ಪಠ್ಯದ ಜೊತೆಗೆ ಪಠ್ಯೇತರ ಚಟುವಟಿಕೆಗಳು ಮಕ್ಕಳ ಬೆಳವಣಿಗೆಗೆ ಪೂರಕವಾಗಿದೆ ಎಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಅಭಿವೃದ್ದಿ ಜಿಲ್ಲಾ ಉಪ ನಿರ್ದೇಶಕ ರಾಜಮೂರ್ತಿ ಅಭಿಪ್ರಾಯ ವ್ಯಕ್ತಪಡಿಸಿದರು.
ಪಟ್ಟಣದ ಸ್ತ್ರೀ ಶಕ್ತಿ ಭವನದಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆ ಮತ್ತು ಬಾಲ ಭವನ ಇವರ ಸಂಯುಕ್ತಾಶ್ರಯದಲ್ಲಿ ನಡೆಯುತ್ತಿರುವ ಬೇಸಿಗೆ ಶಿಬಿರ ಉದ್ಘಾಟನಾ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಮಕ್ಕಳ ಸರ್ವತೋಮುಖ ಬೆಳೆವಣಿಗೆಗೆ, ದೈಹಿಕ, ಮಾನಸಿಕ ,ಶೈಕ್ಷಣಿಕ ಅಭಿವೃದ್ದಿಗೆ ಶಿಬಿರ ಸಹಕಾರಿಯಾಗಿದೆ ಎಂದರು.
ಸ್ಪರ್ಧಾತ್ಮಾಕ ಪ್ರಪಂಚದಲ್ಲಿ ಎಷ್ಟು ಓದಿದರೂ ಸಾಲದಾಗಿದೆ. ಎಷ್ಟೇ ದೊಡ್ಡವರಾದರೂ ಕಲಿಕೆ ಎಂಬುವುದು ನಿರಂತರವಾಗಿರುತ್ತದೆ, ಶಿಬಿರದಲ್ಲಿ ತಿಳಿಸುವ ವಿಷಯಗಳನ್ನು ಸಮರ್ಪಕವಾಗಿ ಮನವರಿಕೆ ಮಾಡಿಕೊಂಡು ಸದುಪಯೋಗ ಪಡಿಸಿಕೊಳ್ಳಬೇಕೆಂದು ಹೇಳಿದರು.
ಪುರಸಭೆ ಉಪಾಧ್ಯಕ್ಷ ನಂದಕುಮಾರ್ ಮಾತನಾಡಿ, ಪಟ್ಟಣಕ್ಕೆ ಮಾತ್ರ ಸೀಮಿತವಾಗಿರುವ ಬೇಸಿಗೆ ಶಿಬಿರವನ್ನು ಗ್ರಾಮೀಣ ಮಕ್ಕಳಿಗೂ ಸಿಗಬೇಕೆಂಬ ಆಕಾಂಕ್ಷೆಯೊಂದಿಗೆ ಸರ್ಕಾರ ಆಯೋಜನೆ ಮಾಡಿದೆ. ವಿದ್ಯಾರ್ಥಿಗಳು ಇದನ್ನು ಸಮರ್ಪಕವಾಗಿ ಬಳಸಿಕೊಳ್ಳಬೇಕೆಂದು ತಿಳಿಸಿದರು.
ಇದೇ ಸಂದರ್ಭದಲ್ಲಿ ಮಕ್ಕಳ ವೈದ್ಯೆ ಡಾ. ವಿಮೋಚನಾ, ಡಿಸಿಪಿಓ ಕುಮಾರ್, ನೃತ್ಯ ನಿರ್ದೇಶಕ ಶಿವಕುಮಾರ್, ಯೋಗ-ಗುರು ದೊಡ್ಡಣ್ಣ, ಮಹದೇವಮ್ಮ, ಶೈಲಜ ಸೇರಿದಂತೆ ಇತರರಿದ್ದರು.