ಸಂವಿಧಾನ ಶಿಲ್ಪಿ ಡಾ. ಬಿ.ಆರ್.ಅಂಬೇಡ್ಕರ್ ಅವರು ಬರಿ ವ್ಯಕ್ತಿಯಲ್ಲ, ಈ ದೇಶದ ಶಕ್ತಿ. ವಿಶ್ವಕ್ಕೆ ಮಾದರಿಯಾಗುವ ಸಂವಿಧಾನವನ್ನು ಬಾಬಾಸಾಹೇಬ್ ಅಂಬೇಡ್ಕರ್ ಅವರು ಕೊಟ್ಟಿದ್ದಾರೆ. ನಾವು ಇಂದು ಸರ್ವ ಸ್ವತಂತ್ರವಾಗಿ ಒಂದಾಗಿ ಬಾಳುತ್ತಿದ್ದೇವೆ ಎಂದರೆ ಅದಕ್ಕೆ ಬಾಬಾಸಾಹೇಬ್ ಅಂಬೇಡ್ಕರ್ ಅವರು ಈ ದೇಶಕ್ಕೆ ಕೊಟ್ಟ ಸಂವಿಧಾನ ಕಾರಣ ಎಂದು ಮಂಡ್ಯ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ವೆಂಕಟರಮಣೇಗೌಡ ಸ್ಟಾರ್ ಚಂದ್ರು ಅವರು ಹೇಳಿದರು.
ಬಾಬಾಸಾಹೇಬ್ ಡಾ. ಬಿ.ಆರ್.ಅಂಬೇಡ್ಕರ್ ಅವರ 133ನೇ ಜಯಂತಿ ಅಂಗವಾಗಿ ಮಂಡ್ಯ ತಾಲ್ಲೂಕಿನ ಹುಳ್ಳೇನಹಳ್ಳಿ, ಶಿವಳ್ಳಿ ಗ್ರಾಮದಲ್ಲಿ ಅಂಬೇಡ್ಕರ್ ಅವರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ ಮಾತನಾಡಿದರು.
ಅಂಬೇಡ್ಕರ್ ಅವರ ತತ್ವ ಸಿದ್ದಾಂತಗಳನ್ನು ನಾವು ಅಳವಡಿಸಿಕೊಂಡು ಅವರು ಹಾಕಿಕೊಟ್ಟ ದಾರಿಯಲ್ಲಿ ಸಾಗಬೇಕಿದೆ. ಸಮಾನತೆ, ಭಾತೃತ್ವ, ನ್ಯಾಯದ ಸಂದೇಶವನ್ನು ಸಾರಿದ ಅಂಬೇಡ್ಕರ್ ಅವರನ್ನು ಆರಾಧಿಸುವುದರ ಜೊತೆಗೆ ಅವರ ಸಿದ್ದಾಂತವನ್ನು ಅನುಸರಿಸಬೇಕಿದೆ ಎಂದು ಕರೆಕೊಟ್ಟರು.
ಅಂಬೇಡ್ಕರ್ ಅವರು ಮಹಿಳಾ ಸಬಲೀಕರಣಕ್ಕೆ ವಿಶೇಷ ಒತ್ತು ನೀಡಿದ್ದರು. ಇದನ್ನು ಮನಗಂಡೇ ಕಾಂಗ್ರೆಸ್ ಸರ್ಕಾರ ಮಹಿಳೆಯರು ಆರ್ಥಿಕವಾಗಿ ಸಬಲರಾಗಲೆಂದು ಗೃಹಲಕ್ಷ್ಮಿ ಗ್ಯಾರಂಟಿ ಯೋಜನೆ ಜಾರಿಗೆ ತಂದಿದೆ. ಕೇಂದ್ರದಲ್ಲಿ ಕಾಂಗ್ರೆಸ್ ಬಂದ ತಕ್ಷಣ ಈ ದೇಶದ ಬಡಮಹಿಳೆಯರಿಗೆ ವರ್ಷಕ್ಕೆ 1 ಲಕ್ಷ ನೀಡುವ ಮಹಾ ಲಕ್ಷ್ಮಿ ಯೋಜನೆಗಳನ್ನು ಕೂಡ ಜಾರಿ ಮಾಡಲಾಗುತ್ತದೆ. ಇದರಿಂದ ಮಹಿಳೆಯರು ಆರ್ಥಿಕವಾಗಿ ಶಕ್ತಿವಂತರಾಗಲಿದ್ದಾರೆ ಎಂದು ಹೇಳಿದರು.
ಶಾಸಕ ದರ್ಶನ್ ಪುಟ್ಟಣ್ಣಯ್ಯ, ವಿಧಾನಪರಿಷತ್ ಸದಸ್ಯರಾದ ದಿನೇಶ್ ಗೂಳಿಗೌಡ, ಎಐಸಿಸಿ ಕಾರ್ಯದರ್ಶಿ ಹಾಗೂ ಕೇರಳದ ಕಾಂಗ್ರೆಸ್ ಶಾಸಕರಾದ ರೋಜಿ ಎಂ. ಜಾನ್, ಮಾಜಿ ಶಾಸಕ ರಾಮಣ್ಣ ಸೇರಿದಂತೆ ಹಲವರು ಇದ್ದರು.