ಅಂಗನವಾಡಿ ಕೇಂದ್ರದಲ್ಲಿ ಹಾವು ಕಚ್ಚಿ ಬಾಲಕನೊಬ್ಬ ಸಾವಿಗೀಡಾದ ಘಟನೆ ಹಾಸನ ಜಿಲ್ಲೆಯ ಸಕಲೇಶಪುರ ತಾಲೂಕಿನ ದೊಡ್ಡಕಲ್ಲೂರು ಗ್ರಾಮದಲ್ಲಿ ನಡೆದಿದೆ.
ಗ್ರಾಮದ ಯಶವಂತ್-ಗೌರಿ ದಂಪತಿಯ ಪುತ್ರ ರೋಷನ್(4) ಮೃತಪಟ್ಟ ಬಾಲಕ. ಅಂಗನವಾಡಿ ಸಹಾಯಕಿ ಮಕ್ಕಳನ್ನು ಕರೆತರಲು ಮನೆಗಳಿಗೆ ಹೋಗಿದ್ದಾಗ ಘಟನೆ ನಡೆದಿದೆ.
ಹಾವುಕಚ್ಚಿದ ತಕ್ಷಣ 108ಗೆ ಕರೆ ಮಾಡಿದರೂ ಸಮಯಕ್ಕೆ ಸರಿಯಾಗಿ ಆಂಬುಲೆನ್ಸ್ ಸಿಗದಿದ್ದರಿಂದಾಗಿ ಹೆತ್ತೂರು ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಮಗುವನ್ನು ತಂದೆ ಬೈಕ್ನಲ್ಲೇ ಕರೆತಂದಿದ್ದಾರೆ. ಹೆತ್ತೂರಿನಿಂದಲೂ ಸಕಲೇಶಪುರಕ್ಕೆ ಆಂಬುಲೆನ್ಸ್ ಸಿಕ್ಕಿಲ್ಲ. ಸಕಲೇಶಪುರಕ್ಕೆ ಬೈಕ್ನಲ್ಲಿ ಬಾಲಕನನ್ನು ಕರೆದೊಯ್ಯುತ್ತಿದ್ದಾಗ ಮಾರ್ಗ ಮಧ್ಯೆ ಸಾವನ್ನಪ್ಪಿದ್ದಾನೆ.
“ಸಕಲೇಶಪುರ ತಾಲೂಕಿನಾದ್ಯಂತ ಕೇವಲ ಒಂದೇ ಆಂಬುಲೆನ್ಸ್ ಸಂಚರಿಸುತ್ತಿದ್ದು, ಅದು ಎಲ್ಲೆಡೆ ಅಗತ್ಯಕ್ಕೆ ಸರಿಯಾಗಿ ಜನರಿಗೆ ದೊರೆಯುತ್ತಿಲ್ಲ ಎಂದು ಸಾರ್ವಜನಿಕರು ಆತಂಕ ವ್ಯಕ್ತಪಡಿಸಿದ್ದಾರೆ. ಸರಿಯಾದ ಸಮಯಕ್ಕೆ ಆಂಬುಲೆನ್ಸ್ ಸಿಗದೇ ಬಾಲಕ ಮೃತಪಟ್ಟಿದ್ದಾನೆ” ಎಂದು ಪೋಷಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಯಸಳೂರು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.