ಟನ್ ಕಬ್ಬಿಗೆ 4500 ರೂ. ಲೀಟರ್ ಹಾಲಿಗೆ 40 ರೂ. ಬೆಲೆ ನಿಗದಿಪಡಿಸುವಂತೆ ಒತ್ತಾಯಿಸಿ ರೈತರು ನಡೆಸುತ್ತಿರುವ ಹೋರಾಟ ನ್ಯಾಯಯುತವಾಗಿದ್ದು, ಕೂಡಲೇ ರೈತರ ಬೇಡಿಕೆಗಳನ್ನು ಈಡೇರಿಸಬೇಕೆಂದು ಆದಿಚುಂಚನಗಿರಿ ಪೀಠಾಧ್ಯಕ್ಷ ಡಾ.ಶ್ರೀನಿರ್ಮಲಾನಂದ ಸ್ವಾಮೀಜಿ ಸರ್ಕಾರವನ್ನು ಒತ್ತಾಯಿಸಿದರು.
ಕಳೆದ 23 ದಿನಗಳಿಂದ ಮಂಡ್ಯನಗರದಲ್ಲಿ ಕರ್ನಾಟಕ ರಾಜ್ಯ ರೈತಸಂಘದ ನೇತೃತ್ವದಲ್ಲಿ ನಡೆಸುತ್ತಿರುವ ಅನಿರ್ದಿಷ್ಟಾವದಿ ಅಹೋರಾತ್ರಿ ಧರಣಿಯಲ್ಲಿ ಮಂಗಳವಾರ ಭಾಗವಹಿಸಿ ರೈತರ ಹೋರಾಟಕ್ಕೆ ಬೆಂಬಲ ವ್ಯಕ್ತಪಡಿಸಿ ಅವರು ಮಾತನಾಡಿದರು.
ರೈತರು ಬೆಳೆದ ಬೆಳೆಗಳಿಗೆ ನ್ಯಾಯಯುತ ಬೆಲೆ ಸಿಗದಿರುವುದರಿಂದ ನಷ್ಟ ಅನುಭವಿಸುತ್ತಿದ್ದಾರೆ, ಒಂದು ಟನ್ ಕಬ್ಬು ಬೆಳೆಯಲು ಸುಮಾರು 3700 ರೂ. ವೆಚ್ಚವಾಗುತ್ತಿದೆ, ಆದರೆ ಸರ್ಕಾರ ಟನ್ ಕಬ್ಬಿಗೆ ಕೇವಲ 2700 ರೂ. ನಿಗದಿ ಮಾಡಿದೆ, ಇದರಿಂದಾಗಿ ವ್ಯವಸಾಯವು ಲಾಭದಾಯಕವಾಗಿಲ್ಲ ಎಂದು ಯುವಜನರು ನಗರ ಪಟ್ಟಣಗಳಿಗೆ ವಲಸೆ ಹೋಗಿ ಸಣ್ಣ ಕೆಲಸಗಳಿಗೆ ಸೇರಿಕೊಂಡು ಬದುಕುತ್ತಿದ್ದಾರೆ ಇದು ಅತಂಕಕಾರಿ ಬೆಳವಣಿಗೆ. ಇದು ಹೀಗೆ ಮುಂದುವರೆಗೆ ಮುಂದಿನ ದಿನಗಳಲ್ಲಿ ಆಹಾರ ಭದ್ರತೆಗೆ ತೊಡಕುಂಟಾಗಲಿದೆ ಎಂದು ಹೇಳಿದರು.
ರೈತರು ಕೂಡ ”ಅಪ್ಪ ಹಾಕಿದ ಆಲ ಮರ” ಎಂಬಂತೆ ಎಂಬಂತೆ ಕೇವಲ ಸಾಂಪ್ರಾದಾಯಿಕ ಕೃಷಿಗೆ ಜೋತು ಬೀಳದೆ, ಕಡಿಮೆ ಖರ್ಚಿನಲ್ಲಿ ವ್ಯವಸಾಯ ಮಾಡುವ ತಂತ್ರಜ್ಞಾನಗಳನ್ನು ಸದುಪಯೋಗಪಡಿಸಿಕೊಳ್ಳಬೇಕು. ಕೃಷಿ ಕ್ಷೇತ್ರದ ವಿಜ್ಞಾನಿಗಳು ಕೂಡ ತಮ್ಮ ಹೊಸ ಹೊಸ ಆವಿಷ್ಕಾರಗಳು ಕೂಡಲೇ ರೈತರಿಗೆ ತಲುಪುವಂತಹ ವ್ಯವಸ್ಥೆ ಮಾಡಬೇಕೆಂದು ಸಲಹೆ ನೀಡಿದರು. ಈ ಸಂದರ್ಭದಲ್ಲಿ ಪುರುಷೋತ್ತಮನಾಥ ಸ್ವಾಮೀಜಿ ಉಪಸ್ಥಿತರಿದ್ದರು.