ಹೆಣ್ಣು ಭ್ರೂಣ ಹತ್ಯೆ ಇವತ್ತು ಒಂದು ಸಾಮಾಜಿಕ ಪಿಡುಗಾಗಿದೆ, ಪುತ್ರ ವ್ಯಾಮೋಹದಿಂದ ಗಂಡು ಶ್ರೇಷ್ಠ, ಹೆಣ್ಣು ಕನಿಷ್ಠ ಕುಟುಂಬದಲ್ಲಿ ಮಕ್ಕಳನ್ನು ಬೆಳೆಸುವಾಗಲೇ, ತಾಯಿಯ ಗರ್ಭದಲ್ಲೆ ಲಿಂಗ ತಾರತಮ್ಯ ಮಾಡುತ್ತೀದೇವೆ ಹೆಣ್ಣು ಮಕ್ಕಳನ್ನು ನೋಡುವ ದೃಷ್ಠಿಕೋನ ಬದಲಾಗಬೇಕು ಎಂದು ಸಿಐಟಿಯು ಪ್ರಧಾನ ಕಾರ್ಯದರ್ಶಿ ಸಿ. ಕುಮಾರಿ ಹೇಳಿದರು.
ವಿಮೋಚನ ಮಹಿಳಾ ಸಂಘಟನೆ ಬೆಂಗಳೂರು ಮಂಡ್ಯ ಶಾಖೆ ಹಾಗೂ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಮಂಡ್ಯ, ಪ್ರಾಥಮಿಕ ಆರೋಗ್ಯ ಕೇಂದ್ರ ಹಳೆ ಬೂದನೂರು ಇವರ ಸಂಯುಕ್ತ ಆಶ್ರಯದಲ್ಲಿ ಗರ್ಭಿಣಿ ಮಹಿಳೆಯರು, ಅಶಾ ಕಾರ್ಯಕರ್ತೆಯರು, ಅಂಗನವಾಡಿ ಹಾಗೂ ಆರೋಗ್ಯ ಕಾರ್ಯಕರ್ತೆರಿಗೆ ಮಂಡ್ಯ ತಾಲ್ಲೂಕಿನ ಹಳೇ ಬೂದನೂರಿನಲ್ಲಿ ನಡೆದ ಗರ್ಭಪೂರ್ವ ಮತ್ತು ಪ್ರಸವ ಪೂರ್ವ ಭ್ರೂಣಲಿಂಗ ಪತ್ತೆ ನಿಷೇಧ ಕಾಯ್ದೆ ಮತ್ತು ಹೆಣ್ಣು ಭ್ರೂಣಹತ್ಯೆ ತಡೆ ಕುರಿತು ಜಾಗೃತಿ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಲಿಂಗ ಅಸಮಾನತೆ ಹೋಗಲಾಡಿಸಲು ಗಂಡು ಮಕ್ಕಳ ಪಾತ್ರ ಹೆಚ್ಚಿದೆ, ಕೆಲವು ವೈದ್ಯರು ಹಣದ ಆಸೆಗಾಗಿ ಲಿಂಗಪತ್ತೆ ಮಾಡಿದ ಪರಿಣಾಮ ಮದುವೆಯಾಗಲು ಹೆಣ್ಣು ಸಿಗುತ್ತಿಲ್ಲ, ಇಂತವರಿಗೆ ಕಠಿಣ ಶಿಕ್ಷೆ ಆಗಬೇಕು, ಈ ಬಗ್ಗೆ ವಿಮೋಚನ ಮಹಿಳಾ ಸಂಘಟನೆ ಹೋರಾಟ ಮಾಡುತ್ತಿದೆ ಎಂದರು.
ವಿಮೋಚನ ಸಂಘಟನೆಯ ಜಿಲ್ಲಾ ಸಲಹಾ ಸಮಿತಿ ಸದಸ್ಯ ಜನಾರ್ಧನ್ ಮಾತನಾಡಿ, ವಿಮಂಡ್ಯ ಜಿಲ್ಲೆ ಯ ಲಿಂಗಾನುಪಾತ 1000 ಗಂಡು ಮಕ್ಕಳಿಗೆ 889 ಹೆಣ್ಣು ಮಕ್ಕಳಿದ್ದಾರೆ. ಕಾನೂನು ಉಲ್ಲಂಘನೆ ಮಾಡಿ ಲಿಂಗ ಪತ್ತೆ ಮತ್ತು ಹತ್ಯೆ ಮಾಡುತಿದ್ದಾರೆ, ಇದರ ಪರಿಣಾಮವಾಗಿ ಹೆಣ್ಣು ಮಕ್ಕಳ ಮೇಲೆ ಹಲವಾರು ರೀತಿಯ ದೌರ್ಜನ್ಯಗಳು ,ಬಾಲ್ಯ ವಿವಾಹ ಹೆಚ್ಚಾಗಿ ನಡೆಯುತ್ತಿವೆ ಎಂದು ಆತಂಕ ವ್ಯಕ್ತಪಡಿಸಿದರು.
ಜಿಲ್ಲೆಯಲ್ಲಿ ಬಾಲ ಗರ್ಭಿಣಿಯ ಸಂಖ್ಯೆ ಹೆಚ್ಚಾಗಿವೆ, ನಿಮ್ಮ ಅಕ್ಕ ಪಕ್ಕ ಇಂತಹ ಘಟನೆಗಳು ನಡೆದರೆ ದೂರು ನೀಡಬೇಕು. ಹೆಣ್ಣುಭ್ರೂಣ ಹತ್ಯೆ ಬಗ್ಗೆ ಮಾಹಿತಿ ನೀಡಿದವರಿಗೆ 1 ಲಕ್ಷ ಬಹುಮಾನವಿದೆ, ಕಾನೂನಿಂದ ಎಲ್ಲರನ್ನು ಬದಲಾಯಿಸಲು ಸಾಧ್ಯವಿಲ್ಲ, ಜನರ ಮತ್ತು ವೈದ್ಯರ ಮನಸ್ಥಿತಿ ಹಾಗೂ ಹೆಣ್ಣು ಮಕ್ಕಳನ್ನು ನೋಡುವ ದೃಷ್ಠಿಕೋನ ಬದಲಾಗಬೇಕಾಗಿದೆಮ ಇದಕ್ಕೆ ಜಾಗೃತಿ ಕಾರ್ಯಕ್ರಮ ಗಳನ್ನು ಹೆಚ್ಚು ಮಾಡಬೇಕು ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಆಡಳಿತ ವೈದ್ಯಾಧಿಕಾರಿ ಡಾ.ಶರತ್ ಚಂದ್ರ, ವಿಮೋಚನ ಮಹಿಳಾ ಸಂಘಟನೆಯ ಇಂಪನ, ಆರೋಗ್ಯ ಕಾರ್ಯಕರ್ತೆಯರು, ಅಶಾ ಕಾರ್ಯಕರ್ತೆಯರು, ಗರ್ಭಿಣಿ ಮಹಿಳೆಯರು ಆಸ್ಪತ್ರೆಯ ಸಿಬ್ಬಂದಿ ವರ್ಗವರು ಭಾಗವಹಿಸಿದ್ದರು.