ಪ್ರಾಣಾಪಾಯದಲ್ಲಿರುವ ಯಾವುದೇ ವ್ಯಕ್ತಿಯನ್ನು ಸಮೀಪದಲ್ಲಿರುವ ಯಾವುದೇ ವ್ಯಕ್ತಿಯು ಪ್ರಥಮ ಚಿಕಿತ್ಸೆ ನೀಡಿ ಜೀವ ಉಳಿಸುವುದು ಅತ್ಯವಶ್ಯಕ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಟಿ.ಎನ್.ಧನಂಜಯ ಹೇಳಿದರು.
ಮಂಡ್ಯ ನಗರದಲ್ಲಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಜಿಲ್ಲಾ ತರಬೇತಿ ಕೇಂದ್ರದಲ್ಲಿ ನಡೆದ ವಿವಿಧ ಇಲಾಖೆಗಳ ಸಿಬ್ಬಂದಿಗಳ 3 ದಿನಗಳ ಕಾಲ ನಡೆಯುವ “ನಿಪುಣ” ಕೌಶಲ್ಯ ಪ್ರಯೋಗಾಲಯ ಕೌಶಲ್ಯ ಆಧಾರಿತ ತರಬೇತಿ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಮನುಷ್ಯನ ಆಪತ್ಕಾಲದಲ್ಲಿ ವೈದ್ಯರು ಅಥವಾ ಸಿಬ್ಬಂದಿಯೇ ಜೀವ ಉಳಿಸಲು ಸ್ಪಂದಿಸಬೇಕೆಂಬ ತಿಳುವಳಿಕೆ ಸರಿಯಲ್ಲ, ಸ್ಥಳದಲ್ಲೆ ಇರುವ ಯಾವುದೇ ವ್ಯಕ್ತಿ ಪ್ರಥಮ ಚಿಕಿತ್ಸೆ ನೀಡಿ ಜೀವ ಉಳಿಸುವುದು, ಅಪಘಾತ ಸಂಭವಿಸಿದಾಗ, ಹೃದಯಾಘಾತವಾದಾಗ, ನಾಯಿ ಅಥವಾ ಹಾವು ಕಚ್ಚಿದಾಗ, ತುರ್ತು ಸಂದರ್ಭಗಳಲ್ಲಿ ಪ್ರಾಣ ಹೋಗದಂತೆ ಪ್ರಥಮ ಚಿಕಿತ್ಸೆ ನೀಡಿ, ಆಸ್ಪತ್ರೆಗೆ ತಲುಪುವವರೆಗೆ ರಕ್ಷಿಸುವುದು ಅತ್ಯವಶ್ಯಕ ಎಂದು ನುಡಿದರು.
ಅಪಘಾತ, ಅವಘಡ, ತುರ್ತು ಸನ್ನಿವೇಶಗಳಲ್ಲಿ ಜೀವ ಉಳಿಸಿದರೆ, ಆತ್ಮ ಸಂತೃಪ್ತಿ ದೊರೆಯುತ್ತದೆ, ಪೊಲೀಸ್ ಇಲಾಖಾ ಸಿಬ್ಬಂದಿ, ಸಾರಿಗೆ ಇಲಾಖಾ ಸಿಬ್ಬಂದಿ ಹಾಗೂ ಕಾಲೇಜು ವಿದ್ಯಾರ್ಥಿಗಳು ಪ್ರಥಮ ಚಿಕಿತ್ಸೆ ಕುರಿತು ಕಾರ್ಯಾಗಾರದಲ್ಲಿ ಸದುಪಯೋಗ ಪಡೆದು ಜೀವ ರಕ್ಷಣೆ ಮಾಡಿ ಎಂದು ಹೇಳಿದರು.
ಜಿಲ್ಲಾ ತರಬೇತಿ ಕೇಂದ್ರದ ಪ್ರಾಂಶುಪಾಲರಾದ ಡಾ.ಎಚ್.ಎಂ.ಮಮತಾ ಮಾತನಾಡಿ, ಅಪಘಾತ ಸಂಭವಿಸಿದ ಸಂದರ್ಭದಲ್ಲಿ ತುರ್ತಾಗಿ ಏನು ಮಾಡಬೇಕು ಎಂಬ ಅರಿವು ಇಲ್ಲದಿರುವುದಿಂದ ಹಲವರು ಪ್ರಾಣ ಕಳೆದುಕೊಳ್ಳುತ್ತಿದ್ದಾರೆ, ಸಾರ್ವಜನಿಕ ವಲಯದಲ್ಲಿ ಕಾರ್ಯ ನಿರ್ವಹಿಸುವ ಎಲ್ಲರಿಗೂ ಜೀವರಕ್ಷಕ ಪ್ರಥಮ ಚಿಕಿತ್ಸೆಯ ತಿಳಿವಳಿಕೆ ಅವಶ್ಯವಿದೆ ಎಂದು ನುಡಿದರು.
ಕಾರ್ಯಕ್ರಮದಲ್ಲಿ ಕೆ.ಎಸ್.ಆರ್.ಟಿ.ಸಿ. ವಿಭಾಗೀಯ ನಿಯಂತ್ರಕ ಎಸ್.ಪಿ.ನಾಗರಾಜು, ಜೀವರಕ್ಷಕ ತರಬೇತಿದಾರ ಮೈಸೂರಿನ ಡಾ. ಮಂಜುನಾಥ್, ಅರುಣ್ಕುಮಾರ್, ಶಿವಶಂಕರ್ ಮತ್ತು ಡಾ.ಸುರೇಶ್ ಹಾಗೂ ತರಬೇತಿ ಕೇಂದ್ರದ ಸಿಬ್ಬಂದಿಗಳು ಉಪಸ್ಥಿತರಿದ್ದರು.