ಕಳೆದ ವಿಧಾನಸಭಾ ಚುನಾವಣೆಯಲ್ಲಿ ಇತಿಹಾಸದಲ್ಲಿ ಇಲ್ಲದ ಉರೀಗೌಡ, ನಂಜೇಗೌಡನನ್ನು ಸೃಷ್ಠಿ ಮಾಡಿ ಜನರಿಂದ ಛೀಮಾರಿ ಹಾಕಿಸಿಕೊಂಡ ಬಿಜೆಪಿ, ಆರ್ ಎಸ್ ಎಸ್ ಸಂಘಟನೆಗಳು, ಈಗ ಲೋಕಸಭೆ ಚುನಾವಣೆ ಹತ್ತಿರಕ್ಕೆ ಬರುತ್ತಿರುವುದರಿಂದ ಕೆರಗೋಡಿನಲ್ಲಿ ಧ್ವಜ ವಿವಾದವನ್ನು ಹುಟ್ಟು ಹಾಕಿ ಕೋಮುಗಲಭೆ ಸೃಷ್ಠಿಸಲು ಹೊರಟಿವೆ ಎಂದು ಮಳವಳ್ಳಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕೆ.ಜೆ ದೇವರಾಜು ಆರೋಪಿಸಿದರು.
ಮಳವಳ್ಳಿ ಪಟ್ಟಣದ ಕಾಂಗ್ರೆಸ್ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮಂಡ್ಯ ಜಿಲ್ಲೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ವಾಸಿಸುತ್ತಿರುವವರು ಹಿಂದೂಗಳೇ, ಸಾವಿರಾರು ವರ್ಷಗಳಿಂದಲೂ ರಾಮ ಹನುಮನನ್ನು ಪೂಜಿಸಿಕೊಂಡು ಬರುವುದು ವಾಡಿಕೆ. ರೈತರ ನಾಡಿನಲ್ಲಿ ಅಶಾಂತಿ ಸೃಷ್ಠಿಸುತ್ತಿರುವುದು ಸರಿಯಲ್ಲ, ಮಂಡ್ಯ ಜಿಲ್ಲೆಯ ಜನರಿಗೆ ಸರಿ ತಪ್ಪುಗಳನ್ನು ನಿರ್ಧರಿಸುವ ಶಕ್ತಿ ಇದ್ದು, ನಿಮ್ಮ ಆಟಗಳು ಎಂದಿಗೂ ನಡೆಯುವುದಿಲ್ಲ ತಿರುಗೇಟು ನೀಡಿದರು.
ಕಾಂಗ್ರೆಸ್ ಪಕ್ಷದಲ್ಲಿಯೇ ವಿಧಾನಸಭಾ ಚುನಾವಣೆಯಲ್ಲಿ ನಿಂತು ಠೇವಣೆ ಕಳೆದುಕೊಂಡಿರುವವರು ಕಾಂಗ್ರೆಸ್ ಪಕ್ಷದ ಬಗ್ಗೆ ಮಾತನಾಡುವ ನೈತಿಕತೆ ಇಲ್ಲ, ಬಿಜೆಪಿ ಇಬ್ಬರು ನಾಯಕರಾದವರನ್ನು ಹೀನಾಯವಾಗಿ ಸೋಲಿಸಿ ಬುದ್ದಿ ಕಲಿಸಿರುವುದನ್ನು ಮರೆಯಬಾರದು, ಮಾತಿನಲ್ಲಿ ಹಿಡಿತವಿರಲಿ ಎಂದು ಬಿಜೆಪಿ ಮುಖಂಡರ ವಿರುದ್ದ ಆಕ್ರೋಶ ವ್ಯಕ್ತಪಡಿಸಿದರು.
ಗಲಭೆ ಸೃಷ್ಠಿಸುವುದು ಬಿಜೆಪಿ ಸಂಸ್ಕೃತಿ
ಧರ್ಮದ ಹೆಸರಿನಲ್ಲಿ ಕೋಮು ಗಲಭೆಯನ್ನು ಸೃಷ್ಠಿಸುವುದು ಬಿಜೆಪಿ ಸಂಸ್ಕೃತಿಯಾಗಿದೆ. ರಾಷ್ಟ್ರಧ್ವಜಕ್ಕೆ ಅಪಮಾನ ಮಾಡಿರುವ ಸಿ.ಟಿ ರವಿಯ ರಾಷ್ಟ್ರಾಭಿಮಾನವನ್ನು ಶಾಸಕ ಪಿ.ಎಂ ನರೇಂದ್ರಸ್ವಾಮಿ ಪ್ರಶ್ನೆ ಮಾಡಿರುವುದು ಸರಿಯಾಗಿಯೇ ಇದೆ. ರವಿಗೆ ರಾಷ್ಟ್ರಧ್ವಜಕ್ಕೂ ತಾಲಿಬಾನ್ ಧ್ವಜಕ್ಕೂ ಇರುವ ವ್ಯತ್ಯಾಸ ತಿಳಿದಿಲ್ಲವೇ ಎಂದು ಪ್ರಶ್ನಿಸಿದೆ.
ಜಿ.ಪಂ. ಮಾಜಿ ಸದಸ್ಯ ಆರ್.ಎನ್ ವಿಶ್ವಾಸ್ ಮಾತನಾಡಿ, ಶಾಸಕ ಪಿ.ಎಂ ನರೇಂದ್ರಸ್ವಾಮಿ ಅವರಿಗೆ ಸಚಿವ ಸ್ಥಾನ ಪಡೆಯುವ ಅರ್ಹತೆ ಇದ್ದು, ನಿಗಮ ಮಂಡಳಿಯ ಅಧಿಕಾರಕ್ಕೆ ಆಸೆ ಪಟ್ಟವರಲ್ಲ, ಹತಾಶೆಯಾಗಿ ಕೋಮುಗಲಭೆ ಸೃಷ್ಠಿಸುತ್ತಿರುವವರಯ ಬಿಜೆಪಿ ಆರ್ ಎಸ್ ಎಸ್ ನ ಕೋಮುವಾದಿಗಳಾಗಿದ್ದಾರೆ. ಬಿಜೆಪಿ ನಾಯಕರು ಮನಬಂದಂತೆ ಮಾತನಾಡುವುದು ಸರಿಯಲ್ಲ, ನಿಮಗೆ ಸ್ವಷ್ಟ ನಿಲುವಿಲ್ಲ, ಜೆಡಿಎಸ್ನವರ ಕೈಕೆಳಗೆ ಇದ್ದೀರಾ ಹೊರತು ಮೇಲೆ ಬಂದು ರಾಜಕೀಯ ಮಾಡಲು ಆಗುತ್ತಿಲ್ಲ, ರಾಷ್ಟ್ರೀಯ ಪಕ್ಷ ಎನ್ನುವ ಹೆಮ್ಮೆ ಇದ್ದರೇ ನಿಮ್ಮ ನಿಜವಾದ ಶಕ್ತಿ ಪ್ರದರ್ಶನ ಮಾಡಿ, ಜೆಡಿಎಸ್ನವರ ಹಿಂಬಾಲಕರಾಗಿ ಹೋಗಿ ಜೆಡಿಎಸ್ ಜೊತೆ ಮಿಲನಗೊಂಡು ಕೆಟ್ಟ ದಾರಿ ಹಿಡಿಯುತ್ತಿದ್ದೀರಿ ಎಂದು ಕಿಡಿಕಾರಿದರು.
ತಕ್ಕ ಪಾಠ ಕಲಿಸಬೇಕಾಗುತ್ತದೆ
ತಾ.ಪಂ ಮಾಜಿ ಉಪಾಧ್ಯಕ್ಷ ಸಿ.ಮಾಧು ಮಾತನಾಡಿ, ರಾಷ್ಟ್ರಧ್ವಜಕ್ಕೆ ಅವಮಾನ ಮಾಡಿದಲ್ಲದೇ ನಾನೇ ಸರಿ ಎಂದು ಹೇಳುತ್ತ ತಿರುಗಾಡುವ ಸಿ.ಟಿ ರವಿ, 2008ರಲ್ಲಿನ ರಾಜಕೀಯ ದಿನಗಳನ್ನು ನೆನೆಸಿಕೊಳ್ಳಬೇಕು, ಅಧಿಕಾರವನ್ನೇ ಪಡೆಯದ ಸಂದರ್ಭದಲ್ಲಿ ಶಾಸಕ ನರೇಂದ್ರಸ್ವಾಮಿ ಪಕ್ಷೇತ್ರವಾಗಿ ಗೆದ್ದು ಬಿಜೆಪಿ ಅಧಿಕಾರ ಹಿಡಿಯಲು ಕಾರಣರಾಗಿದ್ದು, ಯಾರೂ ಗಂಡು ಎಂಬುದನ್ನು ಯೋಚಿಸಬೇಕು, ಇನ್ನೂ ಮುಂದೆ ಶಾಸಕ ನರೇಂದ್ರಸ್ವಾಮಿ ವಿರುದ್ದ ಮಾತನಾಡಿದರೇ ತಕ್ಕ ಪಾಠವನ್ನು ಕಲಿಸಬೇಕಾಗುತ್ತದೆ ಎಂದು ಎಚ್ಚರಿಸಿದರು.
ಮುಖಂಡರಾದ ಬಸವರಾಜು, ಸಾಗ್ಯಕೆಂಪಯ್ಯ ಮಾತನಾಡಿದರು. ಗೋಷ್ಠಿಯಲ್ಲಿ ಮುಖಂಡರಾದ ಪುಟ್ಟಸ್ವಾಮಿ, ಕೃಷ್ಣಮೂರ್ತಿ, ಜಯರಾಜ್ ಕುಂದೂರು ಪ್ರಕಾಶ್, ಶಿವಮಾದೇಗೌಡ, ಲಿಂಗರಾಜು, , ದೊಡ್ಡಯ್ಯ, ಬಸವರಾಜು, ಕಿರಣ್ಶಂಕರ್, ಸಿ.ಪಿ.ರಾಜು ವೇದಮೂರ್ತಿ, ದಿಲೀಪ್. ಶಾಂತರಾಜು, ಶ್ರೀನಿವಾಸ್, ರವೀಂದ್ರ ಕುಮಾರ್ ಸೇರಿದಂತೆ ಇತರರು ಉಪಸ್ಥಿತರಿದ್ದರು.