ಮಳವಳ್ಳಿ ಪಟ್ಟಣದ ಎನ್ಇಎಸ್ ಬಡಾವಣೆಯ ನಿವಾಸಿ ದಿವ್ಯ(10)ಎಂಬ ಬಾಲಕಿಯನ್ನು ಚಾಕೊಲೇಟ್ ನೀಡುವುದಾಗಿ ಪುಸಲಾಯಿಸಿ ಕರೆದೊಯ್ದು, ಅತ್ಯಾಚಾರ ನಡೆಸಿ ಕೊಲೆ ಮಾಡಿದ ಪ್ರಕರಣದಲ್ಲಿ ಕಾಂತರಾಜು(52) ಎಂಬ ಆರೋಪಿಯನ್ನು ಪಟ್ಟಣ ಪೋಲಿಸರು ಬಂಧಿಸಿದ್ದಾರೆ.
ಆರೋಪಿ ಕಾಂತರಾಜು ಮಳವಳ್ಳಿ ತಾಲ್ಲೂಕಿನ ನೆಲಮಾಕನಹಳ್ಳಿ ಗ್ರಾಮದವನಾಗಿದ್ದು, ಕಳೆದ 15 ವರ್ಷಗಳಿಂದ ಮೈಸೂರಿನಲ್ಲಿ ನೆಲೆಸಿದ್ದ. ಮಳವಳ್ಳಿ ಪಟ್ಟಣದಲ್ಲಿ ಟ್ಯೂಷನ್ ಸೆಂಟರ್ ನಲ್ಲಿ ಕೆಲಸಕ್ಕಿದ್ದ ಕಾಂತರಾಜು ನಿನ್ನೆ ಮಂಗಳವಾರ ಬಾಲಕಿ ದಿವ್ಯಳಿಗೆ ಕರೆ ಮಾಡಿ ಬೆಳಿಗ್ಗೆ 11 ಗಂಟೆ ಸುಮಾರಿಗೆ ಟ್ಯೂಷನ್ ಗೆ ಬರುವಂತೆ ತಿಳಿಸಿದ್ದ. ಬಾಲಕಿ ದಿವ್ಯ ಟ್ಯೂಷನ್ ಗೆ ಬಂದ ಸಂದರ್ಭದಲ್ಲಿ ಚಾಕೊಲೇಟ್ ಕೊಡಿಸುವುದಾಗಿ ಪುಸಲಾಯಿಸಿ ಅಲ್ಲಿದ್ದ ಗಲ್ಲಿಯಲ್ಲಿ ಅತ್ಯಾಚಾರ ನಡೆಸಿ, ಕೊಲೆ ಮಾಡಿ ಶವವನ್ನು ಮಳವಳ್ಳಿ ಪಟ್ಟಣದ ಮೈಸೂರು ರಸ್ತೆಯ ಮಯೂರ ಬೇಕರಿ ಹಿಂಭಾಗದ ನಿರ್ಮಾಣ ಹಂತದ ಮನೆಯ ಕಟ್ಟಡದ ನೀರಿನ ಸಂಪಿಗೆ ಹಾಕಿದ್ದ ಎನ್ನಲಾಗಿದೆ.
ಆತನೇ ಹುಡುಕಾಟ ಮಾಡಿದ್ದ
ಮಳವಳ್ಳಿ ಪಟ್ಟಣದ ಎನ್ಇಎಸ್ ಬಡಾವಣೆಯಲ್ಲಿ ವಾಸವಾಗಿರುವ ದಂಪತಿಯ ಪುತ್ರಿ ದಿವ್ಯಾ ನಿನ್ನೆ ಬೆಳಿಗ್ಗೆ 11 ಗಂಟೆಗೆ ಟ್ಯೂಷನ್ ಗೆ ಎಂದು ಮನೆಯಿಂದ ಹೋದವಳು, ಸಂಜೆಯಾದರೂ ಮನೆಗೆ ಬಾರದ ಹಿನ್ನೆಲೆಯಲ್ಲಿ ಗಾಬರಿಯಾದ ಪೋಷಕರು ಟ್ಯೂಷನ್ ಸೆಂಟರ್ ಸೇರಿದಂತೆ ಅಕ್ಕಪಕ್ಕದಲ್ಲಿ ವಿಚಾರಿಸಿದರೂ ಬಾಲಕಿ ಪತ್ತೆಯಾಗಿರಲಿಲ್ಲ. ಟ್ಯೂಷನ್ ಸೆಂಟರ್ ನೋಡಿಕೊಂಡಿದ್ದ ಕಾಂತರಾಜು ಕೂಡ ನನಗೆ ಬಾಲಕಿ ದಿವ್ಯ ಬಗ್ಗೆ ಏನೂ ಗೊತ್ತಿಲ್ಲ ಎಂದು ಹೇಳಿ, ಆತನೂ ದಿವ್ಯಳ ಪಾಲಕರೊಂದಿಗೆ ಹುಡುಕಾಟ ನಡೆಸಿದ್ದ.
ಕೊನೆಗೆ ಮೈಸೂರು ರಸ್ತೆಯ ಮಯೂರ ಬೇಕರಿ ಹಿಂಭಾಗ ನಾಗರಾಜು ಎಂಬುವವರ ನಿರ್ಮಾಣ ಹಂತದ ಮನೆಯ ಕಟ್ಟಡದ ಸಮೀಪದಲ್ಲಿದ್ದ ಯಾರೋ ಒಬ್ಬರು ಬಾಲಕಿ ನೀರಿನ ಸಂಪ್ ನಲ್ಲಿ ಬಿದ್ದಿರುವ ಬಗ್ಗೆ ನೀಡಿದ ಮಾಹಿತಿ ಮೇರೆಗೆ ಪೋಲಿಸರು ನೀರಿನ ಸಂಪ್ ನಲ್ಲಿ ಪರಿಶೀಲನೆ ನಡೆಸಿದಾಗ ಬಾಲಕಿ ದಿವ್ಯಳ ಶವ ಪತ್ತೆಯಾಗಿತ್ತು.ಆಗಲೇ ಬಾಲಕಿ ಮೇಲೆ ಅತ್ಯಾಚಾರ ನಡೆಸಿ ಕೊಲೆ ಮಾಡಿರುವ ಬಗ್ಗೆ ಸಾಕಷ್ಟು ಅನುಮಾನ ವ್ಯಕ್ತವಾಗಿದ್ದವು.
ಸ್ಥಳಕ್ಕೆ ಡಿವೈಎಸ್ ಪಿ ಎನ್.ನವೀನ್ ಕುಮಾರ್, ಸಿಪಿಐ ಎ.ಕೆ.ರಾಜೇಶ್ ಭೇಟಿ ನೀಡಿ ಶ್ವಾನದಳದೊಂದಿಗೆ ಪರಿಶೀಲನೆ ಕೂಡ ನಡೆಸಿದರು. ಬಾಲಕಿಯ ಶವವನ್ನು ವೈದ್ಯಕೀಯ ಪರೀಕ್ಷೆಗಾಗಿ ಮಂಡ್ಯ ಜಿಲ್ಲಾಸ್ಪತ್ರೆಗೆ ಸಾಗಿಸಿ ಆರೋಪಿಯ ಪತ್ತೆಗೆ ಪೋಲಿಸರು ತನಿಖೆ ಕೈಗೆತ್ತಿಕೊಂಡಿದ್ದಾರೆ.
ಮಧ್ಯರಾತ್ರಿ ಆರೋಪಿ ಸಿಕ್ಕ
ಎಸ್ಐಗಳಾದ ಶೇಷಾದ್ರಿ ಕುಮಾರ್, ಶ್ರೀಧರ್, ಅಶೋಕ್ ಅವರು ಟ್ಯೂಷನ್ ಸೆಂಟರ್ ನೋಡಿಕೊಳ್ಳುತ್ತಿದ್ದ ಕಾಂತರಾಜು ಹೇಳಿಕೆಗಳ ಮೇಲೆ ಅನುಮಾನ ವ್ಯಕ್ತಪಡಿಸಿದ್ದರು. ಅವನನ್ನು ಕರೆತಂದು ವಿಚಾರಣೆ ಮಾಡಿದ ಸಂದರ್ಭದಲ್ಲಿ ಆತನೇ ಬಾಲಕಿ ದಿವ್ಯಳ ಮೇಲೆ ಅತ್ಯಾಚಾರ ನಡೆಸಿ ಕೊಲೆ ಮಾಡಿ, ನೀರಿನ ಸಂಪಿಗೆ ಹಾಕಿದ್ದ ಬಗ್ಗೆ ತಪ್ಪೊಪ್ಪಿಕೊಂಡಿದ್ದಾನೆ ಎಂದು ತಿಳಿದು ಬಂದಿದೆ.
ಮಳವಳ್ಳಿ ಪಟ್ಟಣ ಠಾಣೆಯ ಪೋಲಿಸರು ಕಾಂತರಾಜನನ್ನು ಬಂಧಿಸಿ ಮುಂದಿನ ಕ್ರಮ ಕೈಗೊಂಡಿದ್ದಾರೆ. ಆದರೆ ಇನ್ನೂ ಪ್ರಪಂಚ ನೋಡಬೇಕಿದ್ದ ಅಮಾಯಕ ಬಾಲಕಿ ದಿವ್ಯ ಕಾಮುಕನೊಬ್ಬನ ದುರ್ಬದ್ದಿಗೆ ಬಲಿಯಾದದ್ದು ಘೋರ ದುರಂತ. ಇಂತಹ ಕಾಮುಕರಿಗೆ ಕಠಿಣ ಶಿಕ್ಷೆಯಾಗಿ ಅತ್ಯಾಚಾರ ಮುಕ್ತ ಸಮಾಜ ನಿರ್ಮಾಣವಾಗಲು ಇನ್ನಷ್ಟು ಕಠಿಣ ಕ್ರಮದ ಕಾನೂನುಗಳು ಜಾರಿಯಾಗಬೇಕಿವೆ.
ಮನುಕುಲವೇ ನಾಚಿಸುವ ಘಟನೆ
ಮಳವಳ್ಳಿ ಪಟ್ಟಣದಲ್ಲಿ ಇಂತಹ ಘಟನೆ ನಡೆದಿರುವುದು ಮನುಕುಲವೇ ನಾಚಿಸುವಂತದದ್ದು ಎಂದು ಶಾಸಕ ಡಾ.ಅನ್ನದಾನಿ ಆಘಾತ ವ್ಯಕ್ತಪಡಿಸಿದ್ದಾರೆ.
ಮಂಡ್ಯ ಜಿಲ್ಲಾಸ್ಪತ್ರೆಯ ಶವಗಾರದ ಬಳಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮಳವಳ್ಳಿ ಪಟ್ಟಣದ ಇತಿಹಾಸದಲ್ಲೆ ಇಂತಹ ಘಟನೆ ನಡೆದಿರಲಿಲ್ಲ, ಇದು ಮನುಕುಲವೇ ತಲೆತಗ್ಗಿಸುವ ಘಟನೆಯಾಗಿದೆ ಎಂದರು.
ಮೇಲ್ನೋಟಕ್ಕೆ ಟ್ಯೂಷನ್ ನಡೆಸುತ್ತಿದ್ದ ವ್ಯಕ್ತಿಯೇ ಈ ಕೃತ್ಯವೆಸಗಿದ್ದಾನೆಂದು ತಿಳಿದು ಬಂದಿದೆ. ಈ ಬಗ್ಗೆ ತನಿಖೆ ನಡೆಯುತ್ತಿದೆ. ಇಂತಹ ಕೃತ್ಯ ನಡೆಸಿದವನ ವಿರುದ್ದ ಪೋಕ್ಸೋ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಂಡು ಉಗ್ರವಾದ ಶಿಕ್ಷೆ ವಿಧಿಸಬೇಕೆಂದು ಅವರು ಒತ್ತಾಯಿಸಿದರು.