ರಾಜ್ಯದ ರೈತರು ಭೀಕರ ಬರಗಾಲದ ಪ್ರಯುಕ್ತ ಪ್ರಸ್ತುತ ಸಂಕಷ್ಟ ಪರಿಸ್ಥಿತಿಯಲ್ಲಿದ್ದು ರೈತರ ಶ್ರೇಯೋಭಿವೃದ್ಧಿಗೆ ಸರ್ಕಾರ, ಜಿಲ್ಲಾಡಳಿತ ಕಟಿಬದ್ಧರಾಗಿರಬೇಕು. ಅಸಮರ್ಪಕ ನೀರು ಪೂರೈಕೆ, ಬಿತ್ತನೆ, ಗೊಬ್ಬರ ದರಗಳಲ್ಲಿ ಹೇರಿಕೆಯಾಗಿರುವುದರಿಂದ ರೈತನ ಜೀವನ ನಿರ್ವಹಣೆ ತುಂಬಾ ಸಂಕಷ್ಟಕ್ಕೆ ಸಿಲುಕಿದೆ, ಅದ್ದರಿಂದ ಬೆಲೆ ಇಳಿಕೆ ಮಾಡಿ ಅನುಕೂಲ ಮಾಡಿಕೊಡುವಂತೆ ಆಗ್ರಹಿಸಿ ರೈತಸಂಘ (ಮೂಲ ಸಂಘಟನೆ) ಕಾರ್ಯಕರ್ತರು ಮಂಡ್ಯ ಜಿಲ್ಲಾಧಿಕಾರಿ ಕಚೇರಿ ಎದುರು ಶನಿವಾರ ಪ್ರತಿಭಟನೆ ನಡೆಸಿದರು.
ಕೆ.ಆರ್.ಎಸ್. ವ್ಯಾಪ್ತಿಯ ಕೈಗಾಲುವೆಗಳು ಶಿಥಿಲಾವಸ್ಥೆಯಲ್ಲಿದ್ದು, ನೀರು ಕೊನೆ ಬಯಲಿಗೆ ಸಮರ್ಪಕವಾಗಿ ಹರಿಯುತ್ತಿಲ್ಲವಾದ್ದರಿಂದ ಶೀಘ್ರವಾಗಿ ಕೈಗಾಲುವೆಗಳ ಹೂಳು ತೆಗೆಸಿ, ಅಭಿವೃದ್ಧಿಪಡಿಸಬೇಕು ಮತ್ತು ಮುಂಗಾರು ಬೆಳೆ ಸಿದ್ದತೆಗೆ ಹಾಗು ಹಾಲಿ ಇರುವ ಬೆಳೆಗಳಿಗೆ ನೀರಿನ ಅಗತ್ಯವಿರುವುದರಿಂದ ನಾಲೆಗಳಿಗೆ ಕೂಡಲೇ ನೀರು ಬಿಡಬೇಕು. ಸರ್ಕಾರದ ವತಿಯಿಂದ ರೈತರಿಗೆ ಉಚಿತ ಬಿತ್ತನೆ ಬೀಜ ವಿತರಣೆಗೆ ಕ್ರಮವಹಿಸಬೇಕೆಂದು ಆಗ್ರಹಿಸಿದರು.
ಕೇಂದ್ರ ಸರ್ಕಾರ ಪ್ರಸಕ್ತ ಸಾಲಿನ ಕಬ್ಬು ಬೆಳೆಗೆ ಟನ್ ಒಂದಕ್ಕೆ ಎಫ್.ಆರ್.ಪಿ. ದರ ರೂ. 3,150/- ಗಳನ್ನು ನಿಗಧಿಪಡಿಸಿದ್ದು. ಈ ದರವನ್ನು ಪರಿಷ್ಕರಿಸಿ ಟನ್ ಒಂದಕ್ಕೆ ರೂ. 4.500/- ಗಳನ್ನು ನೀಡಬೇಕು. ರಾಜ್ಯ ಸರ್ಕಾರದ ಪ್ರೋತ್ಸಾಹಧನ ಎಸ್.ಎ.ಪಿ. ರೂ. 500/- ಗಳನ್ನು ಕೊಡಬೇಕು ಮತ್ತು ಕಾರ್ಖಾನೆ ವ್ಯಾಪ್ತಿಯ ರೈತರಿಗೆ ಸರ್ಕಾರ ಮತ್ತು ಕಾರ್ಖಾನೆ ವತಿಯಿಂದ ಉಚಿತ ಕಬ್ಬು ಬಿತ್ತನೆ ಬೀಜ ವಿತರಣೆಗೆ ಕ್ರಮವಹಿಸಬೇಕು ಎಂದು ಒತ್ತಾಯಿಸಿದರು.
ಕೊಬ್ಬರಿ ಬೆಲೆಯಲ್ಲಿ ನಷ್ಟ ಅನುಭವಿಸುತ್ತಿರುವ ರೈತರಿಗೆ ಕನಿಷ್ಠ ಕ್ವಿಂಟಾಲ್ ಒಂದಕ್ಕೆ ರೂ. 18,000/- ಗಳನ್ನು ನಿಗಧಿಮಾಡಬೇಕು. ನಾಗಮಂಗಲ ತಾಲ್ಲೂಕು, ಬಿಂಡಿಗನವಿಲೆ ಖರೀದಿಯಲ್ಲಿ ರಾಜ್ಯ ಸರ್ಕಾರ ಪ್ರೋತ್ಸಾಹಧನ ಕ್ವಿಂಟಾಲ್ ಒಂದಕ್ಕೆ ರೂ. 1,500/- ಗಳನ್ನು ನಿಗಧಿಪಡಿಸಿದ್ದು, ಕೂಡಲೇ ರೈತರಿಗೆ ಪ್ರೋತ್ಸಾಹಧನ ವಿತರಣೆ ಮಾಡಬೇಕೆಂದು ಆಗ್ರಹಿಸಿದರು.
ರೈತಸಂಘದ ಇಂಡವಾಳು ಚಂದ್ರಶೇಖರ್, ಕೆ ನಾಗೇಂದ್ರ ಸ್ವಾಮಿ, ಕೆ ರಾಮಲಿಂಗೇಗೌಡ, ಎಸ್. ಮಂಜೇಶ್ ಗೌಡ, ಸೊಳ್ಳೆಪುರ ಪ್ರಕಾಶ್, ಎಚ್ ಜೆ ಪ್ರಭುಲಿಂಗು, ಯರಗನಹಳ್ಳಿ ರಾಮಕೃಷ್ಣಯ್ಯ, ಅಣ್ಣೂರು ಮಹೇಂದ್ರ,ಕೀಳಘಟ್ಟ ನಂಜುಂಡಯ್ಯ, ಕುದರಗುಂಡಿ ನಾಗರಾಜ್ ಸೇರಿದಂತೆ ಮತ್ತಿತರರು ಭಾಗವಹಿಸಿದ್ದರು.