ಅಕ್ಷರ ಕಲಿಸಿದ ಗುರುವಿಗೆ ವಂದನೆ ಸಲ್ಲಿಸುವ ಉದ್ದೇಶದಿಂದ ನಾಗಮಂಗಲ ತಾಲೂಕಿನ ದೊಂದೇ ಮಾದಹಳ್ಳಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ನೂರಾರು ಹಿರಿಯ ವಿದ್ಯಾರ್ಥಿ ಮತ್ತು ವಿದ್ಯಾರ್ಥಿನಿಯರು ಶಾಲೆಯ ಆವರಣದಲ್ಲಿ ಹಳೆಯ ವಿದ್ಯಾರ್ಥಿಗಳ ಸ್ನೇಹ ಮಿಲನ ಮಹಾಸಮಾವೇಶ ಮತ್ತು ಗುರುವಂದನೆ ಕಾರ್ಯಕ್ರಮವನ್ನು ಅರ್ಥಪೂರ್ಣವಾಗಿ ಆಚರಣೆ ಮಾಡಿದರು
ಪಾಠ ಹೇಳಿದ ಮಾಸ್ಟರ್ ಗಳಿಗೆ ಹಾರ ತುರಾಯಿ ಹಾಕಿ ವಾದ್ಯಗಳ ಮೂಲಕ ಪುಷ್ಪಾರ್ಚನೆ ಸಲ್ಲಿಸಿ ವೇದಿಕೆಗೆ ಗೌರವವಿತವಾಗಿ ಕರೆತಂದರು. ಗಣ್ಯರಿಂದ ವೇದಿಕೆ ಕಾರ್ಯಕ್ರಮ ಉದ್ಘಾಟನೆ ಮಾಡಿ ಹದಿನೆಂಟು ಜನ ತಮ್ಮ ಗುರುಗಳಿಗೆ ವೇದಿಕೆಯಲ್ಲಿ ಗುರುನಮನ ಸಲ್ಲಿಸಿ ಸನ್ಮಾನಿಸಿ ಆಶೀರ್ವಾದ ಪಡೆದರು.
ವೇದಿಕೆಯಲ್ಲಿ ತಮ್ಮ ನೆಚ್ಚಿನ ಶಿಕ್ಷಕರಾದ ಹೊನ್ನೇಗೌಡ, ಮಹಮದ್, ಜವರೇಗೌಡ, ಬೋರೇಗೌಡ, ಮುದ್ದೇಗೌಡ, ವೀರಣ್ಣಗೌಡ, ದೇವರಾಜು, ಪುಟ್ಟನಾಯಕ, ಜಯಸ್ವಾಮಿ, ರಿಯಾಜ್ ಅಹ್ಮದ್, ಸುನಿಲ್, ರಂಜಿತ್, ನದಿಂ ಉನ್ನಿಸ್ ,ವರಲಕ್ಷ್ಮಿ ಹಾಗೂ ಇತರರಿಗೆ ಸನ್ಮಾನಿಸಿದರು
ಇದೇ ಸಂದರ್ಭದಲ್ಲಿ ಹಿರಿಯ ವಿದ್ಯಾರ್ಥಿಗಳ ಕುರಿತು ಶಿಕ್ಷಕರು ಮಾತನಾಡಿ, ವಿದ್ಯಾದಾನವನ್ನು ಮಾಡುವುದು ಪ್ರತಿಯೊಬ್ಬ ಶಿಕ್ಷಕನ ಕರ್ತವ್ಯವಾಗಿದೆ. ವೃತ್ತಿ ಧರ್ಮದಂತೆ ನಿಮಗೆ ಬೋಧನೆ ಮಾಡಿದ್ದೇವೆ, ಇಂದು ನೀವು ನಮ್ಮ ಮುಂದೆ ಗೌರವ ಸೂಚಕವಾಗಿ ನಿಂತಿರುವುದು ನಮಗೆ ಹೆಮ್ಮೆ ಎನಿಸುತ್ತದೆ. ನಾವು ಧಾರೆ ಎರದ ವಿದ್ಯೆ ಸಾರ್ಥಕವಾಗಿದೆ ಎಂದರು.
ಪುಟ್ಟ ಮಕ್ಕಳಂತೆ ಕುಳಿತು ಪಾಠ ಕೇಳುತ್ತಿದ್ದ ನೀವು ನಮ್ಮ ಆಳೆತನಕ್ಕೆ ಬೆಳೆದು ನಮ್ಮನ್ನೇ ಕರೆದು ಸನ್ಮಾನಿಸುತ್ತಿರುವುದು ಕಣ್ಣಿನಂತಚಿನಲ್ಲಿ ನೀರು ತರಿಸುತ್ತದೆ ಎಲ್ಲರಿಗೂ ಒಳ್ಳೆಯದಾಗಲಿ, ಉತ್ತಮ ಜೀವನವನ್ನು ರೂಪಿಸಿಕೊಂಡು ನಿಮ್ಮ ಮಕ್ಕಳಿಗೆ ಮತ್ತು ಈ ಗ್ರಾಮದ ಶಾಲೆಯ ಮಕ್ಕಳಿಗೆ ಒಳ್ಳೆಯ ಭವಿಷ್ಯ ರೂಪಿಸಲು ವಿದ್ಯಾ ದಾನ ಮಾಡಲು ಮುಂದಾಗಿ ಎಂದು ಕರೆ ನೀಡಿದರು.
ವೇದಿಕೆಯಲ್ಲಿ ತಮ್ಮ ನೆಚ್ಚಿನ ಶಿಕ್ಷಕರು ಶಾಲಾ ವಿದ್ಯಾರ್ಥಿಗಳು ಮತ್ತು ಹಿರಿಯ ವಿದ್ಯಾರ್ಥಿಗಳಿಗೆ ಕಳೆದು ಹೋದ ಶೈಕ್ಷಣಿಕ ಪರ್ವ ಮತ್ತು ಪ್ರಸ್ತುತ ವಿಚಾರಗಳ ಕುರಿತು ಮಾತನಾಡಿದರು. ಕಾರ್ಯಕ್ರಮದಲ್ಲಿ ದೊಂದೆ ಮಾದಹಳ್ಳಿ ಗ್ರಾಮದ ಗ್ರಾಮಸ್ಥರು ಹಾಗೂ ಹಳೆಯ ವಿದ್ಯಾರ್ಥಿಗಳು ಮತ್ತು ಕುಟುಂಬಸ್ಥರು. ಶಾಲಾ ಶಿಕ್ಷಕರು ಮತ್ತು ವಿದ್ಯಾರ್ಥಿಗಳು ಭಾಗವಹಿಸಿದ್ದರು.