ಕಳೆದ ಎರಡು ದಿನಗಳಿಂದ ಸುರಿದ ಭಾರೀ ಮಳೆಗೆ ಮಂಡ್ಯ ನಗರದಲ್ಲಿರುವ ಶ್ರಮಿಕ ನಿವಾಸಿ(ಸ್ಲಂ)ಗಳ ಜನರ ಬದುಕು ದಾರುಣವಾಗಿದೆ. ತಿ ಭಾರಿ ಮಳೆ ಬಂತೆಂದರೆ ಸ್ಲಂ ಗಳಲ್ಲಿ ವಾಸಿಸುವ ಜನರು ಭಯ, ಆತಂಕದಿಂದ ಕಾಲ ಕಳೆಯಬೇಕಾಗುತ್ತದೆ.
ಭಾರೀ ಮಳೆಗೆ ಮಂಡ್ಯ ನಗರದ ಒಂದನೇ ವಾರ್ಡಿನಲ್ಲಿರುವ ಕಾಳಿಕಾಂಬ ದೇವಾಲಯದ ಹಿಂಭಾಗದಲ್ಲಿರುವ ಕಾಳಿಕಾಂಬ ಸ್ಲಂ ಸಂಪೂರ್ಣವಾಗಿ ಜಲಾವೃತವಾಗಿದೆ. ಎರಡು ದಿನಗಳಿಂದ ಇಲ್ಲಿನ ನಿವಾಸಿಗಳು ನಿದ್ರೆನೇ ಮಾಡಿಲ್ಲ.
ಮಳೆ ನೀರು ಮನೆಗೆ ನುಗ್ಗಿದ ಪರಿಣಾಮ ಎಲ್ಲಾ ವಸ್ತುಗಳು ಮಳೆ ನೀರಿನಲ್ಲಿ ಮುಳುಗಿವೆ. ಬಟ್ಟೆ ಬರೆ,ದವಸ ಧಾನ್ಯ ಬಂದು ನೀರಿನಲ್ಲಿ ನೆಂದು ಹೋಗಿದ್ದು ಜನರು ನಿದ್ದೆ ಇಲ್ಲದೆ ಎರಡು ರಾತ್ರಿಗಳನ್ನು ಕಳೆದಿದ್ದಾರೆ. ಕಾಳಿಕಾಂಬ ಸ್ಲಂನ ಮೂವತ್ತಕ್ಕೂ ಹೆಚ್ಚು ಮನೆಗಳಿವೆ.ಮನೆಗಳ ಸುತ್ತಲೂ ನೀರು ನಿಂತು ಸೊಳ್ಳೆಗಳ ಆವಾಸಸ್ಥಾನವಾಗಿದೆ.
ಹಾಗೆಯೇ ಒಂದನೇ ವಾರ್ಡಿಗೆ ಸೇರಿದ ನಂದ ಟಾಕೀಸ್ ಹಿಂಭಾಗದಲ್ಲಿರುವ ಇಂದಿರಾ ಬಡಾವಣೆಯಲ್ಲಿ ಭಾರೀ ಮಳೆಗೆ ಎರಡು ಮನೆಗಳ ಗೋಡೆ ಕುಸಿದಿದೆ. ಬಡವರ್ಗದ ಜಯಮ್ಮ ಎಂಬುವರ ಗುಡಿಸಲಿನ ಗೋಡೆ ಸಂಪೂರ್ಣವಾಗಿ ಕುಸಿದು ಬಿದ್ದಿದೆ.
ಅಲ್ಲದೆ ಮತ್ತೊಬ್ಬರು ಜಯ ಎಂಬುವವರ ಮನೆ ಮಳೆಗೆ ಕುಸಿದು ಬಿದ್ದಿದೆ. ಜಿಲ್ಲಾಡಳಿತ ಕೂಡಲೇ ಇಂದಿರಾ ಬಡಾವಣೆಯ ಎರಡು ಕುಟುಂಬಗಳ ನೆರವಿಗೆ ಧಾವಿಸಬೇಕು. ಪರಿಹಾರ ಘೋಷಿಸಬೇಕು ಎಂಬುದು ಕರ್ನಾಟಕ ಜನಶಕ್ತಿ ಸಂಘಟನೆಯ ಒತ್ತಾಯವಾಗಿದೆ.
ಶ್ರಮಿಕರತ್ತ ಜಿಲ್ಲಾಡಳಿತ ನೋಡಲಿ
ಮೂಲಭೂತ ಸೌಕರ್ಯಗಳಿಲ್ಲದ ಸಣ್ಣ ಜಾಗದಲ್ಲಿ 50 ರಿಂದ 60 ಗುಡಿಸಲು ಕಟ್ಟಿಕೊಂಡು ಬದುಕುವ ಸ್ಲಂಜನರ ಸಮಸ್ಯೆಗಳನ್ನು ಯಾವುದೇ ಜನಪ್ರತಿನಿಧಿಯಾಗಲಿ ಜಿಲ್ಲಾಡಳಿತವಾಗಲಿ ಬಗೆಹರಿಸುವುದಿಲ್ಲ. ಇಂದಿಗೂ ಶ್ರಮಿಕ ನಿವಾಸಿಗಳ ದಾರುಣ ಸ್ಥಿತಿ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳಿಗೆ ಅರಿವಾಗಿದ್ದರೆ ಇವತ್ತು ಮಂಡ್ಯದಲ್ಲಿ ಸ್ಲಂಗಳೇ ಇರುತ್ತಿರಲಿಲ್ಲ.
ಆದರೆ ಅವರನ್ನು ಮತ ಬ್ಯಾಂಕಿಗಾಗಿ ಮಾತ್ರ ಪರಿಗಣಿಸುವ ರಾಜಕಾರಣಿಗಳು ಆಯ್ಕೆಯಾಗಿ ಹೋದ ಮೇಲೆ ಅವರ ಸಮಸ್ಯೆ ಬಗೆಹರಿಸುವುದಿಲ್ಲ. ಇಂತಹ ಶ್ರಮಿಕರ ಸಮಸ್ಯೆಗಳನ್ನು ಬಗೆಹರಿಸಲು ಇರುವ ಆಡಳಿತ ವ್ಯವಸ್ಥೆಯಲ್ಲಿ ಅಧಿಕಾರಿಗಳು ಕೂಡ ಅವರ ಬದುಕನ್ನು ಸುಧಾರಿಸಲು ಯಾವುದೇ ಕ್ರಮ ತೆಗೆದುಕೊಳ್ಳುವುದಿಲ್ಲ.
ಹೀಗಾಗಿ ಅವರು ಪ್ರತಿ ಮಳೆ ಬಂದ ಸಂದರ್ಭದಲ್ಲಿ ಆತಂಕದಿಂದಲೇ ಬದುಕಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. ಸರ್ಕಾರ ಇನ್ನಾದರೂ ಸ್ಲಂ ನಿವಾಸಿಗಳ ಗೋಳು ಕೇಳಬೇಕಿದ್ದು, ಅವರ ನೆಮ್ಮದಿಯುತ ಬದುಕಿಗೆ ದಾರಿ ಮಾಡಿ ಕೊಡಬೇಕಿದೆ.