ನಾಗಮಂಗಲದ ಶ್ರೀ ಕೋಟೆ ವಿದ್ಯಾ ಗಣಪತಿ ಸೇವಾ ಸಮಿತಿಯಿಂದ ಪ್ರತಿಷ್ಠಾಪಿಸಲಾಗಿದ್ದ ಕೋಟೆ ವಿದ್ಯಾ ಗಣಪತಿ 72ನೇ ವರ್ಷದ ವಿಸರ್ಜನಾ ಮಹೋತ್ಸವದ ಮೆರವಣಿಗೆ ಶುಕ್ರವಾರ ವಿಜೃಂಭಣೆಯಿಂದ ನಡೆದು, ಜನರ ಗಮನ ಸೆಳೆಯಿತು.
ಮೆರವಣಿಗೆಗೆ ಆದಿಚುಂಚನಗಿರಿಯ ಪೀಠಾಧ್ಯಕ್ಷ ಡಾ.ಶ್ರೀನಿರ್ಮಲಾನಂದನಾಥ ಸ್ವಾಮೀಜಿ ಚಾಲನೆ ನೀಡಿದರು. ಮೆರವಣಿಗೆಯಲ್ಲಿ ವಿವಿಧ ಕಲಾತಂಡಗಳು, ಹಾಸ್ಯ ಗೊಂಬೆಗಳು, ಕೋಳಿ ನೃತ್ಯ, ಯಕ್ಷಗಾನ ನೃತ್ಯ, ವೀರಗಾಸೆ ಕುಣಿತ , ವೀರಭದ್ರ ಕುಣಿತ, ಪಟದ ಕುಣಿತ , ಕೇರಳದ ಕವಡಿ ನೃತ್ಯ ಸೇರಿದಂತೆ ವಿವಿಧ ಮನರಂಜನೆಯ ನೃತ್ಯ ತಂಡಗಳು ಭಾಗವಹಿಸಿದ್ದವು. ಪ್ರತಿ ವರ್ಷದಂತೆ ನಿರ್ದಿಷ್ಠ ಮಾರ್ಗದಲ್ಲೇ ಮೆರವಣಿಗೆ ನಡೆಸಲಾಯಿತು.
ಮೆರವಣಿಗೆಗೆ ಡಾ.ಶ್ರೀನಿರ್ಮಲಾನಂದನಾಥ ಸ್ವಾಮಿಜೀ ಚಾಲನೆ ನೀಡಿದ ಸಂದರ್ಭದಲ್ಲಿ ಕೃಷಿ ಸಚಿವ ಎನ್ ಚೆಲುವರಾಯಸ್ವಾಮಿ, ಮಾಜಿ ಶಾಸಕರಾದ ಸುರೇಶಗೌಡ ಹಾಜರಿದ್ದರು. ಅಲ್ಲದೇ ಎಲ್ಲಾ ಗ್ರಾಮ ಪಂಚಾಯತಿಗಳಿಂದ ಹಾಗೂ ಪಟ್ಟಣದಿಂದ ಬಂದ ಚುನಾಯಿತ ಜನಪ್ರತಿನಿಧಿಗಳು ಸಂಘ ಸಂಸ್ಥೆಗಳ ಪದಾಧಿಕಾರಿಗಳು ಗಣಪತಿ ಸಮಿತಿಗಳ ಸದಸ್ಯರು ಹಾಗೂ ಸಾರ್ವಜನಿಕರು ಸಹಸ್ರಾರು ಸಂಖ್ಯೆಯಲ್ಲಿ ಭಾಗವಹಿಸಿದ್ದರು.