ಮಂಡ್ಯ ಲೋಕಸಭಾ ಚುನಾವಣೆಗೆ ಬಿಜೆಪಿ-ಜೆಡಿಎಸ್ ಮೈತ್ರಿ ಅಭ್ಯರ್ಥಿಯಾಗಿರುವ ಸ್ಪರ್ಧೆ ಮಾಡಿರುವ ಹೆಚ್.ಡಿ.ಕುಮಾರಸ್ವಾಮಿ ಅವರು ಮಂಡ್ಯಕ್ಕೆ ತಾವು ನೀಡಿರುವ ಕೊಡುಗೆಗಳ ಆಧಾರದ ಮೇಲೆ ಮತಯಾಚಿಸಲಿ ಎಂದು ಮೈಷುಗರ್ ಹಾಗೂ ಮಂಡ್ಯ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಸಿ.ಡಿ.ಗಂಗಾಧರ್ ಆಗ್ರಹಿಸಿದ್ದಾರೆ.
ಮಂಡ್ಯದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ನಮ್ಮ ಕಾಂಗ್ರೆಸ್ ಪಕ್ಷವು ಕಳೆದ 10 ತಿಂಗಳಿಂದ ಮಾಡಿರುವ 5 ಗ್ಯಾರಂಟಿಗಳ ಅನುಷ್ಠಾನವನ್ನು ಮುಂದಿಟ್ಟುಕೊಂಡು, ಕಾಂಗ್ರೆಸ್ ಅಭ್ಯರ್ಥಿ, ಜಿಲ್ಲೆಯ ಮಣ್ಣಿನ ಮಗ ವೆಂಕಟರಮಣೇಗೌಡ (ಸ್ಟಾರ್ ಚಂದ್ರು) ಅವರಿಗೆ ಮತ ಚಲಾಯಿಸಬೇಕೆಂದು ಜನರ ಬಳಿ ಮತ ಪ್ರಚಾರ ನಡೆಸುತ್ತಿದ್ದೇವೆ, ಅದೇ ರೀತಿ ತಮ್ಮ ಸಾಧನೆಗಳಿದ್ದರೆ ತಿಳಿಸಲಿ ಎಂದು ಸವಾಲು ಹಾಕಿದರು.
ಮುಖ್ಯಮಂತ್ರಿ ಹುದ್ದೆ ತಪ್ಪಿಸಿದರು
ಮಂಡ್ಯ ಜಿಲ್ಲೆಯ ಮಣ್ಣಿನ ಮಗ 20 ವರ್ಷಗಳ ಹಿಂದೆ 2004 ರಲ್ಲಿ ಅತಂತ್ರ ವಿಧಾನಸಭೆ ನಿರ್ಮಾಣವಾದಾಗ 2ನೇ ಭಾರಿ ಮುಖ್ಯಮಂತ್ರಿಯಾಗುವ ಅವಕಾಶವನ್ನು ವಂಚಿಸಿದವರು. ಮಂಡ್ಯ ಜಿಲ್ಲೆಯಲ್ಲಿ ಮತಯಾಚಿಸುತ್ತಿರುವುದು ಹಾಸ್ಯಸ್ಪದವಾಗಿದೆ. ಕಳೆದ ಸಾರ್ವತ್ರಿಕ ಲೋಕಸಭಾ ಚುನಾವಣೆಯಲ್ಲಿ ತಮ್ಮ ಪುತ್ರನ ಸೋಲಿನ ನಂತರ ಕಾವೇರಿ ಕೊಳ್ಳದ ರೈತರು ನೀರಿಗಾಗಿ ಮನವಿ ಮಾಡಿದಾಗ ದೆಹಲಿಯಲ್ಲಿ ಕೀ ಇದೆ ನೀವು ಅಲ್ಲಿಯೇ ನೀರನ್ನು ಬಿಡಿಸಿಕೊಳ್ಳಬೇಕು ಎಂದವರಿಗೆ ಮಂಡ್ಯ ಜಿಲ್ಲೆಯ ಜನತೆಯ ಮತಯಾಚಿಸಲು ಯಾವ ನೈತಿಕ ಹಕ್ಕಿದೆ? ಎಂದು ಪ್ರಶ್ನಿಸಿದರು.
2016 ರಿಂದ 2021ರ ವರೆಗೆ ಮಂಡ್ಯ ಜಿಲ್ಲಾ ಪಂಚಾಯಿತಿಯಲ್ಲಿ ಜೆಡಿಎಸ್ ಅಧಿಕಾರದಲ್ಲಿದ್ಧಾಗ ಸುಮಾರು 40 ತಿಂಗಳ ಕಾಲ ಯಾವುದೇ ಸಾಮಾನ್ಯ ಸಭೆ ನಡೆಸದೇ, ಜಿಲ್ಲೆಯ ಅಭಿವೃದ್ಧಿಯನ್ನು ಕಡೆಗಣಿಸಿದ್ದವರಿಗೆ ಜಿಲ್ಲೆಯ ಅಭಿವೃದ್ಧಿ ಬಗ್ಗೆ ಮಾತನಾಡುವ ನೈತಿಕ ಹಕ್ಕಿದೆಯೇ? 113 ದಿನಗಳ ಕಾಲ ಕಬ್ಬಿನ ಬೆಲೆಗೆ ಸಂಬಂಧಪಟ್ಟಂತೆ ಮಂಡ್ಯದಲ್ಲಿ ಕಬ್ಬು ಬೆಳೆಗಾರರು ಮಾಡಿದ ಹೋರಾಟಕ್ಕೆ ಬೆಂಬಲ ನೀಡದವರಿಗೆ ರೈತರ ಮತಯಾಚಿಸುವ ಹಕ್ಕಿದೆಯೇ? ಎಂದು ವಾಗ್ದಾಳಿ ನಡೆಸಿದರು.
ಮಂತ್ರಿ ಸ್ಥಾನ ನೀಡದೆ ವಂಚನೆ
2018ರ ಕಾಂಗ್ರೆಸ್ ಬೆಂಬಲಿತ ಸಮ್ಮಿಶ್ರ ಸರ್ಕಾರದ ಮುಖ್ಯಮಂತ್ರಿಯಾಗಿದ್ದಾಗ ದಲಿತರಿಗೆ, ಹಿಂದುಳಿದವರಿಗೆ, ಮಹಿಳೆಯರಿಗೆ ಯಾವುದೇ ಮಂತ್ರಿ ಸ್ಥಾನ ನೀಡದೆ ವಂಚಿಸಿದವರಿಗೆ ಈ ವರ್ಗದ ಮತವನ್ನು ಕೇಳುವ ಯಾವುದೇ ನೈತಿಕತೆ ಇದೆಯೇ….? ಬಹುಮುಖ್ಯವಾಗಿ ರೈತರ ಹೆಸರಿನಲ್ಲಿ ಮತಯಾಚಿಸುವ ನೀವು ಕೇಂದ್ರದ ಕರಾಳ ಕೃಷಿ ಕಾಯ್ದೆಗಳಿಗೆ ನಮ್ಮ ರಾಜ್ಯದಿಂದ ಬೆಂಬಲ ವ್ಯಕ್ತಪಡಿಸಿದ್ದು ಸುಳ್ಳೇ. ಹಲವಾರು ತಿಂಗಳು ಕಾಲ ನಡೆದ ರೈತ ಹೋರಾಟದಲ್ಲಿ ನೂರಾರು ರೈತರು ಹುತಾತ್ಮರಾಗಿದ್ದು ಸುಳ್ಳೇ ? ಹೀಗಿರುವಾಗ ರೈತರ ಬಳಿ ಮತಯಾಚಿಸಲು ನಿಮಗೆ ಯಾವ ನೈತಿಕ ಹಕ್ಕಿದೆ? ದಯಮಾಡಿ ಈ ಎಲ್ಲಾ ಪ್ರಶ್ನೆಗಳಿಗೆ ಉತ್ತರ ನೀಡುವ ಮೂಲಕ ಮತಯಾಚಿಸಿ ಎಂದು ಒತ್ತಾಯಿಸಿದರು.
ಘೋಷ್ಟಿಯಲ್ಲಿ ಕಾಂಗ್ರೆಸ್ ಕಾರ್ಯಾಧ್ಯಕ್ಷ ಎಂ.ಎಸ್.ಚಿದಂಬರ್, ಮುಖಂಡರಾದ ವಿಜಯಲಕ್ಷ್ಮಿ ರಘುನಂದನ್, ಕೆ.ಹೆಚ್.ನಾಗರಾಜು, ಮುಜಾಹಿದ್ ಪಾಷ ಹಾಗೂ ಕೆ.ಎಂ.ರಾಮಕೃಷ್ಣ ಉಪಸ್ಥಿತರಿದ್ದರು.