ರಾಜ್ಯದಲ್ಲಿ ಗಣಿಗಾರಿಕೆ ನಡೆಸುತ್ತಿರುವ ಉದ್ಯಮಿಗಳಿಗೆ ಕಠಿಣವಾದ ಸರ್ಕಾರದ ನೀತಿ ನಿಯಮಗಳಿಂದ ಹಲವು ತೊಡಕುಗಳು ಉಂಟಾಗುತ್ತಿದ್ದು, ಈಗಿರುವ ಕಾನೂನನ್ನು ಸರಳೀಕರಣಗೊಳಿಸಿ ಕಾನೂನು ಬದ್ಧ ಗಣಿಗಾರಿಕೆಗೆ ಸರ್ಕಾರ ಅವಕಾಶ ಮಾಡಿಕೊಡಬೇಕೆಂದು ಫೆಡರೇಷನ್ ಆಫ್ ಕರ್ನಾಟಕ ಕ್ವಾರಿ ಮತ್ತು ಸ್ಟೋನ್ ಕ್ರಷರ್ ಓನರ್ಸ್ ಅಸೋಸಿಯೇಷನ್ ಅಧ್ಯಕ್ಷ ರವೀಂದ್ರ ಶೆಟ್ಟಿ ತಿಳಿಸಿದರು.
ಮಂಡ್ಯದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸರ್ಕಾರಕ್ಕೆ ಈಗಾಗಲೇ ರಾಜಧನ(ರಾಯಲ್ಟಿ) ಸಂದಾಯವಾಗಿದೆ, ಆದರೆ ಮತ್ತೇ ಗಣಿ ಗುತ್ತಿಗೆದಾರರಿಂದ ರಾಜಧನ ವಸೂಲಿ ಮಾಡಲು ಹೊರಡಿರುವುದು ಸರಿಯಾದ ಕ್ರಮವಲ್ಲ ಎಂದರು.
ರಾಜ್ಯ ಸರ್ಕಾರವು ಎರಡು ಬಾರಿ ರಾಜಧನ ವಸೂಲಿಗೆ ಮುಂದಾಗಿದೆ, ಈ ಕ್ರಮವನ್ನು ಕೈಬಿಡಬೇಕು. ಅದಲ್ಲೇ ಗಣಿಗಾರಿಕೆ ನಡೆಸಿದ ಭೂಮಿಯ ಸರ್ವೇ ನಡೆಸಿ ಮತ್ತೆ ರಾಜಧನ ಪಡೆಯುವ ಕ್ರಮವನ್ನು ಕೈಬಿಡಬೇಕು. ಬೇರೆ ಯಾವುದೇ ರಾಜ್ಯಗಳಲ್ಲಿ ಎರಡು ಬಾರಿ ರಾಯಲ್ಪಿ ಪಡೆಯುವ ಕಾನೂನುಗಳಿಂದ ಎಂದರು.
ಬೇಡಿಕೆ ಈಡೇರುವವರೆಗೂ ಕೆಲಸ ಬಂದ್
ಗಣಿಗಾರಿಕೆಯಲ್ಲಿರುವ ಎಲ್ಲಾ ತೊಡಕುಗಳನ್ನು ನಿವಾರಿಸುವಂತೆ ಆಗ್ರಹಿಸಿ ಕಳೆದ ಡಿ.21ರಿಂದ ರಾಜ್ಯಾದ್ಯಂತ ಎಲ್ಲಾ ಕ್ವಾರಿ ಹಾಗೂ ಕ್ರಷರ್ ಗಳನ್ನು ಬಂದಿ ಮಾಡಿ ಹೋರಾಟ ನಡೆಸಲಾಗುತ್ತಿದೆ, ಕಳೆದ ಡಿ.28ರಂದು ಬೆಳಗಾವಿ ವಿಧಾನಸೌಧದ ಎದುರು ಪ್ರತಿಭಟನೆ ನಡೆಸಿ ಹೋರಾಟ ಮಾಡಲಾಗಿದೆ. ಸರ್ಕಾರ ನಮ್ಮ ಬೇಡಿಕೆಗಳನ್ನು ಈಡೇರಿಸುವವರೆಗೂ ಮತ್ತೆ ಕೆಲಸ ಪ್ರಾರಂಭಿಸುವುದಿಲ್ಲ ಎಂದರು.
ರಾಜ್ಯದಲ್ಲಿ ಗಣಿಗಾರಿಕೆಗೆ ಸಂಬಂಧಿಸಿದ ಒಂದು ಪಾರದರ್ಶಕ ನೀತಿಯನ್ನು ಜಾರಿಗೊಳಿಸಬೇಕು. ರಾಜ್ಯದಲ್ಲಿ ಒಟ್ಟು 2000 ಸಾವಿರ ಕ್ಕೂ ಹೆಚ್ಚು ಕ್ರಷರ್ ಗಳಿದ್ದು, ಪ್ರತಿಯೊಂದು ಕ್ರಷರ್ ನಲ್ಲಿ ಕನಿಷ್ಠ 150 ಮಂದಿ ಕೆಲಸ ಮಾಡುತ್ತಿದ್ಧಾರೆ. ರಾಜ್ಯದಲ್ಲಿ ಲಕ್ಷಾಂತರ ಜನ ಇದರಿಂದ ಉದ್ಯೋಗ ಕಂಡುಕೊಂಡಿದ್ದಾರೆ. ಆದ್ದರಿಂದ ಸರ್ಕಾರ ತ್ವರಿತವಾಗಿ ಕ್ರಮ ಕೈಗೊಂಡು ತಮ್ಮ ಬೇಡಿಕೆಗಳನ್ನು ಈಡೇರಿಸಬೇಕೆಂದು ಒತ್ತಾಯಿಸಿದರು.
ಗೋಷ್ಠಿಯಲ್ಲಿ ಅಸೋಸಿಯೇಷನ್ ಪದಾಧಿಕಾರಿಗಳಾದ ರಾಮಕೃಷ್ಣ, ಪುರುಷೋತ್ತಮ್, ಶ್ರೀನಿವಾಸ್, ರವಿ ಬೋಜೆಗೌಡ, ಅರುಣ್ ಕುಮಾರ್, ಮಂಜನಾಥ್, ಪ್ರದೀಪ್, ಮಂಜುನಾಥ್ ಮತ್ತಿತರರು ಉಪಸ್ಥಿತರಿದ್ದರು.