ಕೌಟುಂಬಿಕ ಒಳ ಜಗಳದ ಹಿನ್ನೆಲೆಯಲ್ಲಿ ಡೆತ್ ನೋಟ್ ಬರೆದಿಟ್ಟು ಮಗುವಿನೊಂದಿಗೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಾಗಮಂಗಲ ತಾಲೂಕಿನ ಕೆಂಚೇಗೌಡನ ಕೊಪ್ಪಲಿನಲ್ಲಿ ಸಂಭವಿಸಿದೆ.
ಜಿಲ್ಲಾ ಪಂಚಾಯತ್ ಮಾಜಿ ಸದಸ್ಯೆ ಸುನಂದ ದೊರೆಸ್ವಾಮಿ ದಂಪತಿಯ ಪುತ್ರಿ ಬಿಂಧು(25) ತನ್ನ 10 ತಿಂಗಳ ಮಗುವಿನೊಂದಿಗೆ ಮನೆಯಲ್ಲೇ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುತ್ತಾರೆ.
ಪಟ್ಟಣದ ಕುಂಬಾರ ಬೀದಿಯ ವಾಸಿ ನವೀನ್ ಎಂಬುವ ರೊಂದಿಗೆ ಕಳೆದ ನಾಲ್ಕು ವರ್ಷಗಳ ಹಿಂದೆ ಕುಟುಂಬಸ್ಥರ ವಿರೋಧದ ನಡುವೆಯೂ ಪ್ರೀತಿಸಿ ಅಂತರ್ಜಾತಿ ವಿವಾಹ ಮಾಡಿಕೊಂಡಿದ್ದ ಬಿಂಧು ಕೆಲಕಾಲ ಅನೂನ್ಯವಾಗಿದ್ದರು.
ಬರಬರುತ್ತಾ ದಂಪತಿಗಳ ನಡುವೆ ಸಣ್ಣ ಪುಟ್ಟ ವಿಚಾರಕ್ಕೆ ಆಗಾಗ ಜಗಳವಾಗುತ್ತಿತ್ತು ಎಂದು ಸ್ಥಳೀಯರು ತಿಳಿಸಿದ್ದಾರೆ.
ತನ್ನ ಮಾವ, ಅತ್ತೆ ಮತ್ತು ನಾದಿನಿ ಮೂವರು ನಿರಂತರವಾಗಿ ಕಿರುಕುಳ ನೀಡುತ್ತಿದ್ದರು. ಪತಿ ನವೀನ್ ಬೇರೊಬ್ಬ ಮಹಿಳೆಯೊಂದಿಗೆ ಅನೈತಿಕ ಸಂಬಂಧ ಹೊಂದಿದ್ದಾರೆ ಎಂಬ ಕಾರಣಕ್ಕೆ ಬೇಸತ್ತು ಈ ನಿರ್ಧಾರ ತೆಗೆದುಕೊಂಡಿರುವುದಾಗಿ ಡೆತ್ ನೋಟ್ ನಲ್ಲಿ ತಿಳಿಸಲಾಗಿದೆ.
ಮಧ್ಯಾಹ್ನ ಮನೆಯಲ್ಲಿಯೇ ಊಟ ಬಡಿಸಿದಳು, ನಂತರ ಕೆಲಸದ ಮೇಲೆ ಹೊರಟು ಹೋದೆ, ಯಾರು ಇಲ್ಲದ ವೇಳೆ ಒಂದೇ ವೇಲ್ ನಿಂದ ಮಗು ಮತ್ತು ತಾಯಿ ನೇಣು ಬಿಗಿದುಕೊಂಡಿರುವುದು ತುಂಬಾ ರೋಧನೆ ಉಂಟು ಮಾಡಿದೆ ಎಂದು ಬಿಂಧುವಿನ ತಂದೆ ದೊರೆಸ್ವಾಮಿ ಆಕ್ರಂದನ ವ್ಯಕ್ತಪಡಿಸಿದ್ದರು.
ಪಿಎಸ್ಐ ರವಿಶಂಕರ್ ಪರಿಶೀಲನೆ ನಡೆಸಿದ ಬಳಿಕ ತಾಯಿ ಮತ್ತು ಮಗುವಿನ ಮೃತ ದೇಹಗಳನ್ನು ಪಟ್ಟಣದ ಸಾರ್ವಜನಿಕ ಆಸ್ಪತ್ರೆಯ ಶವಾಗಾರಕ್ಕೆ ರವಾನಿಸಿ ಮರಣೋತ್ತರ ಪರೀಕ್ಷೆಗೆ ಒಳಪಡಿಸಿದ್ದಾರೆ.
ಬಿಂಧುವಿನ ತಂದೆ ದೊರೆಸ್ವಾಮಿ ನೀಡಿರುವ ದೂರಿನ ಆಧಾರದ ಮೇಲೆ ಪ್ರಕರಣ ದಾಖಲಿಸಿ ಕೊಂಡಿರುವುದಾಗಿ ಪೊಲೀಸರು ತಿಳಿಸಿದ್ದಾರೆ.