ಸದಾ ಸಾರ್ವಜನಿಕ ಸೇವೆಯಲ್ಲಿ ತೊಡಗಿರುವ ಜಿಲ್ಲೆಯ ಗೃಹ ರಕ್ಷಕರು (ಹೋಮ್ ಗಾರ್ಡ್ಸ್) ದೈಹಿಕ ಹಾಗೂ ಮಾನಸಿಕ ಆರೋಗ್ಯ ಕಾಪಾಡಿಕೊಳ್ಳಿ ಎಂದು ಅಪರ ಪೊಲೀಸ್ ವರಿಷ್ಠಾಧಿಕಾರಿ ಸಿ. ಈ ತಿಮ್ಮಯ್ಯ ಅವರು ಸಲಹೆ ನೀಡಿದರು.
ಮಂಡ್ಯದ ನಗರದ ಹರ್ಡಿಕರ್ ಭವನದಲ್ಲಿ ನಡೆದ ಗೃಹ ರಕ್ಷಕದಳದ 61 ನೇ ಉತ್ಥಾನ ದಿನಾಚರಣೆಯನ್ನು ಉದ್ಘಾಟಿಸಿ ಮಾತನಾಡಿದರು.
ಗೃಹ ರಕ್ಷಕರು ತಮ್ಮ ಕೆಲಸವನ್ನು ಅಚ್ಚುಕಟ್ಟಾಗಿ ನಿರ್ವಹಿಸುತ್ತಾರೆ. ಕೆಲಸದಲ್ಲಿ ವಿಶೇಷ ಕಾಳಜಿ ಇರುವ ವ್ಯಕ್ತಿಗಳು ಗೃಹ ರಕ್ಷಕರು, ಸಾರ್ವಜನಿಕರು ಗೃಹ ರಕ್ಷಕರನ್ನು ಕೇವಲವಾಗಿ ನೋಡುತ್ತಾರೆ. ಅದು ಬಿಡಬೇಕು. ಗೃಹ ರಕ್ಷಕ ಪೊಲೀಸ್ ಇಲಾಖೆಯ ಅಂಗಸಂಸ್ಥೆಯಾಗಿದೆ. ಇದರ ಬಗ್ಗೆ ಪೊಲೀಸ್ ಇಲಾಖೆ ಸಾರ್ವಜನಿಕರಲ್ಲಿ ಅರಿವು ಮೂಡಿಸುವ ಕೆಲಸ ಮಾಡುತ್ತಿದೆ ಎಂದರು.
ಗೃಹ ರಕ್ಷಕರು ವೈಯಕ್ತಿಕ ಹಿತಾಸಕ್ತಿ ಬದಿಗಿಟ್ಟು ಸಾರ್ವಜನಿಕ ಸೇವೆ ಮಾಡಬೇಕು. ಜೊತೆಗೆ ಕ್ರೀಡೆ ಮತ್ತು ವ್ಯಾಯಮ ಒಂದು ದಿನಕ್ಕೆ ಸೀಮಿತವಾಗಬಾರದು. ದೈನಂದಿನ ಒಂದು ಗಂಟೆ ಕ್ರೀಡೆ ಹಾಗೂ ವ್ಯಾಯಾಮಕ್ಕೆ ಗಮನಕೊಟ್ಟು ತಮ್ಮ ಆರೋಗ್ಯವನ್ನು ಕಾಪಾಡಿಕೊಳ್ಳಿ ಎಂದರು.
ಗೃಹ ರಕ್ಷಕದಳದ ಜಿಲ್ಲಾ ಸಮಾದೇಷ್ಟ ವಿನೋಧ್ ಖನ್ನಾ ಮಾತನಾಡಿ, ಸ್ವತಂತ್ರ ಪೂರ್ವದಲ್ಲಿ ಸೇನೆಯಲ್ಲಿ ವಿರೋಧಿ ಸೈನ್ಯವನ್ನು ಎದುರಿಸಲು ಸೈನಿಕರು ಇಲ್ಲದಿರುವಾಗ ಭಾರತದಲ್ಲಿ ಸ್ವಯಂಪ್ರೇರಿತವಾಗಿ ಹುಟ್ಟಿಕೊಂಡಿದ್ದು ಗೃಹ ರಕ್ಷಕ ದಳ. ಮೊದಲು ಯಾವುದೇ ಸಂಬಳ, ಭದ್ರತೆ ಇಲ್ಲದೆ ಸ್ವಯಂ ಪ್ರೇರಿತವಾಗಿ ದುಡಿಯುತ್ತಿದ್ದರು, ತದನಂತರದಲ್ಲಿ ಸರ್ಕಾರ ಗೃಹ ರಕ್ಷಕರಿಗೆ ಶಕ್ತಿ ತುಂಬಿತು ಎಂದರು.
ಜಿಲ್ಲೆಯಲ್ಲಿ ಇದೀಗ 20 ಸಾವಿರ ಗೃಹ ರಕ್ಷಕರು, 4 ಸಾವಿರ ಗೃಹ ರಕ್ಷಕಿಯರು ಇದ್ದಾರೆ. ನಮ್ಮ ಜಿಲ್ಲೆಯ ಗೃಹ ರಕ್ಷಕ ಅಧಿಕಾರಿಗಳು ಹೊರ ಜಿಲ್ಲೆಗಳಿಗೆ ಹೋಗಿ ಕೆಲಸ ಮಾಡಿ ಬಂದವರು ಇದ್ದಾರೆ. ಅವರಿಗೆ ನಮ್ಮ ಅಭಿನಂದನೆಗಳು ಎಂದರು.
ಗೃಹ ರಕ್ಷಕ ಸಿಬ್ಬಂದಿಯವರು ಕಡ್ಡಾಯವಾಗಿ ಸಮವಸ್ತ್ರ ಧರಿಸಿ ಕೆಲಸ ಮಾಡಬೇಕು. ಇದರಿಂದ ಸಾರ್ವಜನಿಕರಲ್ಲಿ ಗೃಹ ರಕ್ಷಕರ ಬಗ್ಗೆ ಗೌರವವು ಹೆಚ್ಚುತ್ತದೆ ಎಂದರು. ಕಾರ್ಯಕ್ರಮದಲ್ಲಿ ಪೊಲೀಸ್ ಅಧಿಕಾರಿಗಳು, ಗೃಹ ರಕ್ಷಕ ದಳದವರು ಉಪಸ್ಥಿತರಿದ್ದರು.
ವೇದಿಕೆ ಕಾರ್ಯಕ್ರಮಕ್ಕೂ ಮುನ್ನ ಅಪರ ಪೊಲೀಸ್ ಅಧೀಕ್ಷಕ ತಿಮ್ಮಯ್ಯ ಅವರು ಜಿಲ್ಲಾ ಕ್ರೀಡಾಂಗಣದ ಮುಂಭಾಗದ ಗೃಹ ರಕ್ಷಕ ದಳದ ರ್ಯಾಲಿಗೆ ಚಾಲನೆ ನೀಡಿದರು