ಮಂಡ್ಯ ರೈತರ ಹಿತ ಕಡೆಗಣಿಸಿ ತಮಿಳುನಾಡಿಗೆ ನೀರು ಹರಿಸುತ್ತಿರುವುದನ್ನು ಖಂಡಿಸಿ ಆ.23ರಂದು ಮಂಡ್ಯನಗರದ ವಿಶ್ವೇಶ್ವರಯ್ಯ ಪ್ರತಿಮೆ ಎದುರು ನೂರಾರು ರೈತರೊಂದಿಗೆ ಒಂದು ದಿನದ ಉಪವಾಸ ಸತ್ಯಾಗ್ರಹ ನಡೆಸಲಾಗುವುದು ಎಂದು ಭಾರತೀಯ ಕಿಸಾನ್ ಸಂಘದ ಕರ್ನಾಟಕ ದಕ್ಷಿಣ ಪ್ರಾಂತ ಪ್ರಧಾನ ಕಾರ್ಯದರ್ಶಿ ಹಾಡ್ಯ ರಮೇಶ್ ರಾಜು ತಿಳಿಸಿದರು.
ಮಂಡ್ಯದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ಬಾರಿ ಮುಂಗಾರು ಮಳೆಯ ಕೊರತೆಯಿಂದಾಗಿ ಕೃಷ್ಣರಾಜ ಸಾಗರ ಆಣೆಕಟ್ಟು ಜಲಾಶಯ ಭರ್ತಿಯಾಗದೇ ಕೇವಲ 113 ಅಡಿಗೆ ಬರುವಷ್ಟರಲ್ಲಿ ಮಳೆ ನಿಂತು ಹೋಯಿತು. ಆದರೂ ಒಂದು ಅವಧಿಯ ಭತ್ತದ ಬೆಳೆಗೆ ತೊಂದರೆ ಆಗುವುದಿಲ್ಲ ಎಂಬ ಆಶಾಭಾವನೆಯಿಂದ ರೈತರು ಭತ್ತದ ಬಿತ್ತನೆಯಲ್ಲಿ ತೊಡಗಿದರು. ಆದರೆ ಈಗ ತಮಿಳುನಾಡಿಗೆ ನೀರು ಬಿಡುತ್ತಿರುವುದರಿಂದ ರೈತರು ತೀವ್ರ ರೀತಿ ತೊಂದರೆ ಎದುರಿಸುವಂತಾಗಿದೆ ಎಂದರು.
ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರದ ಅಧ್ಯಕ್ಷ ಎಸ್. ಮಸೂದ್ ಹುಸೇನ್ ಅವರ ಸಮ್ಮುಖದಲ್ಲಿ ನಡೆದ ಸಭೆಯಲ್ಲಿ ತಮಿಳುನಾಡಿಗೆ ತಕ್ಷಣಕ್ಕೆ ನೀರು ಹರಿಸಲೇಬೇಕು ಎನ್ನುವ ಒತ್ತಡ ಹಾಕಲಿಲ್ಲ. ಕುಡಿಯುವ ನೀರಿನ ಆದ್ಯತೆ ನೋಡಿಕೊಂಡು ಹಾಗೂ ಒಳ ಹರಿವಿನ ಪ್ರಮಾಣ ಗಮನಿಸಿ ಕೆಳಭಾಗದ ರಾಜ್ಯಕ್ಕೆ ನೀರು ಹರಿಸುವ ಬಗ್ಗೆ ಕರ್ನಾಟಕವೇ ನಿರ್ಧರಿಸಲಿ ಎಂದು ತಿಳಿಸಲಾಗಿದೆ, ಆದರೂ ತಮಿಳುನಾಡಿಗೆ ನೀರು ಹರಿಸುತ್ತಿರುವ ಸರಿಯಾದ ಕ್ರಮವಲ್ಲ ಎಂದರು.
ತಮಿಳುನಾಡಿಗೆ ನೀರು ಹರಿಸಲು ಸಾಧ್ಯವಾಗುತ್ತಿಲ್ಲ ಎಂದು ನ್ಯಾಯಾಲಯಕ್ಕೆ ಮನವರಿಕೆ ಮಾಡದೇ, ಪ್ರಾಧಿಕಾರದ ಆದೇಶವಿಲ್ಲದಿದ್ದರೂ ಜಲಾಶಯದಿಂದ ನೀರು ಬಿಡುವುದಕ್ಕೆ ಪ್ರಾರಂಭಿಸಿರುವುದರಿಂದ ಮುಂದೆ ಜನ ಜಾನುವಾರುಗಳಿಗೆ ಕುಡಿಯುವ ನೀರಿಗೂ ಕಷ್ಟವಾಗುತ್ತದೆ. ಈಗಾಗಲೇ ಬೆಳೆದ ಬೆಳೆಗಳು ಹಾಳಾಗುವ ಸಾಧ್ಯತೆ ಇರುತ್ತದೆ. ಆದ್ದರಿಂದ ಸರ್ಕಾರ ಈ ಕ್ರಮಗಳನ್ನು ಖಂಡಿಸಿ ಉಪವಾಸ ಸತ್ಯಾಗ್ರಹ ಹಮ್ಮಿಕೊಳ್ಳಲಾಗಿದೆ ಎಂದರು.
ಗೋಷ್ಠಿಯಲ್ಲಿ ಸಂಘದ ಮುಖಂಡರಾದ ಪಣಕನಹಳ್ಳಿ ವೆಂಕಟೇಶ್, ಬಿ.ಪಿ.ಅಪ್ಪಾಜಿ, ದಿವ್ಯ, ಪುಟ್ಟಮ್ಮ ಹಾಗೂ ಜಯರಾಂ ಉಪಸ್ಥಿತರಿದ್ದರು.