ಮಂಡ್ಯ ನಗರದ ಸ್ವರ್ಣಸಂದ್ರ ಬಡಾವಣೆಯಲ್ಲಿ ಮನೆಯೊಂದಕ್ಕೆ ನುಗ್ಗಿದ ಕಳ್ಳರು ಚಿನ್ನಾಭರಣ ಹಾಗೂ ನಗದು ದೋಚಿ ಪರಾರಿಯಾಗಿರುವ ಘಟನೆ ಕಳೆದ ರಾತ್ರಿ ಸಂಭವಿಸಿದೆ.
ಮಂಡ್ಯದ ಸೆಂಟ್ರಲ್ ಪೊಲೀಸ್ ಠಾಣೆಯಲ್ಲಿ ಪೇದೆ ಯಾಗಿರುವ ರೇವಣ್ಣ ಎಂಬುವರ ಅತ್ತೆ ಸ್ವರ್ಣಸಂದ್ರ ನಿವಾಸಿ ವಸಂತಮ್ಮ ಎಂಬುವರ ಮನೆಗೆ ಸೋಮವಾರ ರಾತ್ರಿ ನುಗ್ಗಿರುವ ಕಳ್ಳರು 2 ಲಕ್ಷ ರೂ. ನಗದು ಹಾಗೂ ಒಂದು ಲಕ್ಷ ರೂ ಮೌಲ್ಯದ ಚಿನ್ನಾಭರಣವನ್ನು ಕದ್ದು ಪರಾರಿಯಾಗಿದ್ದಾರೆ.
ವಸಂತಮ್ಮ ಅವರು ತಮ್ಮ ಮಗನೊಂದಿಗೆ ಅಳಿಯ ರೇವಣ್ಣನ ಮನೆಗೆ ಊಟಕ್ಕೆಂದು ತೆರಳಿ ಅಲ್ಲೇ ವಾಸ್ತವ್ಯ ಹೂಡಿದ್ದರು.
ಮನೆಯಲ್ಲಿ ಯಾರೂ ಇಲ್ಲದ್ದನ್ನು ಗಮನಿಸಿರುವ ಕಳ್ಳರು ಕಳೆದ ರಾತ್ರಿ ಮನೆಗೆ ನುಗ್ಗಿ ಒಂದು ಚೈನ್,ಒಂದು ಉಂಗುರ ಹಾಗೂ ಎರಡು ಲಕ್ಷ ನಗದು ದೋಚಿ ಪರಾರಿಯಾಗಿದ್ದಾರೆ.
ಸ್ಥಳಕ್ಕೆ ಸರ್ಕಲ್ ಇನ್ಸ್ ಸ್ಪೆಕ್ಟರ್ ಸಂತೋಷ್ ಹಾಗೂ ಪೂರ್ವ ಪೊಲೀಸ್ ಠಾಣೆಯ ಸಿಬ್ಬಂದಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದರು. ಈ ಸಂಬಂಧ ಪೂರ್ವ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.