ಪಂಚಾಯಿತಿಯಲ್ಲಿ ವಿನಾಕಾರಣ ರಾಜಕಾರಣ ಬೆರೆಸಬಾರದು ಎಂಬ ಹಿತದೃಷ್ಟಿಯಿಂದ ಪಕ್ಷಾತೀತವಾಗಿ ಅಧ್ಯಕ್ಷ-ಉಪಾಧ್ಯಕ್ಷರನ್ನು ಸರ್ವಾನುಮತದಿಂದ ಅವಿರೋಧವಾಗಿ ಆಯ್ಕೆ ಮಾಡುವ ಮೂಲಕ ಸರ್ವ ಪಕ್ಷಗಳ ಸದಸ್ಯರು ಪಾಂಡವಪುರ ತಾಲೂಕಿನ ಹಿರೇಮರಳಿ ಗ್ರಾಮ ಪಂಚಾಯಿಯನ್ನು ಮಾದರಿಯಾಗಿ ಮಾಡಲು ಮುಂದಾಗಿದ್ದಾರೆ.
ಒಟ್ಟು 20 ಸದಸ್ಯರ ಬಲವನ್ನು ಹೊಂದಿರುವ ಹಿರೇಮರಳಿ ಪಂಚಾಯಿತಿಗೆ ಮುಂದುವರೆದ ಅವಧಿಗೆ ಸರ್ಕಾರ ಮೀಸಲಾತಿ ಪ್ರಕಟಿಸಿದ ಹಿನ್ನೆಲೆಯಲ್ಲಿ ಅಧ್ಯಕ್ಷ-ಉಪಾಧ್ಯಕ್ಷ ಸ್ಥಾನಕ್ಕೆ ಚುನಾವಣೆ ನಿಗದಿಯಾಗಿತ್ತು.
ಅಧ್ಯಕ್ಷ-ಉಪಾಧ್ಯಕ್ಷ ಸ್ಥಾನಗಳಿಗೆ ಪಕ್ಷಾತೀತವಾಗಿ ಎಸ್.ಚೇತನಾ ಹಾಗೂ ಎಚ್.ಎನ್.ನವೀನ ನಾಮಪತ್ರ ಸಲ್ಲಿಸಿದ್ದರು. ಬೇರೆ ಯಾರೂ ನಾಮಪತ್ರ ಸಲ್ಲಿಸದ ಕಾರಣ ಇವರಿಬ್ಬರ ಅವಿರೋಧ ಆಯ್ಕೆಯನ್ನು ಚುನಾವಣಾಧಿಕಾರಿಯಾಗಿ ಕಾರ್ಯ ನಿರ್ವಹಿಸಿದ ಕಾವೇರಿ ನೀರಾವರಿ ನಿಗಮದ ಎಇಇ ಜಯರಾಂ ಪ್ರಕಟಿಸಿದರು. ನೂತನ ಅಧ್ಯಕ್ಷ-ಉಪಾಧ್ಯಕ್ಷರ ಆಯ್ಕೆ ಘೋಷಣೆಯಾಗುತ್ತಿದ್ದಂತೆಯೇ ಬೆಂಬಲಿತರು ಪಟಾಕಿ ಸಿಡಿಸಿ ಸಿಹಿ ವಿತರಿಸಿ ಸಂಭ್ರಮಿಸಿದರು.
ಈ ವೇಳೆ ಗ್ರಾ.ಪಂ ಮಾಜಿ ಅಧ್ಯಕ್ಷೆ ಜಯಲಕ್ಷ್ಮೀ, ಮಾಜಿ ಉಪಾಧ್ಯಕ್ಷರಾದ ವಿ.ಶ್ವೇತಾ, ಸವಿತಾ, ಸದಸ್ಯರಾದ ಯಶ್ವಂತ್, ಕೃಷ್ಣೇಗೌಡ, ಕುಮಾರಸ್ವಾಮಿ, ಸುನೀಲ್, ವಿಜಯಕುಮಾರ್, ಹೇಮಾವತಿ, ರತ್ನಮ, ಪಿಡಿಒ ಮಹದೇವು, ಮುಖಂಡರಾದ ಎಚ್.ಕೆ.ನಾರಾಯಣ, ಚಂದ್ರು, ಕೃಷ್ಣ ಇತರರು ನೂತನ ಅಧ್ಯಕ್ಷ-ಉಪಾಧ್ಯಕ್ಷರನ್ನು ಅಭಿನಂದಿಸಿದರು.