ಮಂಡ್ಯದ ಖಾಸಗಿ ಆಸ್ಪತ್ರೆಯು ಬಯೋ ಮೆಡಿಕಲ್ ತ್ಯಾಜ್ಯವನ್ನು ಪ್ರತ್ಯೇಕವಾಗಿ ಸಂಸ್ಕರಿಸದೇ ನಗರಸಭೆ ತ್ಯಾಜ್ಯ ದೊಂದಿಗೆ ವಿಲೇವಾರಿ ಮಾಡಿದ್ದರಿಂದ ಪೌರಕಾರ್ಮಿಕನ ಕೈಗಳಿಗೆ ಗಾಯಗಳಾಗಿರುವ ಘಟನೆ ಸೋಮವಾರ ಮಂಡ್ಯದಲ್ಲಿ ನಡೆದಿದೆ.
ನಿಯಮಾನುಸಾರ ಆಸ್ಪತ್ರೆಯ ತ್ಯಾಜ್ಯವನ್ನು ಪ್ರತ್ಯೇಕವಾಗಿ ವಿಲೇವಾರಿ ಮಾಡಬೇಕು. ಆದರೆ ಆರೋಗ್ಯ ನಿರೀಕ್ಷಕರ ಮತ್ತು ಪರಿಸರ ಅಭಿಯಂತರರ ನಿರ್ಲಕ್ಷ್ಯದ ಪರಿಣಾಮವಾಗಿ ಮಂಡ್ಯ ನಗರದ ಬಹುತೇಕ ಖಾಸಗಿ ನರ್ಸಿಂಗ್ ಹೋಂಗಳು ತಮ್ಮ ಆಸ್ಪತ್ರೆಯ ಬಯೋ ತ್ಯಾಜ್ಯವನ್ನು ನಗರಸಭೆಯ ಕಸದೊಂದಿಗೆ ವಿಲೇವಾರಿ ಮಾಡುತ್ತಿದೆ, ಈ ಮೂಲಕ, ತಮ್ಮ ಜವಾಬ್ದಾರಿಯಿಂದ ನುಣುಚಿಕೊಳ್ಳುತ್ತಿವೆ ಎಂದು ಪೌರ ಕಾರ್ಮಿಕರ ಸಂಘದ ಅಧ್ಯಕ್ಷ ಎಂ.ಬಿ.ನಾಗಣ್ಣಗೌಡ ದೂರಿದ್ದಾರೆ.
ಆಸ್ಪತ್ರೆಯ ತ್ಯಾಜ್ಯವನ್ನು ಬೇಕಾಬಿಟ್ಟಿ ವಿಲೇವಾರಿ ಮಾಡುತ್ತಿರುವುದರಿಂದ ಪೌರಕಾರ್ಮಿಕರ ಆರೋಗ್ಯದ ಮೇಲೆ ಗಂಭೀರ ಪರಿಣಾಮಗಳಾಗುತ್ತಿವೆ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಗಳು ಮತ್ತು ಮಂಡ್ಯ ನಗರಸಭೆ ಆಯುಕ್ತರು ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಅವರು ಆಗ್ರಹಿಸಿದ್ದಾರೆ.