ನಿರುಪಯುಕ್ತ ಜಾಗತಿಕ ಬಂಡವಾಳ ಹೂಡಿಕೆದಾರರ ಸಭೆ ವಿರೋಧ ವ್ಯಕ್ತಪಡಿಸಿ ಹಾಗೂ ಹಲವು ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಕರ್ನಾಟಕ ಪ್ರಾಂತ ರೈತ ಸಂಘದಿಂದ ಮಳವಳ್ಳಿ ಪಟ್ಟಣದ ತಹಸೀಲ್ದಾರ್ ಕಚೇರಿ ಮುಂದೆ ಪ್ರತಿಭಟನೆ ನಡೆಸಲಾಯಿತು.
ಮಳವಳ್ಳಿ ಪಟ್ಟಣದ ಸಾರಿಗೆ ಬಸ್ ನಿಲ್ದಾಣದಿಂದ ಹೊರಟ ಪ್ರತಿಭಟನಾಕಾರರು, ಸರ್ಕಾರ ವಿರುದ್ದ ಘೋಷಣೆ ಕೂಗುತ್ತಾ ತಹಶೀಲ್ದಾರ್ ಮುಂದೆ ಕಚೇರಿ ಮುಂದೆ ಜಮಾಯಿಸಿದರು. ಕೇಂದ್ರದಲ್ಲಿ ಅಧಿಕಾರ ನಡೆಸುತ್ತಿರುವ ಬಿಜೆಪಿ ಸರ್ಕಾರವು ಕೇವಲ ಕಣ್ಣೋರೆಸುವ ತಂತ್ರವಾಗಿ ಹೂಡಿಕೆದಾರರ ಸಭೆ ನಡೆಸುತ್ತಿದೆ, ದೇಶದಲ್ಲಿ ಹಣದುಬ್ಬರ ಏರುತ್ತಲೇ ಇದೆ, ಇದರ ನಿಯಂತ್ರಣಕ್ಕೆ ಕ್ರಮ ಕೈಗೊಂಡಿಲ್ಲ ಎಂದು ಆರೋಪಿಸಿದರು.
ಬಿಜೆಪಿ ಸರ್ಕಾರ ಬಂದ ಮೇಲೆ ನಿರುದ್ಯೋಗ ಹೆಚ್ಚಾಗಿದೆ. ಷೇರುಪೇಟೆಯಲ್ಲಿ ಡಾಲರ್ ಎದುರು ರೂಪಾಯಿ ಮೌಲ್ಯ ಕುಸಿತ ಕಾಣುತ್ತಿದೆ, ಇದರ ನಿಯಂತ್ರಣವು ಸಾಧ್ಯವಾಗಿಲ್ಲ, ಜೀವನಾವಶ್ಯಕ ವಸ್ತುಗಳ ಬೆಲೆಗಳು ಗಗನಕ್ಕೇರಿವೆ, ಇದರಿಂದಾಗಿ ಜನ ಸಾಮಾನ್ಯರು ಜೀವನ ನಡೆಸುವುದೆ ಕಷ್ಟವಾಗಿದೆ ಎಂದು ದೂರಿದರು.
ವಿದ್ಯುತ್ ಮಸೂದೆ ಸಂಸತ್ತಿನಲ್ಲಿ ವಾಪಸ್ಸು ಪಡೆಯುವುದು ಸೇರಿದಂತೆ ಹಲವರು ಬೇಡಿಕೆಗಳನ್ನು ಈಡೇರಿಸುವಂತೆ ಮನವಿ ಸಲ್ಲಿಸಲಾಯಿತು. ಪ್ರತಿಭಟನೆಯಲ್ಲಿ ಪ್ರಾಂತ ರೈತ ಸಂಘದ ಅಧ್ಯಕ್ಣ ಭರತ್ ರಾಜ್, ಲಿಂಗರಾಜುಮೂರ್ತಿ, ಶಿವಕುಮಾರ, ಚಿಕ್ಕಸ್ವಾಮಿ, ಗುರುಸ್ವಾಮಿ, ಶಿವಪ್ಪ, ಪ್ರಮೀಳಾ ಮತ್ತಿತರರಿದ್ದರು.