ಕೋವಿಡ್ ಸಂಕಷ್ಟದ ನಡುವೆಯೂ ಸಿಕ್ಕ ಅವಕಾಶದಲ್ಲಿ ಮಳವಳ್ಳಿ ತಾಲ್ಲೂಕನ್ನು ಸಮಗ್ರವಾಗಿ ಅಭಿವೃದ್ಧಿ ಪಡಿಸಲು ಪ್ರಾಮಾಣಿಕ ಪ್ರಯತ್ನ ಮಾಡಲಾಗಿದೆ ಎಂದು ಶಾಸಕ ಡಾ.ಕೆ.ಅನ್ನದಾನಿ ತಿಳಿಸಿದರು.
ಮಳವಳ್ಳಿ ತಾಲ್ಲೂಕಿನ ತಮ್ಮಡಹಳ್ಳಿ, ರಸ್ತೆ ಅಭಿವೃದ್ಧಿ ಕಾಮಗಾರಿಗೆ ಗುದ್ದಲಿ ಪೂಜೆ ನೆರೆವೇರಿಸಿ ಮಾತನಾಡಿದ ಅವರು, ಕೋವಿಡ್ ನಿಂದ ಎರಡು ವರ್ಷ ಯಾವುದೇ ಅಭಿವೃದ್ದಿ ಕಾರ್ಯಗಳನ್ನು ಮಾಡಲು ಸಾಧ್ಯವಾಗಿಲ್ಲ, ಆ ಸಮಯದಲ್ಲಿ ಕ್ಷೇತ್ರದಲ್ಲಿದ್ದುಕೊಂಡು ಕೋವಿಡ್ ರೋಗಿಗಳ ಆತ್ಮಸ್ಥೈಯ೯ ತುಂಬವ ಕೆಲಸ ಮಾಡಿದ್ದೇನೆ, ನಂತರ ಸಿಕ್ಕ ಅವಕಾಶದಲ್ಲಿ ಕ್ಷೇತ್ರವನ್ನು ಹಂತ ಹಂತವಾಗಿ ಅಭಿವೃದ್ದಿಪಡಿಸಲಾಗುತ್ತಿದೆ ಎಂದರು.
ಈ ವರ್ಷ ಎಂದೂ ಕಂಡರಿಯದ ಅಬ್ಬರದ ಮಳೆ ಬಂದಿದ್ದರಿಂದ ಮಳವಳ್ಳಿ ತಾಲ್ಲೂಕಿನ ಬಹುಪಾಲು ರಸ್ತೆಗಳು ಹಾಳಾಗಿವೆ.ಸರ್ಕಾರದಿಂದ ವಿಶೇಷ ಅನುದಾನ ತಂದು ರಸ್ತೆಗಳನ್ನು ಅಭಿವೃದ್ದಿ ಪಡಿಸಲಾಗುವುದೆಂದು ಹೇಳಿದರು. ತಾಲ್ಲೂಕಿನ ಮೂಗಮಕೊಪ್ಪಲು, ಕನ್ನಲಿ, ಸಂಶೆಟ್ಟಿಪುರ, ಪೂರಿಗಾಲಿ, ಬಳ್ಳಗೆರೆ,
ಪಂಡಿತಹಳ್ಳಿ, ತಮ್ಮಡಹಳ್ಳಿ, ಬುಗತಹಳ್ಳಿ, ದುಗ್ಗನಹಳ್ಳಿ ಗ್ರಾಮಗಳಲ್ಲಿ ರಸ್ತೆ ಅಭಿವೃದ್ದಿ ಕಾಮಗಾರಿಗಳಿಗೆ ಗುದ್ದಲಿ ಪೂಜೆ ನೆರೆವೇರಿಸಿದರು.
ಇದೇ ಸಂದರ್ಭದಲ್ಲಿ ಪುರಸಭೆ ಉಪಾಧ್ಯಕ್ಷ ಪ್ರಶಾಂತ್, ನಾಗೇಗೌಡನದೊಡ್ಡಿ ಗ್ರಾ.ಪಂ ಉಪಾಧ್ಯಕ್ಷ ಶಿವಲಿಂಗೇಗೌಡ, ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಹನುಮಂತು, ಮುಖಂಡರಾದ ನಾರಾಯಣ್, ಕುಮಾರ್, ಜವರೇಗೌಡ ಸೇರಿದಂತೆ ಇತರರು ಇದ್ದರು.