ರಾಜ್ಯ ಸರ್ಕಾರದ ಮಹಿಳೆಯರ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ‘ವ್ಯಕ್ತಿ ಪ್ರಶಸ್ತಿ’ ಯಲ್ಲಿ ಬಂದಿದ್ದ ₹ 25 ಸಾವಿರ ರೂ.ಗಳ ಜೊತೆಗೆ ವೈಯಕ್ತಿಕವಾಗಿ ಇನ್ನೂ ₹10 ಸಾವಿರಗಳನ್ನು ಸೇರಿಸಿ ಸರ್ಕಾರಿ ಶಾಲೆಗೆ ಬಣ್ಣ (ಪೈಂಟಿಂಗ್) ಮಾಡಿಸುವ ಮೂಲಕ ಮಂಡ್ಯದ ನವೋದಯ ಕೇಂದ್ರದ ತರಬೇತುದಾರರಾದ ಹೆಚ್.ಆರ್. ಕನ್ನಿಕ ಸಮಾಜಕ್ಕೆ ಮಾದರಿಯಾಗಿದ್ಧಾರೆ.
ಮಂಡ್ಯ ತಾಲ್ಲೂಕಿನ ಹುಲಿವಾನ ಜನತಾ ಕಾಲೋನಿಯ ಸರ್ಕಾರಿ ಶಾಲೆಗೆ ಒಟ್ಟು ₹35 ಸಾವಿರ ವೆಚ್ಚದಲ್ಲಿ ಬಣ್ಣ ಮಾಡಿಸುವ ಮೂಲಕ ಶಾಲೆಯ ಪ್ರಗತಿಗೆ ಶ್ರಮಿಸಿದ್ದಾರೆ. ಕನ್ನಿಕ ಅವರ ಈ ಸೇವೆಯನ್ನು ಮೆಚ್ಚಿ ಜನತಾ ಕಾಲೋನಿ ಸರ್ಕಾರಿ ಶಾಲೆ ಮುಖ್ಯ ಶಿಕ್ಷಕರಾದ ಸುಜಾತ ಸೇರಿದಂತೆ ಎಸ್ ಎಡಿ ಎಂ ಸಿ ಸದಸ್ಯರು, ಮಕ್ಕಳ ಪೋಷಕರು ಹಾಗೂ ವಿದ್ಯಾರ್ಥಿಗಳು, ಅವರನ್ನು ಆತ್ಮೀಯವಾಗಿ ಸನ್ಮಾನಿಸಿದರು.
ಮಂಡ್ಯದಲ್ಲಿ ಕಳೆದ 28 ವರ್ಷಗಳಿಂದ ಕನ್ನಿಕ ಶಿಲ್ಪ ನವೋದಯ ತರಬೇತಿ ಕೇಂದ್ರದ ವತಿಯಿಂದ ಮಕ್ಕಳಿಗೆ ತರಬೇತಿ ನೀಡುತ್ತಿರುವ ಸೇವೆಯನ್ನು ಗುರುತಿಸಿ ರಾಜ್ಯ ಸರ್ಕಾರವು ಕಳೆದ ನ. 23ರ ಮಕ್ಕಳ ದಿನಾಚರಣೆಯಂದು ವ್ಯಕ್ತಿ ಪ್ರಶಸ್ತಿ ನೀಡಿ ಗೌರವಿಸುವುದರೊಂದಿಗೆ, ₹ 25 ಸಾವಿರ ನಗದು ಪ್ರಶಸ್ತಿಯ ಮೊತ್ತವಾಗಿ ನೀಡಿತ್ತು.