ಪಾಂಡವಪುರ ತಾಲ್ಲೂಕಿನ ಕಟ್ಟೇರಿ ಗ್ರಾಮದ ಆರ್.ಎಂ.ಎಸ್.ಎ ಹಾಸ್ಟೆಲ್ ನ ವಿದ್ಯಾರ್ಥಿನಿಯರಿಗೆ ಮುಖ್ಯ ಶಿಕ್ಷಕನೊಬ್ಬ ಲೈಂಗಿಕ ಕಿರುಕುಳ ನೀಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಕೆಲ ಅಧಿಕಾರಿಗಳು, ವಿದ್ಯಾರ್ಥಿನಿ ಯರಿಂದ ಬಲವಂತದ ಹೇಳಿಕೆ ಪಡೆದಿದ್ದು, ಅಂತಹ ಅಧಿಕಾರಿಗಳ ಮೇಲೆ ಕಾನೂನು ಕ್ರಮ ಜರುಗಿಸುವಂತೆ ಆಗ್ರಹಿಸಿ ಅತ್ಯಾಚಾರ ವಿರೋಧಿ ಆಂದೋಲನ ಸಮಿತಿ ಸದಸ್ಯರು ಶುಕ್ರವಾರ ಮಂಡ್ಯ ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿಗೆ ದೂರು ನೀಡಿದರು.
ಪ್ರಗತಿಪರ ವಕೀಲ ಬಿ.ಟಿ.ವಿಶ್ವನಾಥ್, ಕರ್ನಾಟಕ ಜನಶಕ್ತಿಯ ರಾಜ್ಯ ಪ್ರಧಾನ ಕಾರ್ಯದರ್ಶಿ ಪೂರ್ಣಿಮಾ, ಜಿಲ್ಲಾ ಕಾರ್ಯದರ್ಶಿ ಸಿದ್ದರಾಜು, ಜಗದೀಶ್ ನಗರಕೆರೆ, ಮುತ್ತಮ್ಮ ಇಂದು ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿ ಎನ್.ಯತೀಶ್ ಹಾಗೂ ಜಿಲ್ಲಾ ಪಂಚಾಯತ್ ಸಿಇಓ ಶಾಂತ ಎಲ್ ಹುಲ್ಮನಿ ಅವರನ್ನು ಭೇಟಿ ಮಾಡಿ ದೂರು ನೀಡಿದರು.
ಈ ಸಂದರ್ಭದಲ್ಲಿ ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿ ಯತೀಶ್ ಅವರು ಇಲಾಖೆಯ ಅಧಿಕಾರಿಗಳಿಗೆ ದೂರವಾಣಿ ಕರೆ ಮಾಡಿ, ”ನಾಳೆಯೆ ಹೋಗಿ ಅಲ್ಲಿ ಮಾಹಿತಿ ಕಲೆ ಹಾಕಿ”, ಜಿಲ್ಲಾಧಿಕಾರಿ ಮತ್ತು ತಮಗೂ ವರದಿ ಸಲ್ಲಿಸುವಂತೆ ಆದೇಶಿಸಿದರು. ಅಲ್ಲದೇ ಈ ಪ್ರಕರಣ ಕುರಿತು ಸಂಪೂರ್ಣವಾಗಿ ಗಮನಹರಿಸುವುದಾಗಿ ಭರವಸೆ ನೀಡಿದರು.
ಜಿ.ಪಂ. ಸಿಇಓ ಶಾಂತ ಎಲ್.ಹುಲ್ಮನಿ ಅವರನ್ನು ಭೇಟಿ ಮಾಡಿದಾಗ, ಮೊನ್ನೆಯೇ ನಿಮ್ಮ ಲಿಖಿತ ದೂರನ್ನು ಗಮನಿಸಿದ್ದೇನೆ, ಬೇರೆ ತಂಡವನ್ನು ನೇಮಕ ಮಾಡಲಾಗಿದೆ ಶಿಕ್ಷಣ ಇಲಾಖೆಯ ಡಿಡಿಪಿಐ ಅವರಿಗೆ ಎಚ್ಚರಿಕೆ ನೀಡಲಾಗಿದೆ. ಅಲ್ಲದೇ ಸಾರ್ವಜನಿಕ ಶಿಕ್ಷಣ ಇಲಾಖೆಯವರಿಗೆ ಮುಂದೆ ಜಾಗೃತಿ ಕಾರ್ಯಕ್ರಮಗಳನ್ನು ಮಾಡಲು ತಿಳಿಸಲಾಗಿದೆ ಎಂದು ಹೇಳಿದರು ಎಂದು ಅತ್ಯಾಚಾರ ವಿರೋಧಿ ಸಮಿತಿಯು ನುಡಿಕರ್ನಾಟಕ.ಕಾಮ್ ಗೆ ತಿಳಿಸಿದೆ.