ಹಾಸನ ಲೋಕಸಭಾ ಕ್ಷೇತ್ರದಲ್ಲಿ ಮೈತ್ರಿ ಕಾರಣದಿಂದ ಪ್ರಜ್ವಲ್ ರೇವಣ್ಣ ಸೋಲಿನ ಭೀತಿ ಎದುರಿಸಬೇಕಾಗಿದೆ ಎಂದು ಹೆಚ್.ಡಿ. ರೇವಣ್ಣ ಮುನಿಸಿಕೊಂಡಿದ್ದಾರೆ ಎಂದು ರಾಜಕೀಯ ಪಡಸಾಲೆಯಲ್ಲಿ ಚರ್ಚೆಯಾಗುತ್ತಿದೆ.
ಬಿಜೆಪಿ ಜೊತೆ ಮೈತ್ರಿ ಮಾಡಿಕೊಂಡಿರುವ ಜೆಡಿಎಸ್ ಪಕ್ಷಕ್ಕೆ ಮೈತ್ರಿಯೇ ಮುಳುವಾಗುವ ಸಾಧ್ಯತೆ ಇದೆ ಎಂಬ ಮಾತು ದಟ್ಟವಾಗುತ್ತಿದ್ದಂತೆ ರೇವಣ್ಣ ಭುಸುಗುಡುತ್ತಿದ್ದಾರೆ ಎಂಬ ಮಾತುಗಳು ಜೆಡಿಎಸ್ ಪಡಸಾಲೆಯಿಂದ ಕೇಳಿ ಬರುತ್ತಿದೆ.
ಮೈತ್ರಿ ಆಗದೆ ಇದ್ದಿದ್ದರೆ ಬಿಜೆಪಿಯು ಸಹ ಅಭ್ಯರ್ಥಿಯನ್ನು ಕಣಕ್ಕಿಳಿಸಿದ್ದರೆ, ಮಾಜಿ ಶಾಸಕ ಪ್ರೀತಂಗೌಡ ಅವರೆಲ್ಲ ಬಿಜೆಪಿ ಅಭ್ಯರ್ಥಿ ಪರ ಕೆಲಸ ಮಾಡುತ್ತಿದ್ದರು. ಇದರಿಂದ ಕಾಂಗ್ರೆಸ್ ಮತ್ತು ಬಿಜೆಪಿ ನಡುವೆ ಮತ ವಿಭಜನೆಯಾಗಿ ಜೆಡಿಎಸ್ ಗೆ ಅನುಕೂಲ ಆಗುತ್ತಿತ್ತು ಎನ್ನುವುದು ರೇವಣ್ಣ ಅವರ ವಾದವಾಗಿದೆ.
ಕಾಂಗ್ರೆಸ್ ಪರ ಕೆಲಸ
ಈಗ ಬಿಜೆಪಿಯಿಂದ ಅಭ್ಯರ್ಥಿ ಇಲ್ಲದ ಕಾರಣ ಪ್ರೀತಂಗೌಡ ಸೇರಿದಂತೆ ಬಿಜೆಪಿಯ ಬಹಳಷ್ಟು ನಾಯಕರು ಕಾಂಗ್ರೆಸ್ ಪರವಾಗಿ ಕೆಲಸ ಮಾಡುತ್ತಿದ್ದು, ಇದು ಪ್ರಜ್ವಲ್ ರೇವಣ್ಣ ಅವರ ಗೆಲುವಿಗೆ ತೊಡಕಾಗಬಹುದು ಎಂದು ರೇವಣ್ಣ ಮೈತ್ರಿ ಬಗ್ಗೆ ಮುನಿಸಿಕೊಂಡಿದ್ದಾರೆ ಎಂದು ಚರ್ಚೆಯಾಗುತ್ತಿದೆ.
ರೇವಣ್ಣ ಮಾತುಗಳಿಗೆ ಇಂಬು ಕೊಟ್ಟಂತೆ ಪ್ರೀತಂಗೌಡ ಹಿಂಬಾಲಕ ಪುರುಷೋತ್ತಮ್ ಕಾಂಗ್ರೆಸ್ ಅಭ್ಯರ್ಥಿ ಶ್ರೇಯಸ್ ಪಟೇಲ್ ಜೊತೆ ಕಾಣಿಸಿಕೊಂಡಿರುವುದು ಪ್ರಮುಖ ಸಾಕ್ಷಿಯಾಗಿದೆ. ಅಲ್ಲದೆ ಪ್ರೀತಂಗೌಡ ಕೂಡ ಹೊಳೆ ನರಸೀಪುರಕ್ಕಿಂತ ಒಂದು ಮತ ಲೀಡ್ ಕೊಡಿಸದಿದ್ದರೆ ಕೇಳಿ ಎಂದು ವ್ಯಂಗ್ಯವಾಗಿ ಹೇಳಿರುವುದು ಕೂಡ ರೇವಣ್ಣ ಅವರ ಪಿತ್ತ ನೆತ್ತಿಗೇರುವಂತೆ ಮಾಡಿದೆ.
ಕಳೆದ ವಿಧಾನಸಭಾ ಚುನಾವಣೆಯಲ್ಲಿ ರೇವಣ್ಣ ಹೊಳೆ ನರಸೀಪುರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಶ್ರೇಯಸ್ ಪಟೇಲ್ ವಿರುದ್ಧ ಕೇವಲ ಮೂರು ಸಾವಿರ ಮತಗಳ ಅಂತರದಿಂದ ಗೆಲುವು ಸಾಧಿಸಿದ್ದರು. ಈ ಬಾರಿ ಶ್ರೇಯಸ್ ಪಟೇಲ್ ಪರ ಅನುಕಂಪ ಇರುವುದರಿಂದ ಹೊಳೆ ನರಸೀಪುರದಲ್ಲಿ ಲೀಡ್ ಬರುವುದು ಕಷ್ಟ. ಇದನ್ನು ಅರಿತೇ ಪ್ರೀತಂಗೌಡ ಈ ರೀತಿ ವ್ಯಂಗ್ಯ ಮಾತುಗಳನ್ನಾಡಿದ್ರ ಎಂದು ರೇವಣ್ಣ ಸೇರಿದಂತೆ ಜೆಡಿಎಸ್ ಕಾರ್ಯಕರ್ತರು ಸಿಟ್ಟಾಗಿದ್ದಾರೆ ಎಂಬ ಮಾತುಗಳು ಹಾಸನದಲ್ಲಿ ಜೋರಾಗಿಯೇ ಕೇಳಿ ಬರುತ್ತಿದೆ.