“ಇಂನ್ಕ್ವಿಲಾಬ್ ಜಿಂದಾಬಾದ್ ” ಎಂದು ಸ್ವಾತಂತ್ರ್ಯ ಹೋರಾಟಗಾರರಿಗೆ ಸ್ಫೂರ್ತಿ ನೀಡಿದವರೇ “ಸ್ವಾತಂತ್ರ್ಯ ಹೋರಾಟಗಾರ ಭಗತ್ ಸಿಂಗ್ “ಎಂದು ಮಂಡ್ಯ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಗೌರವ ಕಾರ್ಯದರ್ಶಿ ಜಿ. ಧನಂಜಯ ದರಸಗುಪ್ಪೆ ತಿಳಿಸಿದರು.
ಶ್ರೀರಂಗಪಟ್ಟಣದ ಪೂರ್ಣಯ್ಯ ಬೀದಿಯಲ್ಲಿರುವ ಬಿ ಎಂ ಎಸ್. ಕಾರ್ಮಿಕರ ಭವನದಲ್ಲಿ ಕನ್ನಡ ಸಾಹಿತ್ಯ ಪರಿಷತ್ತು ಶ್ರೀರಂಗಪಟ್ಟಣ ತಾಲೂಕು ವತಿಯಿಂದ ಆಯೋಜಿಸಿದ್ದ “ಸ್ವಾತಂತ್ರ್ಯ ಹೋರಾಟಗಾರ ಭಗತ್ ಸಿಂಗ್ ಜನ್ಮ ದಿನಾಚರಣೆ”ಯ ಪ್ರಯುಕ್ತ ಭಗತ್ ಸಿಂಗ್ ರವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ ಮಾತನಾಡಿದರು.
ಮಹಾತ್ಮಗಾಂಧಿಯವರು ಶಾಂತಿ ಮಾರ್ಗದ ಮೂಲಕ ಭಾರತಕ್ಕೆ ಸ್ವಾತಂತ್ರ್ಯ ಪಡೆಯಲು ಹೋರಾಟ ಮಾಡುತ್ತಿದ್ದರೆ, ಭಗತ್ ಸಿಂಗ್ ಅವರು ಕ್ರಾಂತಿಕಾರಿ ಮಾರ್ಗದಲ್ಲಿ ಸ್ವಾತಂತ್ರ್ಯ ಪಡೆಯಲು ಹೋರಾಟ ಮಾಡಿದರು. ವಿಪರ್ಯಾಸವೆಂದರೆ ಬ್ರಿಟಿಷರಿಂದಲೇ ಅರೆಸ್ಟ್ ಆಗಿ, ಅವರು ಮಾಡಿದ ಅಪರಾಧ ಸಾಬೀತಾಗಿ 23-03- 1931 ರಂದು ಗಲ್ಲಿಗೇರಿದರು. ಈ ದಿನವನ್ನು “ಹುತಾತ್ಮರ ದಿನ”ವನ್ನಾಗಿ ಆಚರಿಸಿಕೊಂಡು ಬರಲಾಗುತ್ತಿದೆ. ಈ ಸಾವಿನ ಸಂದರ್ಭದಲ್ಲಿಯೂ ಭಾರತ ಮಾತೆಗೆ ಜಯವಾಗಲಿ ಎಂದು ಘೋಷಣೆ ಕೂಗಿ ನೇಣಿಗೆ ಕೊರಳೊಡ್ಡಿದ್ದರು ಎಂದು ಸ್ಮರಿಸಿದರು.
ಎಲ್.ಐ.ಸಿ. ವಾಸುದೇವ ಅವರು, ಭಗತ್ ಸಿಂಗ್ ಬಗ್ಗೆ ಮಾಹಿತಿ ನೀಡಿದರು. ಈ ಸಂದರ್ಭದಲ್ಲಿ ಶ್ರೀರಂಗಪಟ್ಟಣ ತಾಲೂಕು ಕಸಾಪ ಅಧ್ಯಕ್ಷ ಬಲ್ಲೆನಹಳ್ಳಿ ಮಂಜುನಾಥ್, ಪದಾಧಿಕಾರಿಗಳಾದ ಶಂಕರ್ ಚಂದಗಾಲು, ಪ್ರೀತಮ್ ರಾಂಪುರ, ದೀಪು, ಶ್ರೀನಿವಾಸ್ ಗಂಜಾಂ, ಮಂಜುನಾಥ್, ಸುರೇಶ್, ರಂಗರಾಜು, ಗುರುವಣ್ಣ, ಪ್ರಭಾಕರ್ ಸೇರಿದಂತೆ ಇತರರು ಉಪಸ್ಥಿತರಿದ್ದರು.
ಇದೇ ವೇದಿಕೆಯಲ್ಲಿ ಇಂದು ಮೃತರಾದ ‘ಭಾರತದ ಹಸಿರು ಕ್ರಾಂತಿ’ಯ ಪಿತಾಮಹ ಡಾ.ಎಂ.ಎಸ್. ಸ್ವಾಮಿನಾಥನ್ ಅವರಿಗೆ ಮೌನಾಚರಣೆ ಮಾಡಿ, ಸಂತಾಪ ಸೂಚಿಸಲಾಯಿತು