ಚುನಾವಣಾ ಬಾಂಡ್ ವಿಚಾರದಲ್ಲಿ ಸುಪ್ರೀಂ ಕೋರ್ಟ್ನಲ್ಲಿ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (ಎಸ್ಬಿಐ) ಪರವಾಗಿ ವಕೀಲರೊಬ್ಬರು ವಾದಿಸಿದ್ದಾರೆ. ಆದರೆ, ಆ ವಕೀಲರು ದೇಶದಲ್ಲೇ ಎರಡನೇ ಅತೀ ದುಬಾರಿ ವಕೀಲರು ಎಂಬುವುದು ಕುತೂಹಲಕಾರಿ ವಿಚಾರ!
ಏಪ್ರಿಲ್ 1, 2019ರಿಂದ ಫೆಬ್ರವರಿ 15, 2024ರ ನಡುವೆ ರಾಜಕೀಯ ಪಕ್ಷಗಳು ಒಟ್ಟು 22,217 ಚುನಾವಣಾ ಬಾಂಡ್ಗಳನ್ನು ಖರೀದಿಸಿದ್ದು, ಇದುವರೆಗೆ 22,030 ಬಾಂಡ್ಗಳನ್ನು ನಗದೀಕರಿಸಲಾಗಿದೆ ಎಂದು ಎಸ್ಬಿಐ ಸುಪ್ರೀಂ ಕೋರ್ಟ್ಗೆ ಅಫಿಡವಿಟ್ನಲ್ಲಿ ಈಗಾಗಲೇ ತಿಳಿಸಿದೆ. ಬಾಂಡ್ಗೆ ಸಂಬಂಧಿಸಿದ ಎಲ್ಲ ದಾಖಲೆಗಳನ್ನು ಎಸ್ಬಿಐ ಹೊಂದಿದೆ. ಬಾಂಡ್ಗಳ ಖರೀದಿ, ಖರೀದಿದಾರರ ಹೆಸರು, ಮೊತ್ತ ನಗದು ಮಾಡಿದ ದಿನಾಂಕ, ದೇಣಿಗೆ ಸ್ವೀಕರಿಸಿದ ರಾಜಕೀಯ ಪಕ್ಷಗಳ ವಿವರಗಳನ್ನು ಆಯೋಗಕ್ಕೆ ನೀಡಲಾಗಿದೆ ಎಂದು ಅಫಿಡವಿಟ್ನಲ್ಲಿ ತಿಳಿಸಲಾಗಿದೆ.
ಇನ್ನು ಎಸ್ಬಿಐ ಚುನಾವಣಾ ಬಾಂಡ್ನ ಮಾಹಿತಿಯನ್ನು ನೀಡಲು ಸುಪ್ರೀಂ ಕೋರ್ಟ್ನಲ್ಲಿ ನಾಲ್ಕು ತಿಂಗಳ ಅವಕಾಶ ಕೇಳಿದಾಗ ನಮಗೆ ಸರ್ಕಾರ ಏನೋ ಮಾಹಿತಿ ಮುಚ್ಚಿಡಲು ಎಸ್ಬಿಐ ಮುಖಾಂತರ ಪ್ರಯತ್ನ ಮಾಡುತ್ತಿದೆ ಎಂಬ ಅನುಮಾನವೇನೋ ಬಂದಿದೆ. ಆದರೆ ಅದಕ್ಕಾಗಿ ಇಷ್ಟೊಂದು ಖರ್ಚು ಮಾಡುತ್ತದೆ ಎಂಬುವುದು ನಾವು, ನೀವು ಊಹಿಸಿರಲಾರೆವು.
ಎಸ್ಬಿಐ ಒಂದು ಸರ್ಕಾರಿ ಸ್ವಾಮ್ಯದ ಬ್ಯಾಂಕ್, ಸರ್ಕಾರದ ವಕೀಲರೇ ಎಸ್ಬಿಐನ ಯಾವುದೇ ಪ್ರಕರಣದಲ್ಲಿ ಎಸ್ಬಿಐ ಪರವಾಗಿ ವಾದ ಮಾಡಬಹುದು. ಚುನಾವಣಾ ಬಾಂಡ್ ವಿಚಾರದಲ್ಲೂ ಸರ್ಕಾರದ ವಕೀಲರೇ ವಾದ ಮಾಡಬಹುದು. ಆದರೆ ಎಸ್ಬಿಐ ಮಾತ್ರ ಹರೀಶ್ ಸಾಲ್ವೆಯಂತಹ ದುಬಾರಿ ವಕೀಲರನ್ನು ನೇಮಿಸಿಕೊಂಡಿದೆ. ಇದನ್ನು ನೋಡಿದಾಗ ಎಸ್ಬಿಐ ಏನೋ ಮಾಹಿತಿಯನ್ನು ಮುಚ್ಚಿಡಲು ಇಷ್ಟೊಂದು ಖರ್ಚು ಮಾಡುತ್ತಿದೆ ಎಂಬ ಅನುಮಾನ ಬರುವುದು ಸಾಮಾನ್ಯ.
ಯಾವುದೇ ಒಂದು ಪ್ರಕರಣವಾದರೂ ಕೂಡಾ ನಾವು ಗೆಲ್ಲಬೇಕಾದರೆ ಅದನ್ನು ಗೆಲ್ಲಬಲ್ಲಂತಹ ವಕೀಲರನ್ನು ನೇಮಿಸಿಕೊಳ್ಳುವುದು ಸಹಜ. ಆದರೆ ನಮಗೆ ಉತ್ತಮ ವಕೀಲರು ಬೇಕಾದರೆ ಅಧಿಕ ಖರ್ಚು ಕೂಡಾ ಮಾಡಬೇಕಾಗುತ್ತದೆ ಎಂಬ ಮಾತಿದೆ. ಎಸ್ಬಿಐ ಅತೀ ದುಬಾರಿ ವಕೀಲರನ್ನು ಚುನಾವಣಾ ಬಾಂಡ್ ಪ್ರಕರಣದಲ್ಲಿ ವಾದಿಸಲು ನೇಮಿಸಿರುವಾಗ ಈ ಮೇಲಿನ ಮಾತು ನೆನಪಿಗೆ ಬರುತ್ತದೆ.
ವಕೀಲ ಹರೀಶ್ ಸಾಲ್ವೆ ಪಡೆಯುವ ಹಣ ಎಷ್ಟು ಗೊತ್ತಾ?
ದೇಶದಲ್ಲಿ ಅತೀ ದುಬಾರಿ ವಕೀಲ ಫಾಲಿ ಸ್ಯಾಮ್ ನಾರಿಮನ್ ಆಗಿದ್ದು ಪ್ರತಿ ಸಲ ಕೋರ್ಟ್ನಲ್ಲಿ ಹಾಜರಾಗಲು 10-15 ಲಕ್ಷ ರೂಪಾಯಿ ಪಡೆಯುತ್ತಾರೆ. ದೇಶದಲ್ಲೇ ದುಬಾರಿ ವಕೀಲರ ಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿರುವ ಹರೀಶ್ ಸಾಲ್ವೆ ಕೋರ್ಟ್ನಲ್ಲಿ ಒಂದು ಸಲ ಬಂದು ನಿಲ್ಲಲು (appearance fees) 12-14 ಲಕ್ಷ ರೂಪಾಯಿ ಪಡೆಯುತ್ತಾರೆ.
ಕೋರ್ಟ್ನ ಒಂದು ಅಪೀಯರಿಂಗ್ಗೆ 12-14 ಲಕ್ಷ ರೂಪಾಯಿ ಪಡೆಯುವ, ದೇಶದಲ್ಲೇ ಎರಡನೇ ಅತೀ ದುಬಾರಿ ವಕೀಲರನ್ನು ಎಸ್ಬಿಐ ನೇಮಿಸಿಕೊಂಡಿದೆ. ಈ ಪ್ರಕರಣದಲ್ಲಿ ಎಸ್ಬಿಐಗೆ ಅಷ್ಟೊಂದು ಖರ್ಚು ಮಾಡುವ ಅಗತ್ಯವೇನಿದೆ? ಇಷ್ಟೊಂದು ಖರ್ಚು ಮಾಡಬೇಕಾದರೆ ದಾಲ್ ಮೆ ಕುಚ್ ಕಾಲಾ ಹೇ ಅನ್ನೋ ಮಾತು ನೆನಪಾಗುತ್ತದೆ.
ಎಸ್ಬಿಐ ಒಂದು ಸರ್ಕಾರಿ ಬ್ಯಾಂಕ್, ಈ ಬ್ಯಾಂಕ್ ನಮ್ಮ ನಿಮ್ಮ ಹಣದಿಂದ ನಡೆಯುತ್ತದೆ. ಯಾವುದೋ ಒಂದು ಪಕ್ಷದ ಹಿತಾಸಕ್ತಿಗಾಗಿ ನಮ್ಮ ಹಣವನ್ನು ಖರ್ಚು ಮಾಡುವುದನ್ನು ನಾವು ಈಗ ಪ್ರಶ್ನೆ ಮಾಡಬೇಕಾಗುತ್ತದೆ.
ಎಸ್ಬಿಐ ಮತ್ತು ಸರ್ಕಾರಕ್ಕೆ ಯಾಕಿಷ್ಟು ಆತಂಕ?
ಸುಪ್ರೀಂ ತರಾಟೆಗೆ ತೆಗೆದುಕೊಂಡ ಬಳಿಕ ಎಸ್ಬಿಐ ಚುನಾವಣಾ ಬಾಂಡ್ನ ಮಾಹಿತಿ ನೀಡಿದೆ. ಆದರೆ ಎಸ್ಬಿಐ ನೀಡಿರುವ ಮಾಹಿತಿಯಲ್ಲಿ ಯಾರು ಯಾರಿಗೆ ದೇಣಿಗೆ ನೀಡಿದ್ದಾರೆ ಎಂಬ ಮಾಹಿತಿ ತಿಳಿಯಲು ಸಾಧ್ಯವಾಗುವ ಮ್ಯಾಚಿಂಗ್ ಕೋಡ್ ಇಲ್ಲ ಎಂದು ಇಂಡಿಯನ್ ಎಕ್ಸ್ಪ್ರೆಸ್ ವರದಿ ಮಾಡಿದೆ. ಆದರೆ ಎಸ್ಬಿಐ ಈಗ ಎಲ್ಲ ಮಾಹಿತಿಯನ್ನು ನಾವು ಚುನಾವಣಾ ಆಯೋಗಕ್ಕೆ ನೀಡಿರುವುದಾಗಿ ಸುಪ್ರೀಂ ಕೋರ್ಟ್ಗೆ ತಿಳಿಸಿದೆ.
ಈ ಚುನಾವಣಾ ಬಾಂಡ್ನ ಮಾಹಿತಿ ಹೊರಬಿದ್ದರೆ, ನಷ್ಟದಲ್ಲಿದ್ದರೂ ಯಾವುದೋ ರಾಜಕೀಯ ಪಕ್ಷಗಳ ಆಮಿಷಕ್ಕೆ, ಒತ್ತಡಕ್ಕೆ ಒಳಗಾಗಿ ಚುನಾವಣಾ ಬಾಂಡ್ ಮೂಲಕ ದೇಣಿಗೆ ನೀಡಿದ ಸಂಸ್ಥೆಗಳ ಮಾಹಿತಿ, ಹಾಗೆಯೇ ಮೊಕದ್ದಮೆ ಹಿಂಪಡೆಯಲು, ಜಾಮೀನು ಪಡೆಯಲು ದೇಣಿಗೆ ನೀಡಿದವರ ಮಾಹಿತಿ, ವಿದೇಶಿ ದೇಣಿಗೆ ಬಗ್ಗೆಯೂ ಮಾಹಿತಿ, ಮುಖ್ಯವಾಗಿ ಯಾವ ಪಕ್ಷ ಇಂತಹ ದೇಣಿಗೆ ಪಡೆದಿದೆ ಎಂಬುವುದು ತಿಳಿಯುವ ಸಾಧ್ಯತೆಯಿದೆ. ಇದರಿಂದಾಗಿ ಕೇಂದ್ರದಲ್ಲಿ ಆಡಳಿತ ನಡೆಸುತ್ತಿರುವ ಬಿಜೆಪಿ ಸರ್ಕಾರ ತಲೆ ತಗ್ಗಿಸಬೇಕಾಗುವುದು ಖಚಿತ.
2018ರಲ್ಲಿ ಜಾರಿಯಾದ ಈ ಕಾನೂನು ಭಾರತದ ರಾಜಕೀಯ ಪಕ್ಷಗಳಿಗೆ ದೊರೆಯುವ ವಿದೇಶಿ ಚಂದಾ ಮೇಲಿನ ತನಿಖೆಗೆ ಬ್ರೇಕ್ ಹಾಕಿದೆ. ಕಾನೂನು 2018ರಲ್ಲಿ ಬಂದಿದರೂ ಭಾರತದಲ್ಲಿ 1976ರಿಂದ ಈವರೆಗೆ ಪಕ್ಷಗಳಿಗೆ ಬಂದಿರುವ ವಿದೇಶಿ ಚಂದಾದ ಬಗ್ಗೆ ತನಿಖೆ ನಡೆಸಲು ಅವಕಾಶ ನೀಡಿಲ್ಲ. ಇಂತಹ ಯಾವುದೋ ಒಂದು ಮಾಹಿತಿಯನ್ನು ಬಚ್ಚಿಡಲು ಎಸ್ಬಿಐ ದೇಶದಲ್ಲೇ ಎರಡನೇ ಅತೀ ದುಬಾರಿ ವಕೀಲರನ್ನು ನೇಮಿಸಿಕೊಂಡಿತ್ತು ಎಂಬುವುದು ಇಲ್ಲಿ ಸ್ಪಷ್ಟವಾಗುತ್ತದೆ.