ವರದಿ: ಪ್ರಭು ವಿ. ಎಸ್.
ರಾಜ್ಯ ಸರ್ಕಾರದ ಜನಪರ ಯೋಜನೆಗಳು, ಗ್ಯಾರೆಂಟಿ ಯೋಜನೆಗಳು ನಮಗೆ ಮುಂದೆ ಕೈ ಹಿಡಿಯಲಿವೆ ಎಂದು ಉಸ್ತುವಾರಿ ಸಚಿವ ಚೆಲುವರಾಯಸ್ವಾಮಿ ತಿಳಿಸಿದರು.
ತಾಲ್ಲೂಕಿನ ಕೊಪ್ಪ ಹೋಬಳಿಯ ಮರಳಿಗ ಗ್ರಾಮದಲ್ಲಿ ಸೋಮವಾರ ನಡೆದ ಜನಸಂಪರ್ಕ ಸಭೆಯನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಚುನಾವಣೆಗೂ ಮೊದಲೇ ಹೇಳಿದ್ದಂತೆ ಪಕ್ಷವು ಅಧಿಕಾರಕ್ಕೆ ಬಂದ ಕೂಡಲೇ ಗ್ಯಾರಂಟಿ ಯೋಜನೆಗಳನ್ನು ಅನುಷ್ಠಾನಕ್ಕೆ ತರುವ ಮೂಲಕ ನುಡಿದಂತೆ ನಡೆದಿದ್ದೇವೆ ಎಂದರು.
ಬರಗಾಲವಿದ್ದರೂ ಹಲವಾರು ಅಭಿವೃದ್ಧಿ ಯೋಜನೆಗಳನ್ನು ರಾಜ್ಯ ಸರ್ಕಾರವು ಹಮ್ಮಿಕೊಂಡಿದ್ದು ಕೃಷಿ ಇಲಾಖೆಯ ಮೂಲಕ 1400 ಕೋಟಿ ಬೆಳೆ ವಿಮೆಯನ್ನು ರಾಜ್ಯದ ರೈತರಿಗೆ ಇದೇ ಮಾರ್ಚ್ ಅಂತ್ಯದೊಳಗೆ ವಿತರಿಸಲಾಗುತ್ತದೆ ಹಾಗೂ ಬೆಳೆ ನಷ್ಟ ಸರ್ವೇ ಮಾಡಿ ರೈತರಿಗೆ 2 ಸಾವಿರ ರೂಗಳನ್ನು ನೀಡಲಾಗಿದೆ ಎಂದರು.
ಗ್ರಾಮೀಣ ಭಾಗದ ಮಹಿಳೆಯರಿಗೆ ಬಡ್ಡಿ ರಹಿತ ಸಾಲವನ್ನು ನೀಡುವುದು ಸೇರಿದಂತೆ ಆಡಳಿತ ಯಂತ್ರಕ್ಕೆ ಚುರುಕು ತಂದಿದ್ದು ಜಿಲ್ಲೆಯಲ್ಲಿದ್ದ ಸುಮಾರು 9 ಸಾವಿರ ಕಂದಾಯ ಇಲಾಖೆಗೆ ಸಂಬಂಧಿಸಿದಂತಹ ಅರ್ಜಿಗಳಲ್ಲಿ 8 ಸಾವಿರ ಅರ್ಜಿಗಳಿಗೆ ಪರಿಹಾರ ಒದಗಿಸಿ ಇತ್ಯರ್ಥಪಡಿಸಲಾಗಿದೆ ಎಂದರು.
ಇತ್ತೀಚೆಗೆ ರಾಜ್ಯ ಬಜೆಟ್ ನಲ್ಲಿ ಜಿಲ್ಲೆಯ ಜೀವನಾಡಿ ಮೈಶುಗರ್ಸ್ ನ ನೂತನ ಕಾರ್ಖಾನೆ, ಜಿಲ್ಲೆಯಲ್ಲಿ ಕೃಷಿ ವಿಶ್ವವಿದ್ಯಾಲಯ ಆರಂಭಿಸುವುದಕ್ಕೆ ಯೋಜನೆ ರೂಪಿಸಲಾಗಿದೆ ಎಂದ ಅವರು ಕೊಪ್ಪ ಭಾಗದ ಸರ್ವಾo ಗೀಣ ಅಭಿವೃದ್ಧಿಗೆ ಮುಂದಿನ ದಿನಗಳಲ್ಲಿ ಹೆಚ್ಚು ಒತ್ತು ನೀಡಲಾಗುವುದು ಎಂದರು.
ಈ ಎಲ್ಲಾ ರಾಜ್ಯ ಸರ್ಕಾರದ ಯೋಜನೆಗಳನ್ನು ರಾಜ್ಯದ ಜನರು ಆಶೀರ್ವಾದಿಸಿ ಮುಂದಿನ ಚುನಾವಣೆಗಳಲ್ಲಿ ಪ್ರತಿಫಲ ನೀಡುತ್ತಾರೆ ಎಂಬ ನಂಬಿಕೆಯಿದೆ ಎಂದರು.
ಕಾರ್ಯಕ್ರಮದ ವೇಳೆ ಉಪ ವಿಭಾಗಾಧಿಕಾರಿ ಮಹೇಶ್, ತಹಸಿಲ್ದಾರ್ ಸೋಮಶೇಖರ್, ಡಿಸಿಸಿ ಬ್ಯಾಂಕ್ ಅಧ್ಯಕ್ಷ ಜೋಗಿ ಗೌಡ, ಇಓ ಮಂಜುನಾಥ್, ಬಿ ಇ ಓ ಕಾಳಿರಯ್ಯಾ, ಮರಳಿಗ ಗ್ರಾ ಪಂ ಅಧ್ಯಕ್ಷೆ ಸುವರ್ಣ ಸುರೇಶ್, ಉಪಾಧ್ಯಕ್ಷೆ ನೀಲಮ್ಮ, ಮುಖಂಡರಾದ ವೆಂಕಟರಮಾಣ ಚಂದ್ರು ವಕೀಲ ಸತ್ಯಾಪ್ಪ ಸೇರಿದಂತೆ ಗ್ರಾಮಸ್ಥರು ವಿವಿಧ ಇಲಾಖೆ ಅಧಿಕಾರಿಗಳು ಸೇರಿದಂತೆ ಇತರರು ಹಾಜರಿದ್ದರು.