ಸರ್ಕಾರಿ ಶಾಲೆಗಳಲ್ಲಿಯೂ ಉತ್ತಮ ಗುಣಮಟ್ಟದ ಶಿಕ್ಷಣ ನೀಡಲಾಗುತ್ತಿದ್ದು,ಇದೇ ರೀತಿ ಸಾಗಿದರೆ ಮಕ್ಕಳು ಹೆಚ್ಚಿನ ಸಂಖ್ಯೆಯಲ್ಲಿ ಧಾವಿಸಿ ಬರುತ್ತಾರೆ ಎಂದು ನಗರಸಭಾ ಸದಸ್ಯ ನಾಗೇಶ್ ಹೇಳಿದರು.
ಮಂಡ್ಯ ನಗರದ ಹಳೇನಗರದಲ್ಲಿರುವ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಆವರಣದಲ್ಲಿ ಶಾಲಾಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ, ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ ಹಾಗೂ ಕ್ಷೇತ್ರ ಸಂಪನ್ಮೂಲ ಕೇಂದ್ರ ದಕ್ಷಿಣ ವಲಯ, ಸಮೂಹ ಸಂಪನ್ಮೂಲ ಕೇಂದ್ರ, ವಿವೇಕಾನಂದ ಸ್ಪೋರ್ಟ್ಸ್ ಮತ್ತು ಕ್ರಿಯೇಶನ್ ಮಂಡ್ಯ ಇವರ ಸಹಕಾರದೊಂದಿಗೆ ಆಯೋಜಿಸಿದ್ದ ಕಲಿಕಾ ಚೇತರಿಕಾ ವರ್ಷ 2022 ಅಂಗವಾಗಿ ಕ್ಲಸ್ಟರ್ ಮಠದ ಪ್ರತಿಭಾ ಕಾರಂಜಿ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
ಖಾಸಗಿ ಶಾಲೆಗಳಿಗಿಂತ ಉತ್ತಮವಾಗಿ ಸರ್ಕಾರಿ ಶಾಲೆಗಳಲ್ಲಿ ಪ್ರತಿಭಾ ಕಾರಂಜಿ ನಡೆಯುತ್ತದೆ.ಇಂದಿನ ದಿನಗಳಲ್ಲಿ ಸರ್ಕಾರಿ ಶಾಲೆಗಳನ್ನು ದೂಷಿಸುವುದು ಕಡಿಮೆಯಾಗುತ್ತಿದೆ. ಉತ್ತಮ ಶಿಕ್ಷಕರು ಗುಣಮಟ್ಟದ ಶಿಕ್ಷಣ ನೀಡುತ್ತಿದ್ದು, ವಿದ್ಯಾರ್ಥಿಗಳಲ್ಲಿನ ಪ್ರತಿಭೆಯನ್ನು ಲೋಕಮಾನ್ಯ ಗೊಳಿಸುತ್ತಿದ್ದಾರೆ ಎಂದರು.
ಪ್ರತಿಭಾವಂತ ವಿದ್ಯಾರ್ಥಿಗಳನ್ನು ಸೃಷ್ಠಿಸುವುದು ಶಿಕ್ಷಕರು ಮತ್ತು ಪೋಷಕರು, ವಿದ್ಯಾರ್ಥಿಗಳಿಗೆ ಪ್ರೊತ್ಸಹ ನೀಡಿದರೆ ಉತ್ತಮ ಸಾಧನೆ ಮಾಡುವತ್ತ ಹೆಜ್ಜೆಹಾಕುತ್ತಾರೆ ಎಂದು ತಿಳಿಸಿದರು.
ಬಳಿಕ 18 ವಿವಿಧ ಶಾಲೆಗಳ ತರಗತಿಯ ವಿದ್ಯಾರ್ಥಿ ವಿದ್ಯಾರ್ಥಿನಿಯರು ಪ್ರತಿಭಾ ಕಾರಂಜಿಯಲ್ಲಿ ಪಾಲ್ಗೊಂಡು ಪ್ರತಿಭಾ ಪ್ರದರ್ಶನ ನೀಡಿದರು. ವಿಜೇತರು ಬಹುಮಾನ ಪಡೆದರು.
ಕಾರ್ಯಕ್ರಮದಲ್ಲಿ ಬಿ.ಆರ್.ಸಿ ಸಂಪನ್ಮೂಲ ವ್ಯಕ್ತಿ ಉಮೇಶ್, ಸಿರ್ಪಿ ಲಿಂಗರಾಜು, ವಿವೇಕಾನಂದ ಸ್ಪೋರ್ಟ್ಸ್ ಮತ್ತು ಕ್ರಿಯೇಶನ್ ಮುಖ್ಯಸ್ಥರಾದ ಟೆಕ್ನಿಕ್ ಮಂಜು, ಇಸಿಓ ಸ್ವಾಮಿ, ನಗರಸಭಾ ಸದಸ್ಯರಾದ ಮಂಜುಳಾ, ಪೂರ್ಣಿಮಾ, ನಯೀಂ, ಮುಖ್ಯಶಿಕ್ಷಕ ನಾಗರಾಜು, ಪ್ರಾಂಶುಪಾಲ ಮಧುಕುಮಾರ್, ಶಿಕ್ಷಕರಾದ ದೇವರಾಜು, ಎಸ್.ಡಿ.ಎಂ.ಸಿ ಅಧ್ಯಕ್ಷೆ ವರಲಕ್ಷ್ಮಿ ಸೇರಿದಂತೆ ಶಿಕ್ಷಕರು ಇದ್ದರು.