ಮಳೆ ಇಲ್ಲದ ಸಂಕಷ್ಟದ ಸಮಯದಲ್ಲೂ ಕೆ.ಆರ್.ಎಸ್ ಅಣೆಕಟ್ಟೆಯಿಂದ ತಮಿಳುನಾಡಿಗೆ ನೀರು ಹರಿಸುತ್ತಿರುವುದನ್ನು ಖಂಡಿಸಿ ಆ.22ರಂದು ಬೆಳಿಗ್ಗೆ 10-30 ಗಂಟೆ ಮಂಡ್ಯ ತಾಲ್ಲೂಕಿನ ಇಂಡುವಾಳು ಬಳಿ ರಾಷ್ಟೀಯ ಹೆದ್ದಾರಿ -275ರ ಹೆದ್ದಾರಿ ತಡೆ ನಡೆಸಲಾಗುದು ಎಂದು ಕರ್ನಾಟಕ ರಾಜ್ಯ ರೈತಸಂಘ (ಮೂಲ ಸಂಘಟನೆ) ಜಿಲ್ಲಾಧ್ಯಕ್ಷ ಇಂಡುವಾಳು ಚಂದ್ರಶೇಖರ್ ತಿಳಿಸಿದರು.
ಮಂಡ್ಯದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಜಿಲ್ಲೆಯ ರೈತರಿಗೆ ನೀರಿಲ್ಲ, ಮಳೆ ಅಭಾವದಿಂದ ಪೂರ್ಣ ಪ್ರಮಾಣದಲ್ಲಿ ಜಲಾಶಯ ತುಂಬದಿದ್ದರೂ ತಮಿಳುನಾಡಿಗೆ ನೀರು ಹರಿಸುತ್ತಿರುವುದು ಖಂಡನೀಯ. ರಾಜ್ಯ ಸರ್ಕಾರ ಸಲ್ಲದ ನೆಪಮಾತ್ರ ಮೀಟಿಂಗ್ ಮಾಡಿ ಕಟ್ಟು ಪದ್ಧತಿ (ಆನ್ ಅಂಡ್ ಆಫ್) ಅಡಿಯಲ್ಲಿ ಜಿಲ್ಲೆಯ ರೈತರಿಗೆ ನೀರು ಕೊಡಲು ತೀರ್ಮಾನ ಪ್ರಕಟಿಸಿ, ತಮಿಳುನಾಡಿಗೆ ನೀರು ಬಿಟ್ಟ ಮೇಲೆ, ನಮಗೆ ನೀರು ಎಲ್ಲಿ ಉಳಿಯುತ್ತದೆ ಎಂದು ಪ್ರಶ್ನಿಸಿದರು.
ಈ ಬಾರಿಯ ಮುಂಗಾರು ಬೆಳೆಗೆ ಈ ಕಟ್ಟುಪದ್ಧತಿ ನೀರಿನಿಂದ ಯಾವುದೇ ಪ್ರಯೋಜನವಿಲ್ಲ, ಒಂದೆಡೆ ಭತ್ತದ ಸಸಿಮಾಡಿ ಒಣಗುತ್ತಿದ್ದರೆ, ಬೆಳೆದು ನಿಂತಿರುವ ಕಬ್ಬು, ತೆಂಗು, ರೇಷ್ಮೆ ಇಳುವರಿಯಲ್ಲಿ ಕುಂಠಿತವಾಗುತ್ತಿದೆ. ನೀರಿಲ್ಲದೆ ಒಣಗುತ್ತಿರುವ ಕೆರೆಕಟ್ಟೆ ಕುಂಟೆಗಳಲ್ಲಿ ನೀರು ತುಂಬಿಸುವ ಕಾರ್ಯ ಪ್ರಗತಿಯಾಗಿಲ್ಲ. ಇಂತಹ ಘೋರ ಸಂದಿಗ್ಧ ಪರಿಸ್ಥಿತಿಯಲ್ಲಿ ರೈತರಿರುವಾಗ ಇದಾವುದನನ್ನೂ ಲೆಕ್ಕಕ್ಕೆ ತೆಗೆದುಕೊಳ್ಳದೇ ತಮಿಳುನಾಡಿಗೆ ನೀರು ಹರಿಸುತ್ತಿರುವುದು ಸರಿಯಲ್ಲ ಎಂದು ಕಿಡಿಕಾರಿದರು.
ಮೆಟ್ಟೂರು ಜಲಾಶಯಕ್ಕೆ ಸುಪ್ರೀಂಕೋರ್ಟ್ನ ಭೂತ ತೋರಿಸಿ ತಮಿಳುನಾಡಿಗೆ ಸುಮಾರು 13,000 ಕ್ಯೂಸೆಕ್ಸ್ ನೀರು ದಿನಗಟ್ಟಲೆ ಬಿಡುತ್ತಿರುವ ರಾಜ್ಯ ಸರ್ಕಾರದ ನಿಲುವು ಮಲತಾಯಿ ಧೋರಣೆಯೇ ಸರಿ. ಈಗಾಗಲೇ ಕಾವೇರಿ ಜಲಾಶಯ ಅಣೆಕಟ್ಟುಗಳಿಂದ ವಾಡಿಕೆ ಅಥವಾ ಕಾವೇರಿ ಜಲನ್ಯಾಯ ಮಂಡಳಿ ಆದೇಶದ ರೀತಿಯಂತೆ ಸುಮಾರು 32 ಟಿ.ಎಂ.ಸಿ. 1.80 ಲಕ್ಷ ಎಕರೆ ಕುರುವೈ ಬೆಳೆಗೆ ಒಂದು ವರ್ಷದ ಅವಧಿಗೆ ಸಾಕಾಗುವಷ್ಟು ನೀರಿದ್ದರೂ ತಮಿಳುನಾಡು ಸರ್ಕಾರ ನೀರಿನ ದುರ್ಬಳಕೆ ಮಾಡಿಕೊಂಡು ತೀರ್ಪಿನ ಉಲ್ಲಂಘನೆ ಮಾಡಿದೆ ಎಂದು ಕಿಡಿಕಾರಿದರು.
ಗೋಷ್ಠಿಯಲ್ಲಿ ರೈತ ಮುಖಂಡರಾದ ಮಂಜೇಶ್ ಗೌಡ, ಬೋರಾಪುರ ಶಂಕರೇಗೌಡ, ಹೆಚ್.ಜಿ.ಪ್ರಭುಲಿಂಗು ಮತ್ತಿತರರಿದ್ದರು.