್ಲಿ ಸುಮಾರು 25 ವರ್ಷಗಳ ಹಿಂದೆಯೇ 11 ಕೆ.ವಿ ಹಾಗೂ ಸೆಕೆಂಡರಿ ವಿದ್ಯುತ್ ಲೈನ್ ನನ್ನು ಅಳವಡಿಸಲಾಗಿತ್ತು. ಇಂದು (ಮಾ.1) ಬೆಳಿಗ್ಗೆ ಸುಮಾರು 8.30ರಿಂದ 9 ಗಂಟೆಯ ಸಮಯದಲ್ಲಿ ತೆಂಗಿನ ಮರದ ಗರಿಗಳಿಗೆ ವಿದ್ಯುತ್ ತಂತಿ ಸ್ಪರ್ಶಿಸಿ, ಬೆಂಕಿಯ ಕಿಡಿಗಳು ಭೂಮಿಗೆ ಬಿದ್ದ ಕಾರಣ ಹುಲ್ಲಿನ ಮೆದೆಗಳಿಗೆ ಬೆಂಕಿ ಹೊತ್ತಿಕೊಂಡಿದೆ ಎಂದು ಸ್ಥಳೀಯರು ತಿಳಿಸಿದ್ದಾರೆ.
ಈ ಬೆಂಕಿ ಅವಘಡದಲ್ಲಿ ಸುಮಾರು 3.5 ಎಕರೆಯಲ್ಲಿ ಬೆಳೆದ ಭತ್ತದ ಹುಲ್ಲು ಸಂಪೂರ್ಣವಾಗಿ ಭಸ್ಮವಾಗಿದೆ. ಬೆಂಕಿ ಹತ್ತಿಕೊಂಡ ಕ್ಷಣದಲ್ಲೆ ಅಗ್ನಿಶಾಮಕ ದಳದವರಿಗೆ ಮಾಹಿತಿ ನೀಡಿಲಾಗಿ, ಅವರು ಕೂಡಲೇ ಧಾವಿಸಿದ್ದರಿಂದ ಅಕ್ಕ ಪಕ್ಕದ ಹುಲ್ಲಿಗೆ ಮೆದೆಗಳಿಗೆ ಬೆಂಕಿ ಹರಡುವುದು ತಪ್ಪಿದಂತಾಗಿದೆ. ಈ ಘಟನೆಯಲ್ಲಿ 4 ತೆಂಗಿನ ಮರಗಳಿಗೆ ಬೆಂಕಿ ತಗುಲಿ ಹಾನಿಯುಂಟಾಗಿದೆ. ಜಾನುವಾರುಗಳಿಗೆ ಮೀಸಲಿಟ್ಟ ಭತ್ತದ ಹುಲ್ಲು ಬೆಂಕಿಗಾಹುತಿಯಾಗಿದ್ದು, ಸೆಸ್ಕ್ ಅಧಿಕಾರಿಗಳು ಪರಿಹಾರ ನೀಡಬೇಕೆಂದು ಮಲ್ಲೇಶ್ ಒತ್ತಾಯಿಸಿದ್ದಾರೆ.