ಒಂದೇ ಕುಟುಂಬದ ಐದು ಮಂದಿ ಆತ್ಮಹತ್ಯೆ ಮಾಡಿಕೊಂಡಿರುವ ಹೃದಯ ವಿದ್ರಾವಕ ಘಟನೆ ತುಮಕೂರಿನ ಸದಾಶಿವನಗರದಲ್ಲಿ ಭಾನುವಾರ ನಡೆದಿದೆ.
ಗರೀಬ್ ಸಾಬ್ (36), ಸುಮಯ್ಯಾ (32) ಹಾಜಿರಾ (14) ಮುಹಮ್ಮದ್ ಶುಭಾನ್ (10) ಹಾಗೂ ಮುಹಮ್ಮದ್ ಮುನೀರ್ (8) ಮೃತರು.
ಶಿರಾ ತಾಲೂಕಿನ ಲಕ್ಕನಹಳ್ಳಿಯ ಗರೀಬ್ ಸಾಬ್ ಮಕ್ಕಳಿಗೆ ಶಿಕ್ಷಣ ಕೊಡಿಸುವ ಸಲುವಾಗಿ ತುಮಕೂರಿನ ಸದಾಶಿವನಗರಕ್ಕೆ ಕುಟುಂಬ ಸಮೇತರಾಗಿ ಬಂದು ವಾಸವಿದ್ದರು. ಆದರೆ, ಬಡತನ ಕಾರಣ ಅವರ ಕನಸು ಈಡೇರಲೇ ಇಲ್ಲ. ಕಬಾಬ್ ಮಾರಾಟ ಮಾಡಿ ಕುಟುಂಬವನ್ನು ಸಲಹುತ್ತಿದ್ದ ಗರೀಬ್ ಸಾಬ್ ಮನೆಯ ಬಾಡಿಗೆ ಕಟ್ಟಲೂ ಪರಾಡುತ್ತಿದ್ದರು. ಆರ್ಥಿಕ ಸಂಕಷ್ಟದ ಜೊತೆಗೆ ಗರೀಬ್ ಸಾಬ್ಗೆ ಅಕ್ಕಪಕ್ಕದ ಮನೆಯವರು ಕಿರುಕುಳ ನೀಡುತ್ತಿದ್ದರು ಎಂದು ಆರೋಪಿಸಲಾಗಿದೆ.
ಆತ್ಮಹತ್ಯೆಗೂ ಮುನ್ನ ಗರೀಬ್ ಸಾಬ್ ತನ್ನ ದೊಡ್ಡಮ್ಮನಿಗೆ ಪತ್ರ ಬರೆದಿಟ್ಟಿದ್ದಾರೆ. ಆ ಪತ್ರದಲ್ಲಿ, “ವ್ಯಾಪಾರ ಇಲ್ಲ, ಸಾಲ ಹೆಚ್ಚಾಗಿದೆ, ಕೆಲಸಕ್ಕೆ ಹೋದರೆ ಹಣ ಬರ್ತಿಲ್ಲ, ಊಟಕ್ಕೂ ಪರದಾಡುವಂತಹ ಸ್ಥಿತಿ ಬಂದಿದೆ. ಊರಿನಲ್ಲಿದ್ದಾಗ ಹೆಂಡತಿಯ ಅಣ್ಣ ಸಾದಿಕ್, ಹೆಂಡತಿಯ ತಂಗಿ ಯಾಸಿನ್ ನಮ್ಮ ಮೇಲೆ ವಿಷ ಕಾರಿದ್ರು. ಅದಕ್ಕೆ ನಾವು ಇಲ್ಲಿಗೆ ಬಂದೆವು. ಇಲ್ಲಿ ಸಾಲ ಕಟ್ಟೋದು ಹೆಚ್ಚಾಗಿದೆ. ಬಾಡಿಗೆ ಮನೆಗೆ 45 ಸಾವಿರ ರೂಪಾಯಿ ಅಡ್ವಾನ್ಸ್ ಕೊಟ್ಟಿದ್ದೀವಿ. ಮೂರು ತಿಂಗಳ ಬಾಡಿಗೆ ಕೊಡೋದು ಬಾಕಿಯಿದೆ. ಉಳಿದ ಹಣವನ್ನು ನಮ್ಮ ದೊಡ್ಡಮ್ಮನಿಗೆ ವಾಪಾಸ್ ಕೊಡಿ” ಎಂದು ತಿಳಿಸಿದ್ದಾರೆ.
“ನಾವು ವಾಸಿಸುವ ಮನೆಯ ಕೆಳಗಿನವರು ನಮಗೆ ತುಂಬಾ ಕಿರುಕುಳ ಕೊಟ್ಟಿದ್ದಾರೆ. ನಮ್ಮ ಮನೆಯ ಕೆಳಗಿನ ಕಲಂದರ್ ಅವರ ಮಗಳು ಸಾನಿಯಾ ಹಿರಿಯ ಮಗ, ಮಹಡಿ ಮನೆಯ ಶಬಾನಾ ಈ ಎಲ್ಲರೂ ನಮ್ಮ ಸಾವಿಗೆ ಕಾರಣ” ಎಂದು ಗರೀಬ್ ಸಾಬ್ ತನ್ನ ಪತ್ರದಲ್ಲಿ ಬರೆದಿದ್ದಾರೆ. ಇನ್ನುಳಿದಂತೆ ಹಲವು ವಿಷಯಗಳನ್ನು ಗರೀಬ್ ಸಾಬ್ ಪತ್ರದಲ್ಲಿ ಹಂಚಿಕೊಂಡಿದ್ದಾರೆ. ಗೃಹ ಸಚಿವರು ಮೇಲೆ ಹೆಸರಿಸಿದ ವ್ಯಕ್ತಿಗಳಿಗೆ ಕಾನೂನು ರೀತಿ ಶಿಕ್ಷೆ ನೀಡುವಂತೆ ಒತ್ತಾಯಿಸಿದ್ದಾರೆ ಎಂದು ತಿಳಿದು ಬಂದಿದೆ.
ವರದಿಗಳ ಪ್ರಕಾರ, ದಂಪತಿಯ ಮೃತದೇಹ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದೆ. ಮಕ್ಕಳ ಮೃತದೇಹ ಹಾಸಿಗೆ ಮೇಲೆ ಕಂಡು ಬಂದಿದೆ. ದಂಪತಿ ಮಕ್ಕಳನ್ನು ಕೊಂದು ಆತ್ಮಹತ್ಯೆ ಮಾಡಿಕೊಂಡಿರುವ ಶಂಕೆಯಿದೆ.