ರಾಜ್ಯದ ರೈತರ ಹಿತ ಕಾಪಾಡಲು ವಿಫಲವಾಗಿರುವ ರಾಜ್ಯ ಹಾಗೂ ಕೇಂದ್ರ ಸರ್ಕಾರಗಳ ವಿರುದ್ದ ಜಿಲ್ಲಾ ರೈತ ಹಿತರಕ್ಷಣಾ ಸಮಿತಿಯು ನಡೆಸುತ್ತಿರುವ ಹೋರಾಟ 61ನೇ ದಿನಕ್ಕೆ ಕಾಲಿಟ್ಟಿದ್ದು, ಇಂದು ಸ್ಥಳೀಯ ಮುಖಂಡರು ಭಾಗವಹಿಸಿ ಬೆಂಬಲ ವ್ಯಕ್ತಪಡಿಸಿದರು.
ರಾಜ್ಯ ಸರ್ಕಾರ ಪ್ರಾಧಿಕಾರದ ಆದೇಶವನ್ನು ಪಾಲಿಸಬಾರದು, ನೀರು ಬಿಡುವುದಿಲ್ಲ ಎಂಬ ನಿರ್ಧಾರಕ್ಕೆ ಬದ್ದವಾಗಿರಬೇಕು, ಕೂಡಲೇ ವಿಧಾನಮಂಡಲದ ಜಂಟಿ ಅಧಿವೇಶನ ಕರೆದು ಕರ್ನಾಟಕದ ಹಿತ ಕಾಪಾಡುವ ನಿರ್ಣಯ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.
ನೇಗಿಲಯೋಗಿ ಸಮಾಜಸೇವಾ ಸಂಸ್ಥೆಯ ಜಿಲ್ಲಾಧ್ಯಕ್ಷ ರಮೇಶ್ ಮಾತನಾಡಿ, ಕಾವೇರಿ ನದಿ ಪಾತ್ರದ ರೈತರ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ಕಂಡುಕೊಳ್ಳುವಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರದ ಅಧಿಕಾರಿಗಳು ವಿಫಲವಾಗಿರುವುದರಿಂದಲೇ ನೂರಾರು ವರ್ಷಗಳಿಂದ ಸಮಸ್ಯೆ ಮುಂದುವರಿಯುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಸ್ಥಳೀಯ ರೈತರ ಅನುಕೂಲಕ್ಕಿಲ್ಲದಿದ್ದರೂ ತಮಿಳುನಾಡಿಗೆ ಕಾವೇರಿ ನದಿ ನೀರನ್ನು ನಿರಂತರವಾಗಿ ಬಡುತ್ತಿರುವುದು ಖಂಡನೀಯ, 1991ರಲ್ಲಿ ಮುಖ್ಯಮಂತ್ರಿಯಾಗಿದ್ದ ಎಸ್.ಬಂಗಾರಪ್ಪ ಅವರ ಸರ್ಕಾರವು ಸುಪ್ರೀಂ ಕೋರ್ಟ್ ಆದೇಶವನ್ನು ದಿಕ್ಕರಿಸಿ, ಸುಗ್ರಿವಾಜ್ಞೆಯನ್ನು ತಂದು ಕಾವೇರಿ ನೀರನ್ನು ಬಿಡಲ್ಲ ಎಂದಿರುವುದುನ್ನು ಸ್ಮರಿಸಿದರು.
ಕೇಂದ್ರ ಸರ್ಕಾರ ಗೆಜೆಟ್ನೋಟಿಫಿಕೇಷನ್ ತಂದು ಕಾವೇರಿ ನದಿ ನೀರನ್ನು ಬಿಡಿಸಿತ್ತು, ಆ ಹತ್ತು ವರ್ಷಗಳ ನಂತರ 2002ರಲ್ಲಿ ಮುಖ್ಯಮಂತ್ರಿಯಾಗಿದ್ದ ಎಸ್.ಎಂ.ಕೃಷ್ಣ ಅವರ ಸರ್ಕಾರವು ನೀಡು ಬಿಟ್ಟಿರಲಲ್ಲ, ನ್ಯಾಯಾಂಗ ನಿಂದನೆ ಕೇಸು ಹಾಕುವುದಾಗಿ ಹೇಳಿ ಮತ್ತೆ ನೀರನ್ನು ತಮಿಳುನಾಡು ಪಡೆಯಿತು ಎಂದು ಹೇಳಿದರು.
ಹಳ್ಳಿ ಹಳ್ಳಿಗಳಲ್ಲಿರುವ ಬಾವಿಗಳು ಮತ್ತು ಪಾಳುಬಿದ್ದ ಬಾವಿಗಳನ್ನು ಪುನರ್ಜೀವನ ಗೊಳಿಸುವುದು, ಮಳೆ ನೀರು ಕೊಯ್ಲು ಪದ್ದತಿ ಅನುಸರಿಸುವುದು, ಕೆರೆಗಳ ಒತ್ತುವರಿ ತೆರವುಗೊಳಿಸಿ, ಹೂಳು ತೆಗೆಸುವುದು, ಕಾಲುವೆಗಳನ್ನು ರಿಪೇರಿ ಮಾಡಿಸಿ, ನೀರು ನಿರಂತರವಾಗಿ ಕೆರೆ-ಕಟ್ಟೆಗಳಿಗೆ ತುಂಬುವಂತೆ ಮಾಡಬೇಕೆಂದು ಸಲಹೆ ನೀಡಿದರು.
ಈ ಸಂದರ್ಭದಲ್ಲಿ ರೈತಹಿತರಕ್ಷಣಾ ಸಮಿತಿಯ ಸುನಂದ ಜಯರಾಂ, ಕೆ ಬೋರಯ್ಯ, ರೈತ ಸಂಘದ ಇಂಡುವಾಳು ಚಂದ್ರಶೇಖರ್, ಕನ್ನಡಪರ ಸಂಘಟನೆಯ ನಾರಾಯಣ್ ಹಾಗೂ ಬಸವರಾಜು ಸೇರಿದಂತೆ ಹಲವರು ಉಪಸ್ಥಿತರಿದ್ದರು.