ಬೆಂಗಳೂರಿನ ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ಬಳಿ ನಿರ್ಮಿಸಿರುವ ನಾಡಪ್ರಭು ಕೆಂಪೇಗೌಡರ ಪುತ್ಥಳಿ ಅನಾವರಣ ಕಾರ್ಯಕ್ರಮಕ್ಕೆ ಒಕ್ಕಲಿಗರ ಧೀಮಂತ ನಾಯಕ, ಕರ್ನಾಟಕದ ಕುವರ, ಮಾಜಿ ಪ್ರಧಾನಿ ದೇವೇಗೌಡರನ್ನು ಕರೆಯದೆ ಅವಮಾನ ಮಾಡಿರುವ ಬಿಜೆಪಿ ಪಕ್ಷದ ನಡೆಗೆ ಧಿಕ್ಕಾರ ಎಂದು ಜಿಲ್ಲಾ ಜೆಡಿಎಸ್ ವಕ್ತಾರ ಮತ್ತು ಮನ್ ಮುಲ್ ಉಪಾಧ್ಯಕ್ಷ ರಘುನಂದನ್ ಆಕ್ರೋಶ ವ್ಯಕ್ತಪಡಿಸಿದರು.
ಬಿಜೆಪಿ ನಾಯಕರಿಗೆ ಅಧಿಕಾರದ ಮದ ಹೆಚ್ಚಾಗಿದೆ. ಈ ದೇಶದ ಮತ್ತು ರಾಜ್ಯದ ಸಮಸ್ಯೆ ಬಂದಾಗ ಮಾಜಿ ಪ್ರಧಾನಿ ದೇವೇಗೌಡರಿಂದ ಪಕ್ಷಾತೀತವಾಗಿ ಸಲಹೆ, ಸೂಚನೆಗಳನ್ನು ಪಡೆಯುತ್ತಾರೆ.ದೇವೇಗೌಡರು ಕೂಡ ಯಾವ ಪಕ್ಷವೇ ಅಧಿಕಾರಕ್ಕೆ ಬರಲಿ ಅವರಿಗೆ ಸಲಹೆ,ಮಾರ್ಗದರ್ಶನ ನೀಡುತ್ತಾರೆ. ಇಂತಹ ದೇವೇಗೌಡರನ್ನು ಸಮಾರಂಭಕ್ಕೆ ಆಹ್ವಾನಿಸದೆ ಅವರಿಗೆ ಅವಮಾನ ಮಾಡಿದ್ದಾರೆ.ಇದು 7 ಕೋಟಿ ಕನ್ನಡಿಗರ ಸ್ವಾಭಿಮಾನಕ್ಕೆ ಧಕ್ಕೆ ತಂದಿದ್ದು,ಇದನ್ನು ಜೆಡಿಎಸ್ ಪಕ್ಷ ಖಂಡಿಸುತ್ತದೆ ಎಂದರು.
ಬಿಜೆಪಿ ಪಕ್ಷ ಅಧಿಕಾರ ಶಾಶ್ವತ ಎಂದು ಭಾವಿಸಿದೆ. ಮಾನವೀಯ ಮೌಲ್ಯವನ್ನು ಕಳೆದುಕೊಂಡಿರುವ ಬಿಜೆಪಿಗೆ ಅಧಿಕಾರ ಶಾಶ್ವತವಲ್ಲ ಎಂದು ಮುಂದಿನ ಚುನಾವಣೆಯಲ್ಲಿ ಈ ರಾಜ್ಯದ ಜನರು ತೋರಿಸಲಿದ್ದಾರೆ. ಒಕ್ಕಲಿಗ ಸಮುದಾಯದ ಮಂತ್ರಿಗಳು ಕೂಡ ದೇವೇಗೌಡರ ಆಹ್ವಾನಿಸಿದೆ ಇರುವ ಬಗ್ಗೆ ಮೌನ ತಾಳಿದ್ದಾರೆ.ಅವರಿಗೂ ಧಿಕ್ಕಾರ ಎಂದಿದ್ದಾರೆ.