ಗಾಂಧಿಭವನದಲ್ಲಿ ಯೋಗಾಭ್ಯಾಸಕ್ಕಾಗಿ ಪ್ರತೇಕ ಸಭಾಂಗಣ ನಿರ್ಮಿಸಲು ಚಿಂತಿಸಲಾಗಿದೆ ಎಂದು ಮಹಾತ್ಮ ಗಾಂಧಿ ಸ್ಮಾರಕ ಟ್ರಸ್ಟ್ ಅಧ್ಯಕ್ಷ ಮತ್ತು ವಿಧಾನ ಪರಿಷತ್ ಸದಸ್ಯ ಮಧು ಜಿ.ಮಾದೇಗೌಡ ಹೇಳಿದರು.
ಮಂಡ್ಯ ನಗರದ ಗಾಂಧಿ ಭವನದಲ್ಲಿ ಮಹಾತ್ಮಾ ಯೋಗ ಕೇಂದ್ರ ಆಯೋಜಿಸಿದ್ದ ವಿಶ್ವ ಯೋಗ ದಿನಾಚರಣೆ ಪ್ರಯುಕ್ತ ಯೋಗ ಪ್ರದರ್ಶನ, ಪಥಸಂಚಲನ,ವೀರಗಾಸೆ, ಗುರುನಮನ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಮುಂದಿನ ದಿನಗಳಲ್ಲಿ ಗಾಂಧಿಭವನ ಯೋಗಪಟುಗಳನ್ನು ಸೃಷ್ಠಿಸುವ ಕೆಲಸ ಮಾಡಲಿದೆ. ಅಲ್ಲದೆ ಉಚಿತವಾಗಿ ಯೋಗಾಭ್ಯಾಸ ನಡೆಸಲು, ಆಯೋಜಿಸಲು ಮುಂದಾಗಿದ್ದು, ಗಾಂಧಿಭವನ ಸಂಸ್ಥಾಪಕ ಅಧ್ಯಕ್ಷರಾದ ಜಿ.ಮಾದೇಗೌಡ ಅವರ ಪೇರಣೆ ಮತ್ತು ಕನಸುಗಳನ್ನು ಈಡೇರಿಸಲಾಗುವುದು. ಲಿಫ್ಟ್ ಅಳವಡಿಸಿ, ಮೇಲಂತಸ್ತಿನಲ್ಲಿ ಅಭ್ಯಾಸಭವನ ನಿರ್ಮಿಸಲಾಗುವುದು ಎಂದರು.
ಯೋಗಗುರು ಶಿವರುದ್ರಸ್ವಾಮಿ ಮಾತನಾಡಿ, ಮಾನವೀಯತೆ, ಮೌಲ್ಯ ವೃದ್ಧಿಗಾಗಿ ಈ ವರ್ಷ ಯೋಗ ದಿನಾಚರಣೆ ಸಾಗುತ್ತಿದೆ. ಯೋಗಗುರು ಪತಂಜಲಿ ಮಹರ್ಷಿ ಅವರನ್ನು ಸ್ಮರಿಸಿ, ಯೋಗಾಭ್ಯಾಸ ಮಾಡೋಣ. ಎಲ್ಲರಿಗೂ ಯೋಗ ಅಗತ್ಯ, ಎಲ್ಲರಿಗೂ ಆರೋಗ್ಯ ಅವಶ್ಯ ಎಂದರು.